Headlines

ಮಗನ ಬರ್ತಡೇ ಪ್ರಯುಕ್ತ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿಸಿದ ಮುಖ್ಯಶಿಕ್ಷಕಿ – Kannada News | Government School Headmistress Paints School with Her Own Money to Celebrate Son’s Birthday

ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರುImage Credit source: tv9 kannada

ಹಾವೇರಿ, ಜುಲೈ 08: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ (government school) ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಸೌಕರ್ಯಗಳ ಕೊರತೆ ಎಂಬ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಮುಖ್ಯಶಿಕ್ಷಕಿ ತಮ್ಮ ಸ್ವಂತ ಮಗನ ಜನ್ಮದಿನದ ಆಚರಣೆಯ ದುಂದುವೆಚ್ಚಕ್ಕೆ ಬ್ರೇಕ್ ಹಾಕಿ, ಆ ಹಣದಲ್ಲಿ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಗೆ ಬಣ್ಣ ಬಳಿಯುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಾಲೆಯ ಗೋಡೆಗಳಿಗೆ ರೈಲ್ವೆ ಡಬ್ಬಿಯ (ಕೋಚ್) ರೂಪ ನೀಡಿ ಸರ್ಕಾರಿ ಶಾಲೆಗೆ ಹೊಸ ಕಳೆ ತಂದಿದ್ದಾರೆ.

ಬಣ್ಣವಿಲ್ಲದೇ ಕಳೆಗುಂದಿದ್ದ ಶಾಲೆ

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಇದೀಗ ಹೊಸ ಕಳೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರು ತಮ್ಮ ಮಗ ಮಲ್ಲೀಕ್ ರೆಹನ್ (26) ಜನ್ಮದಿನ ಪ್ರಯುಕ್ತ ಶಾಲೆಗೆ ಬಣ್ಣ ಮಾಡಿಸಿದ್ದಾರೆ. ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರು ಕಳೆದ ನಾಲ್ಕು ವರ್ಷಗಳಿಂದ ಇದೇ ಶಾಲೆಯಲ್ಲಿ ಮುಖ್ಯಶಿಕ್ಷಕಿ ಆಗಿದ್ದಾರೆ. ಈ ಶಾಲೆಯ ಕೊಠಡಿಗಳಿಗೆ ಸರಿಯಾಗಿ ಬಣ್ಣ ಬಳಿಯದ ಕಾರಣ ಶಾಲಾ ಆವರಣ ಕಳೆಗುಂದಿತ್ತು. ಇದರ ಬಗ್ಗೆ ಪೋಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಮುಖ್ಯಶಿಕ್ಷಕಿ ಉಮೈ ಸಲ್ಮಾ, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. “ನೀವು ಶಾಲೆಯ ವಾರ್ಷಿಕೋತ್ಸವದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳಿ, ನಾನು ನನ್ನ 26 ವರ್ಷದ ಮಗ ಮಲ್ಲಿಕ್ ರೆಹನ್ ಹುಟ್ಟಹಬ್ಬದ ನೆನಪಿಗಾಗಿ ಶಾಲೆಗೆ ಸಂಪೂರ್ಣ ಬಣ್ಣ ಹಚ್ಚಿಸುವ ಜವಾಬ್ದಾರಿ ಹೊರುತ್ತೇನೆ” ಎಂದು ತಿಳಿಸಿದ್ದರು. ಅದರಂತೆ ತಮ್ಮ ಸ್ವಂತ ಉಳಿತಾಯದ ಸುಮಾರು 2 ಲಕ್ಷ ರೂ ಹಣವನ್ನು ಖರ್ಚು ಮಾಡಿ ಇಡೀ ಶಾಲೆಗೆ ಹೊಸ ರೂಪ ನೀಡಿದ್ದಾರೆ.

Paint

  90ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ

ಈ ಸರ್ಕಾರಿ ಉರ್ದು ಶಾಲೆಯಲ್ಲಿ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 90ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಶಾಲೆಗೆ ಬಣ್ಣ ಹಚ್ಚಿದಕ್ಕೆ ಮಕ್ಕಳೂ ಖುಷಿಯಾಗಿದ್ದಾರೆ. ಶಾಲೆಗೆ ಆಗಮಿಸುತ್ತಿದ್ದಂತೆ ರೈಲ್ವೆ ಡಬ್ಬಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೇವೆ ಎನ್ನುವ ಮನೋಭಾವ ಮಕ್ಕಳಲ್ಲಿ ಉಂಟಾಗಿದೆ.‌ ಆ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​

ಒಟ್ಟಿನಲ್ಲಿ ಮಗನ ಹುಟ್ಟಹಬ್ಬದ ಹೆಸರಿನಲ್ಲಿ ಅನಗತ್ಯ ಹಣ ಪೋಲು ಮಾಡದೆ, ತಾವು ಕರ್ತವ್ಯ ನಿರ್ವಹಿಸುವ ಶಾಲೆಯನ್ನೇ ಸೃಜನಾತ್ಮಕವಾಗಿ ಸಕಲ ಸೌಂದರ್ಯದೊಂದಿಗೆ ಕಂಗೊಳಿಸುವಂತೆ ಮಾಡಿದ ಮುಖ್ಯಶಿಕ್ಷಕಿ ಉಮೈ ಸಲ್ಮಾ ಅವರ ಕಾರ್ಯಕ್ಕೆ ಹಂಸಭಾವಿ ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *