ಬೈಂದೂರು ಜು.2: ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗುತ್ತಿದ್ದಂತೆ ಗ್ರಾಮೀಣ ಭಾಗದ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ಬೈಂದೂರು ಸಮೀಪದ ಯಡ್ತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಕೆ ಗ್ರಾಮದ ನಿವಾಸಿಗಳು ದಶಕಗಳಿಂದ ಮೂಲಸೌಕರ್ಯ ವಂಚಿತರಾಗಿ, ಪ್ರತಿ ವರ್ಷದ ಮಳೆಗಾಲದಲ್ಲೂ ಜೀವದ ಹಂಗು ತೊರೆದು ಸಂಚರಿಸುವ ಭೀಕರ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಈಗ ಅಕ್ರೋಶ ಹೊರಹಾಕಿದ್ದಾರೆ.
ಕಡ್ಕೆ ಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಪರಿಶಿಷ್ಟ ಪಂಗಡದ (ST) ‘ಗೋಂಡ’ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ, ಕೂಲಿ ಕೆಲಸ ಹಾಗೂ ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ನಡೆಸುತ್ತಿರುವ ಈ ಜನರಿಗೆ ಮಳೆಗಾಲ ಒಂದು ಶಾಪವಾಗಿ ಪರಿಣಮಿಸಿದೆ. ಕಡ್ಕೆ ಗ್ರಾಮದಿಂದ ಊದೂರು, ಓಮ್ಮಣಮಕ್ಕಿ, ಕರ್ನಗದ್ದೆ ಸೇರಿದಂತೆ ಸುತ್ತಮುತ್ತಲಿನ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮಧ್ಯೆಯೇ ದೊಡ್ಡ ತೊರೆ (ಹೊಳೆ) ಹರಿಯುತ್ತದೆ. ಮಳೆ ಜೋರಾದಾಗ ಈ ಹೊಳೆ ಉಕ್ಕಿ ಹರಿದು ರಸ್ತೆ ಸಂಪೂರ್ಣ ಜಲಾವೃತಗೊಳ್ಳುವುದರಿಂದ ಇಡೀ ಗ್ರಾಮವೇ ಸಂಪರ್ಕ ಕಳೆದುಕೊಳ್ಳುತ್ತದೆ.
ಗ್ರಾಮಸ್ಥರು ಪ್ರತಿವರ್ಷ ತಮ್ಮದೇ ಸ್ವಂತ ಶ್ರಮ ಹಾಗೂ ಖರ್ಚಿನಲ್ಲಿ ಮರದ ತಾತ್ಕಾಲಿಕ ಕಾಲುಸಂಕವನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ, ಭಾರಿ ಮಳೆಯ ರಭಸಕ್ಕೆ ಈ ಮರದ ಸಂಕಗಳು ಕೆಲವೇ ದಿನಗಳಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತವೆ. ಆ ಬಳಿಕ ಗ್ರಾಮಸ್ಥರು ಹಲವು ಕಿಲೋಮೀಟರ್ ದೂರದ ಮತ್ತೊಂದು ಕಿರಿದಾದ, ಅಪಾಯಕಾರಿ ಕಾಲುಸಂಕವನ್ನು ನಿರ್ಮಾಣ ಮಾಡಬೇಕಾಗುತ್ತದೆ.
ಕಡ್ಕೆ ಭಾಗದ ನೂರಾರು ವಿದ್ಯಾರ್ಥಿಗಳು ಬೈಂದೂರು, ಶಿರೂರು ಹಾಗೂ ಕುಂದಾಪುರದ ಶಾಲೆ-ಕಾಲೇಜುಗಳಿಗೆ ಈ ಸಂಕದ ಮೇಲೆಯಿಂದಲ್ಲೇ ತೆರಳುತ್ತಿದ್ದು, ಪ್ರತಿದಿನ ಎರಡು ಕಿಲೋಮೀಟರ್ ಹೆಚ್ಚುವರಿ ನಡೆದು, ಜೀವ ಕೈಯಲ್ಲಿ ಹಿಡಿದುಕೊಂಡು ಈ ಕಿರಿದಾದ ಸಂಕ ದಾಟಬೇಕಿದೆ. ಒಂದು ವೇಳೆ ಕಾಲು ಜಾರಿದರೂ ಉಕ್ಕಿ ಹರಿಯುವ ಹೊಳೆ ಪಾಲಾಗುವ ಭೀತಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರನ್ನು ಕಾಡುತ್ತಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಥವಾ ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಬೇಕಾದ ಸಂದರ್ಭದಲ್ಲಂತೂ ಪರಿಸ್ಥಿತಿ ತೀರಾ ಗಂಭೀರವಾಗುತ್ತದೆ.
ಇದನ್ನೂ ಓದಿ: ಮಾಲೀಕರು ಸ್ಪಂದಿಸ್ತಿಲ್ಲ, ಹಳೇ ದಾಖಲೆ ಸಿಗ್ತಿಲ್ಲ; ಉಚಿತ ಕರೆಂಟ್ ಕೈತಪ್ಪುವ ಭೀತಿಯಲ್ಲಿ ಬೆಂಗಳೂರು ಬಾಡಿಗೆದಾರರು
ಚುನಾವಣೆ ಮುಗಿದರೆ ಭರವಸೆ ಮರೆತುಹೋಗುತ್ತೆ
ಪ್ರತಿ ಚುನಾವಣೆ ಬಂದಾಗಲೂ ರಾಜಕಾರಣಿಗಳು ಗ್ರಾಮಕ್ಕೆ ಬಂದು ಸೇತುವೆ ಕಟ್ಟಿಸಿಕೊಡುವುದಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ. ಆದರೆ ಗೆದ್ದ ಮೇಲೆ ಸಮಸ್ಯೆ ಕಡೆ ಗಮನ ನೀಡುವುದಿಲ್ಲ. ಕಳೆದ 20 ವರ್ಷಗಳಿಂದ ನಮ್ಮ ಪರಿಸ್ಥಿತಿ ಹೀಗೆಯೇ ಇದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಇಲ್ಲಿ ಸಣ್ಣ ಸೇತುವೆ ಅಥವಾ ಶಾಶ್ವತ ಸುರಕ್ಷಿತ ಕಾಲುಸಂಕ ನಿರ್ಮಿಸಬೇಕು,” ಎಂದು ಸ್ಥಳೀಯ ನಿವಾಸಿ ಯೋಗೀಶ ಶೆಟ್ಟಿ ಒತ್ತಾಯಿಸಿದ್ದಾರೆ. ಯಾವುದೇ ದೊಡ್ಡ ಅನಾಹುತ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನವೇ ಉಡುಪಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು, ಕಡ್ಕೆ ಗ್ರಾಮಸ್ಥರ ಈ ನ್ಯಾಯಸಮ್ಮತ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕಿದೆ ಎಂದು ಸ್ಥಳೀಯರ ಒತ್ತಾಯವಾಗಿದೆ.
ರಾಜ್ಯದ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ