Headlines

ಮೋದಿ ಅವಧಿಯಲ್ಲಿ ವಿದೇಶಗಳಲ್ಲೂ ಬೆಳಗಿದ ಸನಾತನ ಸಂಸ್ಕೃತಿಯ ದೀಪ, ಜಗತ್ತಿನಾದ್ಯಂತ ಪುರಾತನ ಮಂದಿರಗಳ ಜೀರ್ಣೋದ್ಧಾರ – Kannada News | Modi’s Global Temple Restoration: Reviving Sanatan Culture Worldwide

ನವದೆಹಲಿ, ಜುಲೈ 08: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ಇಂಡೋನೇಷ್ಯಾ ಪ್ರವಾಸದ ಭಾಗವಾಗಿ ಅಲ್ಲಿನ ಐತಿಹಾಸಿಕ ‘ಪ್ರಂಬಾನನ್’ ಹಿಂದೂ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರವು ವಿಶ್ವದ ವಿವಿಧ ದೇಶಗಳಲ್ಲಿ ಪಾಳುಬಿದ್ದಿದ್ದ, ಭೂಕಂಪದಿಂದ ಹಾನಿಗೊಳಗಾಗಿದ್ದ ಪುರಾತನ ಹಿಂದೂ ಮತ್ತು ಬೌದ್ಧ ಧರ್ಮದ ಆರಾಧನಾ ಕೇಂದ್ರಗಳನ್ನು ಸ್ವಂತ ಖರ್ಚಿನಲ್ಲಿ ಹೇಗೆ ಜೀರ್ಣೋದ್ಧಾರ ಮಾಡಿದೆ ಎಂಬ ಕುತೂಹಲಕಾರಿ ವಿವರಗಳು ಇಲ್ಲಿವೆ.

ಬಾಂಗ್ಲಾದೇಶ: ರಮಣ ಕಾಳಿ ಮತ್ತು ಜಾಯ್ ಕಾಳಿ ಮಾತಾ ಮಂದಿರ
ರಮಣ ಕಾಳಿ ದೇವಸ್ಥಾನ (2021): 1971 ರಲ್ಲಿ ಪಾಕಿಸ್ತಾನಿ ಸೇನೆಯ ‘ಆಪರೇಷನ್ ಸರ್ಚ್‌ಲೈಟ್’ ದಾಳಿಯ ವೇಳೆ ಧ್ವಂಸಗೊಂಡಿದ್ದ ಐತಿಹಾಸಿಕ ರಮಣ ಕಾಳಿ ಮಂದಿರವನ್ನು ಭಾರತದ ನೆರವಿನೊಂದಿಗೆ ಪುನರ್ನಿರ್ಮಿಸಲಾಯಿತು. 2021 ರಲ್ಲಿ ಇದನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಜಾಯ್ ಕಾಳಿ ಮಾತಾ ಮಂದಿರ (2020): ಬಾಂಗ್ಲಾದೇಶದ ನಟೋರ್‌ನಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಸರ್ಕಾರ ಧನಸಹಾಯ ನೀಡಿದೆ. ಇದರೊಂದಿಗೆ ಆನಂದಮಯಿ ಕಾಳಿ ಮಾತಾ ಮಂದಿರ ಮತ್ತು ರಾಮಕೃಷ್ಣ ಆಶ್ರಮಗಳನ್ನೂ ಭಾರತ ನವೀಕರಿಸಿದೆ.

ವಿಯೆಟ್ನಾಂ: ಮೈ ಸನ್ 
ಪ್ರಾಚೀನ ಚಂಪಾ ಸಾಮ್ರಾಜ್ಯದ ಧಾರ್ಮಿಕ ಕೇಂದ್ರವಾಗಿದ್ದ ಹಾಗೂ ಯುನೆಸ್ಕೋ (UNESCO) ಪಟ್ಟಿಯಲ್ಲಿರುವ ವಿಯೆಟ್ನಾಂನ ‘ಮೈ ಸನ್’ ಶೈವ ದೇವಸ್ಥಾನದ ಸಂಕೀರ್ಣವನ್ನು ಭಾರತ ಸರ್ಕಾರವು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದೆ.

ಮತ್ತಷ್ಟು ಓದಿ: IIMB: ಇಂಡೋನೇಷ್ಯಾದಲ್ಲೂ ತಲೆ ಎತ್ತಲಿದೆ ಐಐಎಂ ಬೆಂಗಳೂರು, ಪ್ರಧಾನಿ ಮೋದಿ ಘೋಷಣೆ

ಕಾಂಬೋಡಿಯಾ: ಅಂಗ್ಕೋರ್ ವಾಟ್ ಮತ್ತು ತಾ ಪ್ರೋಮ್ (2022 ರಿಂದ)
ಭಾರತದ ಹೊರಗಿರುವ ಹಿಂದೂ ನಾಗರಿಕತೆಯ ಅತ್ಯಂತ ದೊಡ್ಡ ಹೆಮ್ಮೆಯಾದ ಕಾಂಬೋಡಿಯಾದ ‘ಅಂಗ್ಕೋರ್ ವಾಟ್’ , ತಾ ಪ್ರೋಮ್ ಮತ್ತು ಪ್ರೀ ವಿಹಾರ್ ಸೇರಿದಂತೆ ಪ್ರಮುಖ ಐತಿಹಾಸಿಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಭಾರತವು ನಿರಂತರವಾಗಿ ಕೈಗೆತ್ತಿಕೊಂಡಿದೆ.

ಲಾವೋಸ್: ವ್ಯಾಟ್ ಫೌ ಶಿವ ದೇವಾಲಯ ಆಗ್ನೇಯ ಏಷ್ಯಾದಲ್ಲೇ ಅತ್ಯಂತ ಹಳೆಯ ಸನಾತನ ಸಂಸ್ಕೃತಿಯ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ, ಲಾವೋಸ್ ದೇಶದ ಸುಮಾರು 1000 ವರ್ಷಗಳಷ್ಟು ಪುರಾತನವಾದ ಯುನೆಸ್ಕೋ ಮಾನ್ಯತೆ ಪಡೆದ ‘ವ್ಯಾಟ್ ಫೌ’ ಶಿವ ದೇವಾಲಯದ ಪ್ರಮುಖ ಭಾಗಗಳನ್ನು ಭಾರತವು ಪುನರ್ನಿರ್ಮಿಸಿದೆ.

ಶ್ರೀಲಂಕಾ: ತಿರುಕೇತೀಶ್ವರಂ ದೇವಸ್ಥಾನ (2015)
ಶ್ರೀಲಂಕಾದಲ್ಲಿರುವ ಭಗವಾನ್ ಶಿವನಿಗೆ ಅರ್ಪಿತವಾದ ಐದು ಪುರಾತನ ‘ಪಂಚ ಈಶ್ವರಂ’ ತಾಣಗಳಲ್ಲಿ ಒಂದಾದ ಐತಿಹಾಸಿಕ ‘ತಿರುಕೇತೀಶ್ವರಂ’ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಭಾರತ ಸರ್ಕಾರವು 326 ಮಿಲಿಯನ್ ಶ್ರೀಲಂಕಾ ರೂಪಾಯಿಗಳ ಧನಸಹಾಯದ ಒಪ್ಪಂದಕ್ಕೆ ಸಹಿ ಹಾಕಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬಹ್ರೇನ್: ಶ್ರೀನಾಥ್‌ಜಿ ಕೃಷ್ಣ ಮಂದಿರ (2019)
ಪ್ರಧಾನಿ ಮೋದಿ ಅವರು ಬಹ್ರೇನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗಲ್ಫ್ ಪ್ರದೇಶದಲ್ಲೇ ಅತ್ಯಂತ ಹಳೆಯದಾದ ಮನಾಮದಲ್ಲಿರುವ 200 ವರ್ಷಗಳಷ್ಟು ಪುರಾತನವಾದ ಶ್ರೀನಾಥ್‌ಜಿ (ಶ್ರೀಕೃಷ್ಣ) ದೇವಸ್ಥಾನದ 4.2 ಮಿಲಿಯನ್ ಡಾಲರ್ ವೆಚ್ಚದ ಪುನರಾಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದರು.

ನೇಪಾಳ ಮತ್ತು ಮ್ಯಾನ್ಮಾರ್: ಭೂಕಂಪ ಪೀಡಿತ ತಾಣಗಳ ರಕ್ಷಣೆ
ನೇಪಾಳ (2017): ಭೂಕಂಪದ ನಂತರ ನೇಪಾಳದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಭಾರತವು 50 ಮಿಲಿಯನ್ ಯುಎಸ್ ಡಾಲರ್ ನೆರವು ನೀಡಿದೆ. ಇದರ ಅಡಿಯಲ್ಲಿ ಐತಿಹಾಸಿಕ ‘ಸೇಟೋ ಮಚ್ಚೀಂದ್ರನಾಥ್’ ಮತ್ತು ‘ಬುಧ ನೀಲಕಂಠ’ ದೇವಸ್ಥಾನ ಸೇರಿದಂತೆ 28 ಹೆರಿಟೇಜ್ ತಾಣಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಮ್ಯಾನ್ಮಾರ್ (2017): ಭೂಕಂಪದಿಂದ ಹಾನಿಗೊಳಗಾಗಿದ್ದ ಮ್ಯಾನ್ಮಾರ್‌ನ ಬಗಾನ್ ಪುರಾತತ್ವ ವಲಯದಲ್ಲಿದ್ದ 12 ಐತಿಹಾಸಿಕ ಪಗೋಡಾಗಳನ್ನು ಭಾರತದ ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ’ (ASI) ಯಶಸ್ವಿಯಾಗಿ ನವೀಕರಿಸಿದೆ. ಇಲ್ಲಿನ ಪ್ರಸಿದ್ಧ ‘ಆನಂದ ದೇವಾಲಯ’ದ ಜೀರ್ಣೋದ್ಧಾರವನ್ನೂ ಭಾರತ ಪೂರ್ಣಗೊಳಿಸಿದೆ.

ಪ್ರಧಾನಿ ಮೋದಿಯವರ ಈ ನೀತಿಯು ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಹಾಗೂ ನೆರೆಯ ರಾಷ್ಟ್ರಗಳೊಂದಿಗೆ ಇರುವ ಆತ್ಮೀಯ ನಾಗರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *