ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಐರ್ಲೆಂಡ್ನ ರಾಜಧಾನಿ ಬೆಲ್ಫಾಸ್ಟ್ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆರಂಭವಾಗಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್ಗೆ ಇದು ಮೊದಲ ಪಂದ್ಯವಾಗಿದೆ. ಚೊಚ್ಚಲ ಪಂದ್ಯದಲ್ಲೇ ಟಾಸ್ ಗೆದ್ದ ಶ್ರೇಯಸ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅದರಂತೆ ಕೋಟ್ಯಾಂತರಿ ಕ್ರಿಕೆಟ್ ಅಭಿಮಾನಿಗಳ ಏಕೈಕ ಪ್ರಶ್ನೆಯಾದ ವೈಭವ್ ಸೂರ್ಯವಂಶಿ ಮೊದಲ ಟಿ20 ಪಂದ್ಯವನ್ನು ಆಡುತ್ತಾರಾ ಎಂಬುದಕ್ಕೆ ಉತ್ತರ ಸಿಕ್ಕಿದೆ. ಅಭಿಮಾನಿಗಳಿಗೆ ಟೀಂ ಇಂಡಿಯಾದಿಂದ ನಿರಾಶೆಯ ಉತ್ತರ ಎದುರಾಗಿದ್ದು, ಮೊದಲ ಟಿ20 ಪಂದ್ಯದಲ್ಲಿ ವೈಭವ್ ಆಡುತ್ತಿಲ್ಲ.
ಶ್ರೇಯಸ್ ಹೇಳಿದ್ದೇನು?
ಟಾಸ್ ಗೆದ್ದ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, ಸೂರ್ಯವಂಶಿ ಈ ಪಂದ್ಯದಲ್ಲಿ ಏಕೆ ಆಡುತ್ತಿಲ್ಲ ಎಂಬುದನ್ನು ವಿವರಿಸಿದರು. ‘ಸೂರ್ಯವಂಶಿ ಒಬ್ಬ ಅದ್ಭುತ ಆಟಗಾರ, ಆದರೆ ಅವರು ಈ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗುತ್ತದೆ. ನಾವು ನಮ್ಮ ಅನುಭವಿ ಆಟಗಾರರನ್ನೇ ತಂಡದಲ್ಲಿ ಮುಂದುವರೆಸಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಪಂದ್ಯದಲ್ಲಿ ವೈಭವ್ ಆಡುತ್ತಿಲ್ಲ. ಸಮಯ ಬಂದಾಗ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ’ ಎಂದರು
ಈ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಕೂಡ ಸೂರ್ಯವಂಶಿಯನ್ನು ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲಾಗುವುದಿಲ್ಲ ಎಂದು ಸುಳಿವು ನೀಡಿದ್ದರು. ಸೂರ್ಯವಂಶಿಗೆ ಅವಕಾಶ ನೀಡಿದರೆ, ಈಗಾಗಲೇ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಅವಕಾಶ ವಂಚಿತರಾಗುತ್ತಾರೆ ಎಂದಿದ್ದರು.
ಭಾರತ ಮೂಲದ ಆಟಗಾರನಿಗೆ ಅವಕಾಶ
ವೈಭವ್ ಸೂರ್ಯವಂಶಿ ಅವರಿಗೆ ಚೊಚ್ಚಲ ಪ್ರವೇಶಕ್ಕೆ ಅವಕಾಶ ಸಿಗದಿದ್ದರೂ, ಐರ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಭಾರತೀಯ ಮೂಲದ ವೇಗದ ಬೌಲರ್ಗೆ ಅವಕಾಶ ನೀಡಿದೆ. ರಾಜಸ್ಥಾನ ಮೂಲದ ಎಡಗೈ ವೇಗದ ಬೌಲರ್ ಜೈ ಮುಂದ್ರಾಗೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ. 24 ನೇ ವಯಸ್ಸಿನಲ್ಲಿ ಐರ್ಲೆಂಡ್ಗೆ ತೆರಳಿದ ಮುಂದ್ರಾ, ಈಗ ಐರ್ಲೆಂಡ್ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.
ಐರ್ಲೆಂಡ್ ತಂಡ: ಟಿಮ್ ಟೆಕ್ಟರ್, ರಾಯ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆಂಜಮಿನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಲಿಯಾಮ್ ಮೆಕಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೇ ಮುಂದ್ರಾ, ಮ್ಯಾಥ್ಯೂ ಹೊಲ್ಲಾರ್ಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:01 pm, Fri, 26 June 26