Headlines

37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ: ಎರಡೆರಡು ಕೊಲೆ ಮಾಡಿದ್ದರೂ ಇಲ್ಲ ಪಶ್ಚಾತ್ತಾಪ! – Kannada News | India’s Longest Serving Prisoner Saibanna Natikar Released From Bengaluru Jail After 37 Years

ಬೆಂಗಳೂರು ಕೇಂದ್ರ ಕಾರಾಗೃಹ ಮತ್ತು ಸಾಯಿಬಣ್ಣ ಎನ್. ನಾಟೀಕರ್ (ಸಾಯಿಬಣ್ಣ ಚಿತ್ರ ಕೃಪೆ: ಎಎನ್​ಐ)Image Credit source: ANI

ಬೆಂಗಳೂರು, ಜುಲೈ 6: ಮುಖ ತುಂಬಾ ಗಡ್ಡ, ತಲೆ ತುಂಬಾ ಬಿಳಿ ಕೂದಲು ಮತ್ತು ವಯೋಸಹಜವಾಗಿ ನಡುಗುತ್ತಿರುವ ಕಾಲುಗಳೊಂದಿಗೆ 72 ವರ್ಷದ ಸಾಯಿಬಣ್ಣ ಎನ್. ನಾಟೀಕರ್ (Saibanna Natikar) ಇತ್ತೀಚೆಗೆ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಗೆ ನಡೆದು ಬಂದಿದ್ದಾನೆ. ಸುಮಾರು ನಾಲ್ಕು ದಶಕಗಳ ಕಾಲ ಕತ್ತಲೆಯ ಕೋಣೆಯಲ್ಲಿದ್ದ ಸಾಯಿಬಣ್ಣ ಕೊನೆಗೂ ಮುಕ್ತ ಗಾಳಿಯನ್ನು ಉಸಿರಾಡಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ, ಸಾಯಿಬಣ್ಣ ಭಾರತದಲ್ಲೇ ಅತಿ ಹೆಚ್ಚು ಕಾಲ ಅಂದರೆ ಸತತ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ದೇಶದ ಮೊದಲ ಕೈದಿ.

ಈ ಕುರಿತು ಮಾತನಾಡಿರುವ ಕಾರಾಗೃಹ ಇಲಾಖೆ ಡಿಜಿಪಿ ಆಲೋಕ್ ಕುಮಾರ್, ‘ನಾನು ಈ ಹಿಂದೆ ಬೆಳಗಾವಿ ಮತ್ತು ಕಲಬುರಗಿ ಜೈಲಿನಲ್ಲಿದ್ದಾಗ ಸಾಯಿಬಣ್ಣನನ್ನು ಭೇಟಿಯಾಗಿದ್ದೆ. ಜೈಲಿನೊಳಗೆ ಈತನ ನಡವಳಿಕೆ ಅತ್ಯಂತ ಉತ್ತಮವಾಗಿತ್ತು’ ಎಂದು ತಿಳಿಸಿದ್ದಾರೆ.

ಪೆರೋಲ್ ಮೇಲೆ ಬಂದು ಎರಡನೇ ಪತ್ನಿ, ಮಗಳ ಕೊಲೆ ಮಾಡಿದ್ದ ಸಾಯಿಬಣ್ಣ!

ಸಾಯಿಬಣ್ಣನ ಅಪರಾಧದ ಇತಿಹಾಸ ಅತ್ಯಂತ ಭೀಕರವಾದುದು. 1988 ರಲ್ಲಿ ತನ್ನ ಮೊದಲ ಪತ್ನಿ ಮಲ್ಕವ್ವ ಎಂಬಾಕೆಯನ್ನು ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 1994 ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಜೈಲಿನಿಂದ ಹೊರಬಂದ ಆತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿ ಹೆಣ್ಣು ಮಗುವಿಗೆ ತಂದೆಯಾದ. ಆದರೆ ಕೆಲವು ವಾರಗಳಲ್ಲೇ ಎರಡನೇ ಪತ್ನಿಯ ಮೇಲೂ ಅನುಮಾನಗೊಂಡು, ಆಕೆಯನ್ನು ಮತ್ತು ಪುಟ್ಟ ಮಗಳು ವಿಜಯಲಕ್ಷ್ಮಿಯನ್ನು ಅಮಾನುಷವಾಗಿ ಕೊಚ್ಚಿ ಕೊಂದಿದ್ದ.

ಮರಣದಂಡನೆ ಶಿಕ್ಷೆ ಜೀವಾವಧಿಗೆ ಪರಿವರ್ತನೆ

ಸಹಕಾರ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಈ ಭೀಕರ ಕೊಲೆಗಳಿಂದಾಗಿ ಕೆಲಸ ಕಳೆದುಕೊಂಡಿದ್ದಲ್ಲದೆ, ಇಂದು 1 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 10 ಎಕರೆ ಜಮೀನನ್ನೂ ಕಳೆದುಕೊಂಡಿದ್ದಾನೆ. 2003 ರಲ್ಲಿ ವಿಚಾರಣಾ ನ್ಯಾಯಾಲಯವು ಈ ಜೋಡಿ ಕೊಲೆಯ ಕ್ರೌರ್ಯವನ್ನು ಪರಿಗಣಿಸಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ತದನಂತರ ಕರ್ನಾಟಕ ಹೈಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿತು. ಸಾಯಿಬಣ್ಣ ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಏಕಾಂತ ವಾಸ (Solitary Confinement) ಅನುಭವಿಸಿದ್ದನ್ನು ಹೈಕೋರ್ಟ್ ಕಾನೂನುಬಾಹಿರ ಮತ್ತು ಅತಿಮಾನುಷ ಎಂದು ಪರಿಗಣಿಸಿತು. ಜೊತೆಗೆ ಈತನ ಕ್ಷಮಾದಾನ ಅರ್ಜಿಯ ನಿರ್ಧಾರದಲ್ಲಿ ಆದ ವಿಳಂಬವೂ ಈತನಿಗೆ ವರದಾನವಾಗಿ ಪರಿಣಮಿಸಿ, ಈಗ 37 ವರ್ಷಗಳ ಬಳಿಕ ಬಿಡುಗಡೆಗೆ ಹಾದಿ ಮಾಡಿಕೊಟ್ಟಿದೆ.

ಕೊಲೆ ಮಾಡಿದ್ದರೂ ಮುಖದಲ್ಲಿಲ್ಲ ಪಶ್ಚಾತ್ತಾಪ!

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಸಾಯಿಬಣ್ಣ, ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ‘ನನ್ನ ಹೆಂಡತಿಯರು ದಾರಿ ತಪ್ಪಿದ್ದಕ್ಕೆ ನಾನು ಕೊಂದೆ. ಮೊದಲ ಕೊಲೆಯ ವೇಳೆ ಆಕೆಯ ಜೊತೆಯಿದ್ದ ವ್ಯಕ್ತಿ ಓಡಿ ಹೋದ, ಹಾಗಾಗಿ ಹೆಂಡತಿಯನ್ನು ಕೊಂದೆ. ಎರಡನೇ ಮದುವೆಯಾದಾಗ ನನ್ನ ಅತ್ತೆಯೇ ಮಗಳನ್ನು ದಾರಿ ತಪ್ಪಿಸಿದಳು. ಹೆಂಡತಿ ಕುರುಡಿ ಅಥವಾ ಕುಂಟಿಯಾಗಿದ್ದರೂ ಪರವಾಗಿಲ್ಲ, ಆದರೆ ಆಕೆಯ ಶೀಲ ಮುಖ್ಯ’ ಎಂದು ಹಳೇ ಜಿದ್ದನ್ನೇ ಆತ ಮಾಧ್ಯಮಗಳ ಮುಂದೆ ಉಸುರಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *