Headlines

ರಾಮನ ಹಣ ಕದ್ದವರಿಗೆ ಮತ್ತೊಂದು ಶಾಕ್; ಆರೋಪಿಗಳ ಪರ ವಾದಿಸುವ ವಕೀಲರಿಗೆ 5 ಲಕ್ಷ ರೂ. ದಂಡದ ಎಚ್ಚರಿಕೆ! – Kannada News | Ayodhya Bar Association Refuses To Defend Ram Temple Donation Theft Case Accused Lawyers warned of Rs 5 lakh fine

ಲಕ್ನೋ, ಜೂನ್ 29: ಅಯೋಧ್ಯೆಯ ರಾಮ ಮಂದಿರದ (Ram Temple Donation Row) ದೇಣಿಗೆ ಕಳ್ಳತನದ ಆರೋಪದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮಂದಿರದ ದೇಣಿಗೆಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 8 ಮಂದಿ ಆರೋಪಿಗಳ ಪರವಾಗಿ ತಮ್ಮ ಸಂಘದ ಯಾವುದೇ ಸದಸ್ಯರು ವಕಾಲತ್ತು ವಹಿಸುವುದಿಲ್ಲ ಎಂದು ಅಯೋಧ್ಯೆಯ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ ನಿರ್ಣಯ ಕೈಗೊಂಡಿದೆ. ಅಷ್ಟೇ ಅಲ್ಲದೆ, ಈ ನಿರ್ಣಯವನ್ನು ಉಲ್ಲಂಘಿಸಿ ಆರೋಪಿಗಳ ಪರ ವಾದಿಸಲು ನ್ಯಾಯಾಲಯಕ್ಕೆ ಹಾಜರಾಗುವ ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಸಿದೆ.

ಇಂದು ನಡೆದ ಬಾರ್ ಅಸೋಸಿಯೇಷನ್‌ನ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ಕಳ್ಳತನ ಮಾಡಿರುವುದರ ವಿರುದ್ಧ ಅಸೋಸಿಯೇಷನ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಹಲವು ವಕೀಲರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿರ್ವಹಣೆಯೊಂದಿಗೆ ಗುರುತಿಸಿಕೊಂಡಿರುವ ಆದರೆ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲ್ಪಡದ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಅಯೋಧ್ಯೆಯನ್ನು ತೊರೆಯಬೇಕು ಎಂದು ಒತ್ತಾಯಿಸಿದರು. ಈ ಮೂವರು ಮುಂದಿನ ಮೂರು ದಿನಗಳೊಳಗೆ ನಗರವನ್ನು ತೊರೆಯದಿದ್ದರೆ, ಅಯೋಧ್ಯೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಮತ್ತು ನಗರಕ್ಕೆ ಬರುವ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಬೃಹತ್ ಚಳವಳಿಯನ್ನು ಪ್ರಾರಂಭಿಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 15 ಸಾವಿರ ರೂ. ಸಂಬಳ, 22ನೇ ವಯಸ್ಸಿಗೆ ಕೋಟ್ಯಾಧಿಪತಿ: ರಾಮಮಂದಿರ ಕಾಣಿಕೆ ಲೂಟಿ ಮಾಡಿದ ಅನುಕಲ್ಪ್ ಮಿಶ್ರಾ ಅಕ್ರಮ ಆಸ್ತಿ ಕಂಡು ಪೊಲೀಸರೇ ಶಾಕ್!

ಬಾರ್ ಅಸೋಸಿಯೇಷನ್‌ನ ಈ ನಿರ್ಧಾರವನ್ನು ವಿವರಿಸಿದ ಸಂಘದ ಕಾರ್ಯದರ್ಶಿ ಶೈಲೇಂದ್ರ ಜೈಸ್ವಾಲ್, “ರಾಮ ಮಂದಿರದ ಕಾಣಿಕೆಯ ಕಳ್ಳತನದಿಂದ ನಮ್ಮೆಲ್ಲರ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ. ಹೀಗಾಗಿ ಬಂಧಿತ ಆರೋಪಿಗಳ ಪರವಾಗಿ ವಾದ ಮಾಡದಿರಲು ಫೈಜಾಬಾದ್‌ನ ವಕೀಲರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಅಸೋಸಿಯೇಷನ್ ಅಂಗೀಕರಿಸಿದ ನಿರ್ಣಯದ ಪ್ರಕಾರ, ಈ ನಿರ್ಧಾರದ ಹೊರತಾಗಿಯೂ ಯಾರಾದರೂ ವಕೀಲರು ಆರೋಪಿಗಳ ಪರವಾಗಿ ಕೋರ್ಟ್‌ಗೆ ಹಾಜರಾದರೆ ಅವರು 5 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ರಾಮಮಂದಿರ ಕಾಣಿಕೆ ಲೂಟಿ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್!: ಬ್ಯಾಂಕ್ ಉದ್ಯೋಗಿಗಳಿಗೆ 3 ತಿಂಗಳ ಹಿಂದೆಯೇ ಸಿಕ್ಕಿತ್ತು ಕಳ್ಳತನದ ಸುಳಿವು

ರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ಬಂಧಿತರಾಗಿರುವ 8 ಮಂದಿ ಆರೋಪಿಗಳನ್ನು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಮಾಶಂಕರ್ ಅಲಿಯಾಸ್ ಟೀನು ಯಾದವ್ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಈ ಎಂಟೂ ಜನ ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆಯಾಗಿ ಬರುವ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಸುವ ಕಾರ್ಯದಲ್ಲಿ ತೊಡಗಿದ್ದರು. ರಾಮ ಮಂದಿರದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು, ಇಂದಿನವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ತನಿಖೆಯ ಭಾಗವಾಗಿ, ಪೊಲೀಸ್ ತಂಡಗಳು ಭಾನುವಾರ ಎಲ್ಲಾ 8 ಆರೋಪಿಗಳ ನಿವಾಸಗಳ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ದಾಳಿಯ ಸಂದರ್ಭದಲ್ಲಿ, ಹಣದ ಅಕ್ರಮ ವರ್ಗಾವಣೆಯನ್ನು ಪತ್ತೆಹಚ್ಚಲು ಸಹಾಯ ಮಾಡುವ ಪ್ರಮುಖ ದಾಖಲೆಗಳು, ಆರ್ಥಿಕ ವಿವರಗಳು ಮತ್ತು ಇತರ ಸಾಮಗ್ರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *