ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಾ ನಿನ್ನ ಬಿಡಲಾರೆ’ ಈಗ ಅತ್ಯಂತ ಕುತೂಹಲಕಾರಿ ತಿರುವೊಂದನ್ನು ಪಡೆದುಕೊಂಡಿದೆ. ಇಷ್ಟು ದಿನ ಕಥಾನಾಯಕ ಶರತ್ ಮತ್ತು ತರುಣ್ ನಡುವೆ ನಡೆಯುತ್ತಿದ್ದ ಜಗಳ ಹಾಗೂ ಈರ್ಷ್ಯೆ ಈಗ ಮದುವೆಯ ರೂಪ ಪಡೆದು ಇಡೀ ಕುಟುಂಬಕ್ಕೆ ಶಾಕ್ ನೀಡಿದೆ. ಇತ್ತೀಚಿನ ಪ್ರೋಮೊದಲ್ಲಿ ಶರತ್ನ ತಂಗಿ ಶಾನ್ವಿ ಹಾಗೂ ತರುಣ್ ಇಬ್ಬರೂ ಮದುವೆಯಾಗಿ ಮನೆಗೆ ಬರುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದಾರೆ. ಆದರೆ, ಈ ಮದುವೆಯ ಹಿಂದೆ ಪ್ರೀತಿಗಿಂತ ಹೆಚ್ಚಾಗಿ ದ್ವೇಷ ಅಡಗಿದೆ ಎನ್ನುವುದು ಪ್ರೇಕ್ಷಕರಿಗೆ ಮಾತ್ರ ತಿಳಿದಿರುವ ರಹಸ್ಯ.
ಶರತ್ಗೆ ಪಾಠ ಕಲಿಸಲು ಶಾನ್ವಿ ಬಾಳಿಗೆ ಬಂದ ತರುಣ್
ಧಾರಾವಾಹಿಯಲ್ಲಿ ಶರತ್ ಹಾಗೂ ತರುಣ್ ಯಾವಾಗಲೂ ಒಬ್ಬರನ್ನೊಬ್ಬರು ಕಂಡರೆ ಆಗದ ಶತ್ರುಗಳು. ಸದಾ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಶರತ್ನ ಅತಿಯಾದ ಕೋಪ ಮತ್ತು ಅಹಂಕಾರಕ್ಕೆ ಹೇಗಾದರೂ ಮಾಡಿ ದೊಡ್ಡ ಪಾಠ ಕಲಿಸಲೇಬೇಕು ಎಂದು ತರುಣ್ ನಿರ್ಧರಿಸಿದ್ದಾನೆ. ಇದಕ್ಕಾಗಿ ಆತ ಆರಿಸಿಕೊಂಡ ದಾರಿಯೇ ಶರತ್ನ ಮುದ್ದಿನ ತಂಗಿ ಶಾನ್ವಿ. ತಾನು ತುಂಬಾ ಒಳ್ಳೆಯವನಂತೆ ನಾಟಕವಾಡಿ, ಶಾನ್ವಿಯ ಮನಸ್ಸು ಗೆದ್ದು ಈಗ ಆಕೆಯನ್ನು ಮದುವೆಯಾಗಿ ಶರತ್ ಎದುರೇ ಬಂದು ನಿಂತಿದ್ದಾನೆ.
ಮದುವೆಯ ಪ್ರೋಮೊದಲ್ಲಿ ಹೈ ಡ್ರಾಮಾ:
ಬಿಡುಗಡೆಯಾಗಿರುವ ಹೊಸ ಪ್ರೋಮೊದಲ್ಲಿ, ತರುಣ್ ಮತ್ತು ಶಾನ್ವಿ ಮದುವೆಯ ಮಾಲೆ ಧರಿಸಿ ಕೈ ಕೈ ಹಿಡಿದು ಶರತ್ನ ಮನೆಗೆ ಪ್ರವೇಶ ಮಾಡುತ್ತಾರೆ. ಇದನ್ನು ಕಂಡು ಇಡೀ ಕುಟುಂಬವೇ ಶಾಕ್ಗೆ ಒಳಗಾಗುತ್ತದೆ. ತಂಗಿಯ ಈ ನಿರ್ಧಾರದಿಂದ ಕೋಪೋದ್ರಿಕ್ತನಾಗುವ ಶರತ್, ತರುಣ್ನ ಶರ್ಟ್ ಹಿಡಿದು ‘ನನ್ನ ತಂಗಿ ಜೀವನ ಹಾಳು ಮಾಡ್ತೀಯಾ?’ ಎಂದು ಆಕ್ರೋಶ ಹೊರಹಾಕುತ್ತಾನೆ.
ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ
ಆದರೆ ಅಣ್ಣನ ಮಾತಿಗೆ ಅಡ್ಡಿಪಡಿಸುವ ಶಾನ್ವಿ, ‘ಸಾಕು ನಿಲ್ಲಿಸು ಅಣ್ಣ, ನಾನೇ ಇಷ್ಟಪಟ್ಟು ಇವರನ್ನು ಮದುವೆಯಾಗಿದ್ದೀನಿ’ ಎಂದು ತರುಣ್ ಪರವಾಗಿ ನಿಲ್ಲುತ್ತಾಳೆ. ಈ ಮಾತು ಕೇಳಿ ಶರತ್ ತೀವ್ರವಾಗಿ ನೊಂದರೆ, ಹಿನ್ನೆಲೆಯಲ್ಲಿ ನಿಂತಿರುವ ತರುಣ್ ತನ್ನ ಪ್ಲಾನ್ ವರ್ಕೌಟ್ ಆಗಿದ್ದಕ್ಕೆ ಮನಸಲ್ಲೇ ನಗುತ್ತಿರುವುದು ಕಾಣಿಸುತ್ತದೆ.
ತನ್ನ ತಂಗಿಯನ್ನೇ ದಾಳವಾಗಿಸಿಕೊಂಡು ಶರತ್ನ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಲು ಬಂದಿರುವ ತರುಣ್ನ ಅಸಲಿ ಮುಖ ಶಾನ್ವಿಗೆ ಯಾವಾಗ ತಿಳಿಯಲಿದೆ? ತಂಗಿಯ ಜೀವನವನ್ನು ತರುಣ್ನಿಂದ ಶರತ್ ಹೇಗೆ ಉಳಿಸುತ್ತಾನೆ? ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ. ಈ ಕುತೂಹಲಕಾರಿ ಸಂಚಿಕೆಗಳು ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.