ಬೆಂಗಳೂರು, ಜುಲೈ 06: ಕೆಪಿಸಿಸಿ ಜನರಲ್ ಸೆಕ್ರೆಟರಿ ಅಬ್ಬಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಹರ್ಷನನ್ನು ಬೆಂಗಳೂರು (bengaluru) ಸಿಸಿಬಿ ಪೊಲೀಸರು (CCB police) ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಕಂಟ್ರಿಮೇಡ್ ಪಿಸ್ತೂಲ್, 8 ಜೀವಂತ ಗುಂಡು ಮತ್ತು ಪೆಪ್ಪರ್ ಸ್ಪ್ರೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಈತ ಈಗಾಗಲೇ ಎರಡು ಸುತ್ತು ಗುಂಡು ಹಾರಿಸಿ ಫೈರಿಂಗ್ ಪ್ರಾಕ್ಟೀಸ್ ಕೂಡ ಮಾಡಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹತ್ಯೆಗೆ ಸಂಚು
ಕಳೆದ ವರ್ಷ ಅಶೋಕನಗರದ ನೀಲಸಂದ್ರದಲ್ಲಿ ರೌಡಿಶೀಟರ್ ಹೈದರ್ ಅಲಿ ಎಂಬಾತನ ಕೊಲೆಯಾಗಿತ್ತು. ಈ ಕೊಲೆಯ ಹಿಂದೆ ಅಬ್ಬಾಸ್ ಕೈವಾಡವಿದೆ ಎಂದು ಹೈದರ್ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಅಬ್ಬಾಸ್ ಈ ಕೇಸ್ನಲ್ಲಿ ಕೋರ್ಟ್ನಿಂದ ಸ್ಟೇ ಪಡೆದುಕೊಂಡಿದ್ದ.
ಇದನ್ನೂ ಓದಿ: 37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ: ಎರಡೆರಡು ಕೊಲೆ ಮಾಡಿದ್ದರೂ ಇಲ್ಲ ಪಶ್ಚಾತ್ತಾಪ!
ಇದರಿಂದ ಆಕ್ರೋಶಗೊಂಡಿದ್ದ ಹೈದರ್ ಅಲಿ ಸಹೋದರ ಶಬ್ಬೀರ್ ಅಲಿ, ಅಬ್ಬಾಸ್ ಹತ್ಯೆಗೆ ಸುಪಾರಿ ನೀಡಿದ್ದ. ಮೊಹರಂ ಹಬ್ಬದ ದಿನದಂದೇ ಅಬ್ಬಾಸ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಇಡೀ ಗ್ಯಾಂಗ್ ಸ್ಕೆಚ್ ಹಾಕಿತ್ತು. ಇದಕ್ಕಾಗಿ 30ಕ್ಕೂ ಹೆಚ್ಚು ಲಾಂಗ್, ಮಚ್ಚು, ಡ್ರ್ಯಾಗರ್ ಹಾಗೂ ಕಾರು, ಬೈಕ್ ಸೇರಿದಂತೆ ಸಂಚು ರೂಪಿಸಲಾಗಿತ್ತು. ಬಂಧಿತ ಆರೋಪಿ ಹರ್ಷ ಕೊಲೆಯಾಗಿರುವ ಹೈದರ್ ಆಪ್ತನಾಗಿದ್ದು, ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದ. ಹೀಗಾಗಿ ಇತರೆ ಆರೋಪಿಗಳೊಂದಿಗೆ ಕೈಜೋಡಿಸಿದ್ದ ಎನ್ನಲಾಗಿದೆ.
ಬಂಧಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಚ್ಚು, ಲಾಂಗ್ ವಶಕ್ಕೆ ಪಡೆಯಲಾಗಿತ್ತು. ಹೈದರ್ ಅಲಿ ಸಹೋದರ ಶಬ್ಬೀರ್ ಅಲಿ, ಅಲಿ ಅಳಿಯ ಸಾಜಿದ್, ರೌಡಿಶೀಟರ್ಗಳಾದ ಸುಮನ್, ಶಿವಪ್ರಸಾದ್, ಶರವಣ, ವಿನೋದ್, ಪ್ರೇಮ್ ಪೂಜಾರ್ ಮತ್ತು ಮತ್ತೊಬ್ಬ ಆರೋಪಿ ಬಂಧಿತರು. ಇದೀಗ ಹರ್ಷಾ ಸೇರಿದಂತೆ ಬಂಧಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆ ಆಗಿದೆ.
ವರದಿ: ವಿಕಾಸ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.