‘ಸಪ್ತ ಸಾಗರದಾಚೆ ಎಲ್ಲೊ’ (Saptha Sagaradache Ello) ಸಿನಿಮಾದ ಮೂಲಕ ದೇಶದಾದ್ಯಂತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿರುವ ನಿರ್ದೇಶಕ ಹೇಮಂತ್ ರಾವ್ ಇದೀಗ ಶಿವರಾಜ್ ಕುಮಾರ್, ಡಾಲಿ ಧನಂಜಯ್ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ರೆಟ್ರೊ ಶೈಲಿಯ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾವು ಒಂದು ರೀತಿ ಹಳೆಯ ಸ್ಪೈ ಆಕ್ಷನ್ ಸಿನಿಮಾ ಇದ್ದಂತಿದೆ. ಅಸಲಿಗೆ ಇಂಥಹುದೇ ಒಂದು ಸಿನಿಮಾ ಕತೆಯನ್ನು ಹೇಮಂತ್ ರಾವ್ ಅವರು ಪುನೀತ್ ರಾಜ್ಕುಮಾರ್ ಅವರಿಗೆ ಹೇಳಿದ್ದರಂತೆ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಹೇಮಂತ್ ರಾವ್ ನೆನಪು ಮಾಡಿಕೊಂಡಿದ್ದಾರೆ.
ಹೇಮಂತ್ ರಾವ್ ಹಾಗೂ ಪುನೀತ್ ರಾಜ್ಕುಮಾರ್ ಬಲು ಆತ್ಮೀಯರಾಗಿದ್ದರು. ಹೇಮಂತ್ ಅವರ ಪ್ರತಿಭೆ ಬಗ್ಗೆ ಅಪ್ಪು ಅವರಿಗೆ ಅಪಾರ ನಂಬಿಕೆ ಮತ್ತು ಗೌರವ ಇತ್ತು. ಇದೇ ಕಾರಣಕ್ಕೆ ಹೇಮಂತ್ ಅವರ ‘ಕವಲುದಾರಿ’ ಸಿನಿಮಾಕ್ಕೆ ಅಪ್ಪು ಅವರು ಖುದ್ದು ಬಂಡವಾಳ ಹೂಡಿದ್ದರು. ಅದಾದ ಬಳಿಕವೂ ಸಹ ಸಾಕಷ್ಟು ಕತೆಗಳ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದರು. ಅದರಲ್ಲಿ ಒಂದು ಕತೆ ‘ಸಿಐಡಿ 999’.
ಕನ್ನಡದ ಮೊಟ್ಟ ಮೊದಲ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಜೇಡರ ಬಲೆ’ ಸಿನಿಮಾನಲ್ಲಿ ಡಾ ರಾಜ್ಕುಮಾರ್ ಅವರು ಸಿಐಡಿ 999 ಪಾತ್ರದಲ್ಲಿ ನಟಿಸಿದ್ದರು. ಅದೇ ಕತೆಯ ಮುಂದುವರೆದ ಭಾಗದಂತೆ ‘ಸಿಐಡಿ 999’ ಸಿನಿಮಾವನ್ನು ಹೇಮಂತ್ ರಾವ್ ಮಾಡಿದ್ದರಂತೆ. ‘ಸಿಐಡಿ 999’ ಸಿನಿಮಾವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ನಿರೂಪಣೆ ಹಾಗೂ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಚಿತ್ರೀಕರಿಸುವುದು ಹೇಮಂತ್ ರಾವ್ ಉದ್ದೇಶವಾಗಿತ್ತಂತೆ. ಪುನೀತ್ ರಾಜ್ಕುಮಾರ್ ಅವರಿಗೂ ಸಹ ಕತೆ ಬಹಳ ಇಷ್ಟವಾಗಿತ್ತಂತೆ. ‘ಭಗವಾನ್’ ಅವರು ಇಂಥಹದೇ ರೀತಿಯ ಕತೆಯೊಂದನ್ನು ಡಾ ರಾಜ್ಕುಮಾರ್ ಅವರಿಗಾಗಿ ಮಾಡಿಕೊಂಡಿದ್ದರು. ಅವರನ್ನೊಮ್ಮೆ ಭೇಟಿ ಮಾಡಿ ಮಾತನಾಡಿ, ನಿಮಗೆ ಇನ್ನೂ ಕೆಲವು ವಿಷಯಗಳು ಸಿಗಬಹುದು ಎಂಬ ಸಲಹೆಯನ್ನೂ ಸಹ ಅಪ್ಪು ನೀಡಿದ್ದರಂತೆ. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಕಾಲವಾದರು.
ಇದನ್ನೂ ಓದಿ:ಜಾಲಿಯಾಗಿ ಪ್ರಚಾರ ಮಾಡಿದ ಗ್ರಾಮಾಯಣ ಸಿನಿಮಾ ಟೀಮ್
ಹೇಮಂತ್ ರಾವ್ ಅವರು ಇದೀಗ ಶಿವರಾಜ್ ಕುಮಾರ್ ಅವರ ಜೊತೆಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಹೆಸರು ಪೋಸ್ಟರ್ಗಳನ್ನು ನೋಡಿದರೆ ಇದೊಂದು ಸ್ಪೈ ಆಕ್ಷನ್ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕತೆ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಸಿನಿಮಾವನ್ನು ರೆಟ್ರೊ ಶೈಲಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಶಿವರಾಜ್ ಕುಮಾರ್ ಅವರ ಪೋಸ್ಟರ್ ನೋಡುತ್ತಿದ್ದರೆ, ‘ಜೇಡರ ಬಲೆ’ ಸಿನಿಮಾನಲ್ಲಿ ಡಾ ರಾಜ್ಕುಮಾರ್ ಅವರ ಪಾತ್ರದಂತೆಯೇ ಕಾಣುತ್ತಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಇನ್ನಷ್ಟೆ ಬಿಡುಗಡೆ ದಿನಾಂಕ ಘೋಷಿಸಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ