
ಹುಬ್ಬಳ್ಳಿ, ಜುಲೈ 03: ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಸಾಮಾಜಿಕ ಭದ್ರತೆಯಡಿ ಪಿಂಚಣಿಗಳನ್ನು ನೀಡುತ್ತದೆ. 60 ವರ್ಷ ವಯಸ್ಸಾದವರು, ವಿಧವೆಯರು ಸೇರಿದಂತೆ ಅನೇಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಆದರೆ ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲು ಪರಿಷ್ಕರಣೆ ಜೊತೆಗೆ ಇದೀಗ ಪಿಂಚಣಿ ಫಲಾನುಭವಿಗಳ ಪರಿಷ್ಕರಣೆ (Pension Revision) ಕೂಡ ಮಾಡಲಾಗುತ್ತಿದೆ. ಪಿಂಚಣಿ ಪಡೆಯುತ್ತಿರುವರಲ್ಲಿ ಶಂಕಾಸ್ಪದ ಪಿಂಚಣಿ ಫಲಾನುಭವಿಗಳಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಾಕಿಲ್ಲ. ಇದೀಗ ಅವರು ಹೊಸದಾಗಿ ದಾಖಲಾತಿಗಳನ್ನು ನೀಡಬೇಕು. ಇದಕ್ಕಾಗಿ ವೃದ್ದರು ತಹಶೀಲ್ದಾರ್ ಕಚೇರಿಯಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
23 ಲಕ್ಷ ಶಂಕಾಸ್ಪದ ಪಿಂಚಣಿದಾರರು ಪತ್ತೆ
ಪಿಂಚಣಿ ಫಲಾನುಭವಿಗಳು ಹುಬ್ಬಳ್ಳಿ ನಗರದ ತಹಶೀಲ್ದಾರ್ ಕಚೇರಿಗೆ ಬೆಳಿಗ್ಗೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೇಳುತ್ತಿರುವ ದಾಖಲಾತಿಗಳನ್ನು ನೀಡಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಸರಿಸುಮಾರು 83 ಲಕ್ಷ ಪಿಂಚಣಿದಾರರು ಪಿಂಚಣಿ ಫಲಾನುಭವಿಗಳಿದ್ದಾರೆ. ಆದರೆ ಅದರಲ್ಲಿ ಸರಿಸುಮಾರು 23 ಲಕ್ಷ ಶಂಕಾಸ್ಪದ ಪಿಂಚಣಿದಾರರಿರುವುದು ಗೊತ್ತಾಗಿದೆ. ಶಂಕಾಸ್ಪದ ಪಿಂಚಣಿದಾರರ ಖಾತೆಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಜಮೆಯಾಗಿಲ್ಲ.
ಈ ತಿಂಗಳು ಬರುತ್ತೆ, ಮುಂದಿನ ತಿಂಗಳು ಬರುತ್ತೆ ಅಂತ ಕಾದಿದ್ದ ಫಲಾನುಭವಿಗಳಿಗೆ ಹಣ ಬಾರದಿದ್ದಾಗ ವಿಚಾರಿಸಿದಾಗ ಹೊಸದಾಗಿ ದಾಖಲಾತಿಗಳನ್ನು ನೀಡಬೇಕು ಎಂಬುವುದು ಗೊತ್ತಾಗಿದೆ. ಹೀಗಾಗಿ ಅನೇಕ ವೃದ್ದರು, ಹೊಸದಾಗಿ ದಾಖಲಾತಿಗಳನ್ನು ಹೊಂದಿಸಿ ನೀಡಲು ಪರದಾಡುತ್ತಿದ್ದಾರೆ. ಇದೀಗ ಹೊಸದಾಗಿ ಇವರೆಲ್ಲ, ತಮ್ಮ ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ದಾಖಲಾತಿಗಳನ್ನು ನೀಡಬೇಕಾಗಿದೆ. ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸಲಿರುವ ಅಧಿಕಾರಿಗಳು ಅವರು ಅರ್ಹರಿದ್ದರೆ ಅವರಿಗೆ ಪಿಂಚಣಿ ನೀಡಲು ಶಿಪಾರಸ್ಸು ಮಾಡಲಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ಮರು ಪರಿಶೀಲನೆ: ಜಾತಿ ಪ್ರಮಾಣಪತ್ರ ಗೊಂದಲದ ಬಗ್ಗೆ ಸ್ಪಷ್ಟನೆ ನಿಡಿದ ಬೆಸ್ಕಾಂ
ಇನ್ನು ಈ ಮೊದಲು ಪ್ರತಿ ಫಲಾನುಭವಿಗೂ ಪಿಂಚಣಿ ಬರುತಿತ್ತು. ಆದರೆ ಅನೇಕರು ಅನರ್ಹ ಫಲಾನುಭವಿಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸರ್ಕಾರ, ಸರಿಸುಮಾರು 23 ಲಕ್ಷದಷ್ಟು ಶಂಕಾಸ್ಪದ ಪಿಂಚಣಿದಾರರು ಇರುವುದನ್ನು ಪತ್ತೆ ಮಾಡಿದೆ. ಅನೇಕ ಪಿಂಚಣಿದಾರರು, ಪ್ರತಿವರ್ಷ ತಾವು ಜೀವಂತ ಇರುವ ಪ್ರಮಾಣಪತ್ರವನ್ನು ನೀಡಬೇಕು, ಆದರೆ ಬಹುತೇಕರು ನೀಡಿಲ್ಲ. ಇನ್ನು ಅನೇಕರು ಅನೇಕ ತಿಂಗಳ ಪಿಂಚಣಿಯನ್ನು ಡ್ರಾ ಮಾಡಿಲ್ಲ. ಅಂತವರ ಖಾತೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಅರ್ಹರಿದ್ದರು ನಮ್ಮನ್ನ ಕೈಬಿಡಲಾಗಿದೆ ಎಂದ ಪಿಂಚಣಿದಾರರು
ಇನ್ನು ಕೆಲವರು ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ಮೇಲ್ದರ್ಜೆಗೆ ಏರಿದ್ದಾರೆ. ಅಂತವರಿಗೆ ಪಿಂಚಣಿ ಹಣ ಜಮೆಯಾಗಿಲ್ಲ. ಕೆಲವರ ವರಮಾನ ಹೆಚ್ಚಾಗಿದ್ದು, ಅವರ ಮಕ್ಕಳು, ಮೊಮ್ಮಕ್ಕಳು ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಖರೀದಿ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅಂತವರ ಪಿಂಚಣಿಯನ್ನು ಕೂಡ ಶಂಕಾಸ್ಪದ ಪಿಂಚಣಿದಾರರ ಗುಂಪಿಗೆ ಸೇರಿಸಲಾಗಿದೆ. ಇನ್ನು ಕೆಲವರು ಐಟಿ ಫೈಲ್ ಮಾಡಿದ್ದಾರೆ. ಕುಂಟುಂಬ ತಂತ್ರಾಶದಲ್ಲಿ ಅನೇಕ ಪಿಂಚಣಿದಾರರು ವರಮಾನ ಸೇರಿದಂತೆ ವಾಹನಗಳ ಖರೀದಿ ಮಾಡಿದ್ದು ಗೊತ್ತಾಗಿದ್ದು, ಅವರ ಖಾತೆಗಳನ್ನು ಶಂಕಾಸ್ಪದ ಖಾತೆಗಳು ಅಂತ ಪರಿಗಣಿಸಿ ಅವರ ಖಾತೆಗೆ ಹಣ ಹಾಕೋದನ್ನು ನಿಲ್ಲಿಸಿದೆ. ಇದೀಗ ಇವರು ಹೊಸದಾಗಿ ದಾಖಲಾತಿಗಳನ್ನು ನೀಡಿ, ತಾವು ಪಿಂಚಣಿ ಪಡೆಯಲು ಅರ್ಹರು ಅನ್ನೋದನ್ನು ಸಾಬೀತು ಮಾಡಬೇಕಿದೆ. ಅಂದಾಗ ಮಾತ್ರ ಪಿಂಚಣಿ ಮರು ಜಾರಿಯಾಗುತ್ತದೆ. ಇನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಹೊಸದಾಗಿ ದಾಖಲಾತಿಗಳನ್ನು ನೀಡಲು ವಯೋವೃದ್ದರು ಪರದಾಡುತ್ತಿದ್ದಾರೆ. ತಾವು ಯೋಜನೆಗೆ ಅರ್ಹರಿದ್ದೇವೆ. ಆದರೂ ನಮ್ಮನ್ನು ಕೈಬಿಡಲಾಗಿದೆ ಅಂತ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ADLR ಭೂ ಹಗರಣ: 200 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ, 9 ಜನರ ಬಂಧನ
ಅರ್ಹ ಪಿಂಚಣಿದಾರರಿಗೆ ಪಿಂಚಣಿ ಹಣ ಜಮೆಯಾಗುತ್ತಿದೆ. ಆದರೆ ಶಂಕಾಸ್ಪದ ಅಂತ ಗುರುತಿಸಿರುವವರಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಬಂದಿಲ್ಲ. ಹೀಗಾಗಿ ಹೊಸದಾಗಿ ದಾಖಲಾತಿಗಳನ್ನು ನೀಡುವುದು ಅನಿವಾರ್ಯವಾಗಿದೆ. ಅನರ್ಹ ಫಲಾನುಭವಿಗಳನ್ನು ತೆಗೆಯುವುದು ಸ್ವಾಗತಾರ್ಹವೇ. ಆದರೆ ವೃದ್ದರು ಗಂಟೆಗಟ್ಟಲೇ ಕಚೇರಿಗಳಲ್ಲಿ ಕ್ಯೂ ನಿಲ್ಲುವುದು ತೊಂದರೆಯಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.