Headlines

Balaramana Dinagalu Review: ಬೆಂಗಳೂರು ಭೂಗತ ಜಗತ್ತಿನ ಇನ್ನೊಂದು ರೆಟ್ರೋ ಅಧ್ಯಾಯ ‘ಬಲರಾಮನ ದಿನಗಳು’ – Kannada News | Balaramana Dinagalu Movie Review KM Chaitanya reveals one more chapter of Bengaluru Underworld

ಬಲರಾಮನ ದಿನಗಳು

UA

  • Time – 151 Minutes
  • Released – June 26, 2026
  • Language – Kannada
  • Genre – Action, Crime, Drama, Romantic

Cast – ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಅವಿನಾಶ್, ರಮೇಶ್ ಇಂದಿರ, ಪ್ರತಾಪ್ ನಾರಾಯಣ್ ಮುಂತಾದವರು.

Director – ಕೆ.ಎಂ. ಚೈತನ್ಯ

ಬೆಂಗಳೂರಿನ ಭೂಗತ ಲೋಕದ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಅವುಗಳ ಪೈಕಿ ‘ಆ ದಿನಗಳು’ ಸಿನಿಮಾಗೆ ಇರುವ ಸ್ಥಾನ ವಿಶೇಷವಾದದ್ದು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಕೆ.ಎಂ. ಚೈತನ್ಯ ಅವರು ಈಗ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಮಾಡಿದ್ದಾರೆ. ಈ ಬಾರಿ ಕೂಡ ಅವರು ಬೆಂಗಳೂರಿನ ರೌಡಿಸಂ ಜಗತ್ತನ್ನು ತೆರೆಮೇಲೆ ತಂದಿದ್ದಾರೆ. ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಈ ಚಿತ್ರದಲ್ಲಿ ಬಲರಾಮನ ಪಾತ್ರ ಮಾಡಿದ್ದಾರೆ. 1980 ಮತ್ತು 1990ರ ಕಾಲಘಟ್ಟದಲ್ಲಿ ಇದ್ದ ಬೆಂಗಳೂರು ಭೂಗತ ಜಗತ್ತಿನ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕರು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಆ ದಿನಗಳು’, ‘ಸ್ಲಂ ಬಾಲ’, ‘ಎದೆಗಾರಿಕೆ’, ‘ಹೆಡ್ ಬುಷ್’ ಮುಂತಾದ ಸಿನಿಮಾಗಳನ್ನು ನೋಡಿದವರು ಈಗ ‘ಬಲರಾಮನ ದಿನಗಳು’ ಚಿತ್ರಕ್ಕೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ. ಅದರಲ್ಲೂ ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಅವರೇ ‘ಬಲರಾಮನ ದಿನಗಳು’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ಅದೇ ಶೇಡ್ ಕಾಣಿಸಿದೆ. ಆದರೆ ಕೆಲವು ಬದಲಾವಣೆಗಳು ಕೂಡ ಇವೆ.

ಆ ಕಾಲದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಕುಖ್ಯಾತಿ ಪಡೆದಿದ್ದ ಪಾತ್ರಗಳು ‘ಬಲರಾಮನ ದಿನಗಳು’ ಸಿನಿಮಾದಲ್ಲೂ ಪ್ರೇಕ್ಷಕರ ಎದುರು ಬರುತ್ತವೆ. ಹಾಗಿದ್ದರೂ ಕೂಡ ಇಲ್ಲಿ ಬಲರಾಮನೇ ಕೇಂದ್ರ ಬಿಂದು. ರೌಡಿಸಂ ಜಗತ್ತಿಗೆ ಆತನ ಎಂಟ್ರಿ ಹೇಗೆ ಆಯಿತು? ಆತನ ಹೆಸರು ಯಾವ ಮಟ್ಟಕ್ಕೆ ಬೆಳೆಯಿತು? ಅವನ ಅಂತ್ಯ ಹೇಗಾಯಿತು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ.

ಕೆ.ಎಂ. ಚೈತನ್ಯ ಅವರ ನಿರ್ದೇಶನ ಎಂಬ ಕಾರಣಕ್ಕೆ ‘ಆ ದಿನಗಳು’ ಚಿತ್ರವನ್ನೇ ತಲೆಯಲ್ಲಿ ಇಟ್ಟುಕೊಂಡು ‘ಬಲರಾಮನ ದಿನಗಳು’ ಸಿನಿಮಾವನ್ನು ನೋಡಿದರೆ ಪ್ರೇಕ್ಷಕರಿಗೆ ಒಂದು ಪ್ರಮುಖವಾದ ಬದಲಾವಣೆ ಕಾಣಿಸುತ್ತದೆ. ಭೂಗತ ಜಗತ್ತಿನ ಕಥೆ ಆಗಿದ್ದರೂ ಕೂಡ ‘ಆ ದಿನಗಳು’ ಸಿನಿಮಾದಲ್ಲಿ ರಕ್ತ ಕಾಣಿಸಿರಲಿಲ್ಲ. ಆದರೆ ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಹಾಗಲ್ಲ. ಈ ಬಾರಿ ಹೊಡಿ-ಬಡಿ ಸನ್ನಿವೇಶಕ್ಕೆ, ರಕ್ತಪಾತಕ್ಕೆ ನಿರ್ದೇಶಕರು ಅವಕಾಶ ನೀಡಿದ್ದಾರೆ. ಕಮರ್ಷಿಯಲ್ ದೃಷ್ಟಿಯಿಂದ ಅವರು ಒಂದಷ್ಟು ಅಂಶಗಳನ್ನು ಸೇರಿಸಿರುವುದು ಸ್ಪಷ್ಟವಾಗಿದೆ.

ನಟ ವಿನೋದ್ ಪ್ರಭಾಕರ್ ಅವರ ವೃತ್ತಿಜೀವನದಲ್ಲಿ ‘ಬಲರಾಮನ ದಿನಗಳು’ ಒಂದು ಗಮನಾರ್ಹ ಸಿನಿಮಾ ಎನಿಸಿಕೊಂಡಿದೆ. ನಟನೆ, ಕಥಾವಸ್ತು, ಪಾತ್ರವರ್ಗ ಸೇರಿದಂತೆ ಎಲ್ಲ ಆಯಾಮದಿಂದಲೂ ಅವರಿಗೆ ಈ ಚಿತ್ರ ವಿಶೇಷವಾಗಿದೆ. ಅಬ್ಬರವಿಲ್ಲದ ಅಭಿನಯ, ಗಟ್ಟಿಯಾದ ಕಥಾಹಂದರದಿಂದ ಅವರಿಗೆ ಈ ಚಿತ್ರ ಮತ್ತು ಪಾತ್ರ ಬಹಳ ಹೊಂದಿಕೆ ಆಗಿವೆ. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಅವರಂತಹ ಘಟಾನುಘಟಿ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶವನ್ನು ವಿನೋದ್ ಪ್ರಭಾಕರ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ.

ಪಾತ್ರವರ್ಗದ ಆಯ್ಕೆಯಲ್ಲಿ ಕೆ.ಎಂ. ಚೈತನ್ಯ ಅವರು ಈ ಬಾರಿ ಕೂಡ ಗೆದ್ದಿದ್ದಾರೆ. ಆಶಿಷ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ, ಅತುಲ್ ಕುಲಕರ್ಣಿ, ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಅವಿನಾಶ್, ರಮೇಶ್ ಇಂದಿರ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್, ವಿನಯ್ ಗೌಡ, ರಜತ್, ಆದಿತ್ಯ ಆಶ್ರೀ ಮುಂತಾದ ಕಲಾವಿದರು ಈ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ. ತಮ್ಮ ಪಾತ್ರಗಳಿಗೆ ಅವರೆಲ್ಲ ಜೀವ ತುಂಬಿದ್ದಾರೆ.

ಇದನ್ನೂ ಓದಿ: ‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು

ಆ ಕಾಲದ ಬೆಂಗಳೂರನ್ನು ಕಟ್ಟಿಕೊಡುವಲ್ಲಿ ಚಿತ್ರತಂಡ ಶ್ರಮಿಸಿದೆ. ನಿಜಕ್ಕೂ ರೆಟ್ರೋ ಕಾಲದ ಬೆಂಗಳೂರನ್ನು ನೋಡಿದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಹೆಚ್.ಸಿ. ವೇಣು ಅವರ ಕೆಲಸ ಎದ್ದುಕಾಣುತ್ತದೆ. ಸಂತೋಷ್ ನಾರಾಯಣನ್ ಅವರ ಸಂಗೀತದಿಂದ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿಬರುವಂತಾಗಿದೆ. ಭೂಗತ ಲೋಕದ ಸಹವಾಸ ಎಂದಿಗೂ ಒಳ್ಳೆಯದಲ್ಲ ಎಂಬ ಸಂದೇಶವನ್ನು ಕೂಡ ಈ ಸಿನಿಮಾದಲ್ಲಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *