Headlines

ಹುಬ್ಬಳ್ಳಿಯಲ್ಲಿ ಗೃಹಜ್ಯೋತಿ ಪುನರ್ ಪರಿಶೀಲನೆ ಆರಂಭ: ಹೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ – Kannada News | HESCOM Begins Door to Door Re Inspection of Household Electricity Connections in Hubballi

ಹುಬ್ಬಳ್ಳಿ, ಜುಲೈ 01: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ರಾಜ್ಯದಲ್ಲಿ ಮೊದಲು ಜಾರಿಯಾಗಿದ್ದು ಗೃಹಜೋತಿ ಗ್ಯಾರಂಟಿ (gruha jyothi scheme). ಪ್ರತಿಯೊಬ್ಬರ ಮನೆಗೆ 200 ಯೂನಿಟ್ ಉಚಿತ ವಿದ್ಯುತ ನೀಡುವ ಈ ಗೃಹಜೋತಿ ಗ್ಯಾರಂಟಿಯ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕುವ ಉದ್ದೇಶದಿಂದ ಇಂದಿನಿಂದ ಪುನರ್ ಪರಿಶೀಲನೆ ಆರಂಭವಾಗಿದೆ. ಇತ್ತ ಹುಬ್ಬಳ್ಳಿ (Hubballi) ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ.

ಗೃಹಜೋತಿ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾದ ಸರ್ಕಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಹತ್ತು ತಿಂಗಳ ನಂತರ, ತಾನು ನೀಡಿದ್ದ ಮೊದಲ ಗ್ಯಾರಂಟಿ ಗೃಹಜೋತಿ ಯೋಜನೆಯ ಪುನರ್ ಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸದುಪಯೋಗ ಸಿಗಬೇಕು. ರಾಜ್ಯದ ಫಲಾನುಭವಿಗಳಿಗೆ ಮಾತ್ರ ಲಾಭ ಸಿಗಬೇಕು, ಅನರ್ಹ ಫಲಾನುಭವಿಗಳನ್ನು ಕೈಬಿಡುವ ಉದ್ದೇಶದಿಂದ ಗೃಹಜೋತಿ ಪುನರ್ ಪರಿಶೀಲನೆ ಕಾರ್ಯಕ್ಕೆ ಇಂಧನ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ ಜೆಡಿಎಸ್​​ ಕಿಡಿ: ವಿಪಕ್ಷಗಳ ಆರೋಪಕ್ಕೆ ಇಂಧನ ಸಚಿವರಿಂದಲೇ ಸ್ಪಷ್ಟನೆ

ರಾಜ್ಯದ ಎಲ್ಲಾ ಹೆಸ್ಕಾಂಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಇಂದಿನಿಂದ ಗೃಹಜೋತಿ ಪುನರ್​ ಪರಿಶೀಲನೆ ಕಾರ್ಯ ಆರಂಭವಾಗಿದೆ. 7 ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎರಡುವರೆ ಸಾವಿರ ಮೀಟರ್ ರೀಡರ್​ಗಳು ಮನೆಮನೆಗೆ ಹೋಗಿ, ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.

ಆರಂಭದಲ್ಲೇ ತಾಂತ್ರಿಕ ತೊಂದರೆ

ಇಂದು ಮುಂಜಾನೆ ಕೇಂದ್ರ ಕಚೇರಿಯಿಂದ ಆ್ಯಪ್ ಅಳವಡಿಕೆ ಬಗ್ಗೆ ಮಾಹಿತಿ ಬಂದ ನಂತರ್ ಆ್ಯಪ್ ಅಳವಡಿಕೆ ಮಾಡಿಕೊಂಡ ಸಿಬ್ಬಂದಿ ಆರಂಭದಲ್ಲಿ ಕೆಲ ತಾಂತ್ರಿಕ ತೊಂದರೆಗಳು ಎದುರಾಗಿದ್ದವು. ಸರ್ವರ್ ಡೌನ್ ಸಮಸ್ಯೆ ಸೇರಿದಂತೆ ಆ್ಯಪ್ ಇನ್ಸ್ಟಾಲ್ ಆಗದೇ ಇರುವ ತೊಂದರೆಗಳು ಕಂಡುಬಂದವು. ಅನೇಕ ಪ್ರಯತ್ನಗಳ ನಂತರ ಮುಂಜಾನೆ 11 ಗಂಟೆ ನಂತರ ಸಿಬ್ಬಂದಿ ಯೋಜನೆಯ ಪುನರ್ ಪರಿಶೀಲನೆ ಆರಂಭಿಸಿದರು. ಹುಬ್ಬಳ್ಳಿ ನಗರದ ವಿವಿಧೆಡೆ ಮನೆಗಳಿಗೆ ಭೇಟಿ ನೀಡಿದ ಸಿಬ್ಬಂದಿ ಮಾಹಿತಿ ಸಂಗ್ರಹಿಸಿದರು.

ಹೆಸ್ಕಾಂ ಎಂಡಿ ವೈಶಾಲಿ ಹೇಳಿದ್ದಿಷ್ಟು

ಸ್ವತಃ ಹೆಸ್ಕಾಂ ಎಂಡಿ ವೈಶಾಲಿ ಅವರು ಅನೇಕ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಬಗ್ಗೆ ಮಾತನಾಡಿದ ಅವರು, ಇಂದಿನಿಂದ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಆರಂಭದಲ್ಲಿ ಸ್ವಲ್ಪ ತಾಂತ್ರಿಕ ತೊಂದರೆ ಆಗಿತ್ತು. ಆದರೆ ಎಲ್ಲಾ ತೊಂದರೆ ನಿವಾರಣೆಯಾಗಿದ್ದು ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಯಾವೆಲ್ಲಾ ಮಾಹಿತಿ ಸಂಗ್ರಹ?

ಇನ್ನು ಪ್ರತಿಯೊಬ್ಬರ ಮನೆಗೆ ಹೋಗುತ್ತಿರುವ ಮೀಟರ್ ರೀಡರ್​ಗಳು, ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದರು. ಫಲಾನುಭವಿಯ ಹೆಸರು, ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ ಕಾರ್ಡ್ ನಂಬರ್, ಓಟರ್ ಕಾರ್ಡ್ ನಂಬರ್, ಪ್ಯಾನ್ ಕಾರ್ಡ್ ನಂಬರ್​, ಜಾತಿ, ಆದಾಯ ತೆರಿಗೆ ಪಾವತಿದಾರರಾ ಇಲ್ವಾ ಅನ್ನೋದನ್ನು ಚೆಕ್ ಮಾಡಿದರು. ಪ್ರತಿಯೊಬ್ಬ ಫಲಾನುಭವಿಗಳ ಭಾವಚಿತ್ರ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಆ್ಯಪ್​ನಲ್ಲಿ ನಮೂದಿಸುವುದರ ಜೊತೆಗೆ ಒಂದು ಪ್ರತಿಯನ್ನು ಫಲಾನುಭವಿಗಳಿಗೆ ಕೂಡ ನೀಡುತ್ತಿದ್ದಾರೆ. ಸದ್ಯ ಪುನರ್ ಪರಿಶೀಲನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡರೆ, ಮೀಟರ್ ರೀಡರ್ ಬಂದಾಗ ನೀಡಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಮುಗಿಯಲಿದೆ ಎಂದು ಹೆಸ್ಕಾಂ ಸಹಾಯಕ ಇಂಜಿನಿಯರ್ ದೀಪಕ್ ಹೇಳಿದರು.

ಇದನ್ನೂ ಓದಿ: ಜು.1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ: ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು?

ಸರ್ಕಾರದ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಇದು ಎಷ್ಟರ ಮಟ್ಟಿಗೆ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲು ಸಹಾಯಕವಾಗುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *