ಕೊಡಗು, ಜು.8: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದಲ್ಲಿ ಕಾಡಾನೆಯೊಂದು ಕೆರೆಯಲ್ಲಿ ಸಿಲುಕಿ 24 ಗಂಟೆಗೂ ಹೆಚ್ಚು ಕಾಲ ನರಳಾಡುತ್ತಿದೆ. ಖಾಸಗಿ ತೋಟದ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದೆ. ಆನೆಯು ಹೊರಬರಲು ಪ್ರಯತ್ನಿಸಿ ವಿಫಲವಾಗಿದ್ದು, ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಸುಮಾರು 24 ಗಂಟೆ ಕಳೆದರೂ ಯಾವುದೇ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿಲ್ಲ. ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಸರಿನಲ್ಲಿ ಹೆಚ್ಚು ಸಮಯವಿದ್ದರೆ ಆನೆಯ ಕಾಲಿಗೆ ಸೋಂಕು ತಗುಲಿ ಕೊಳೆಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅನ್ನಾಹಾರವಿಲ್ಲದೆ ಬಳಲುತ್ತಿರುವ ಆನೆಯನ್ನು ಕೂಡಲೇ ರಕ್ಷಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, ಕನಿಷ್ಠ ಸಾಕಾನೆಗಳನ್ನಾದರೂ ಕರೆತಂದು ಕಾಡಾನೆಯನ್ನು ರಕ್ಷಿಸುವ ಪ್ರಯತ್ನ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ