ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನಡುವಿನ ವೈಚಾರಿಕ ಭಿನ್ನಾಭಿಪ್ರಾಯಗಳು ಆಟಗಾರರಲ್ಲಿ ಅಭದ್ರತೆಯನ್ನು ಮೂಡಿಸುತ್ತಿವೆ ಎಂದು ದಿನೇಶ್ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣವೇನು?
ದಿನೇಶ್ ಕಾರ್ತಿಕ್ ಅವರ ಪ್ರಕಾರ, ಈ ಇಬ್ಬರು ದಿಗ್ಗಜರ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣ ‘ದೀರ್ಘಾವಧಿ ಯೋಜನೆ vs ತತ್ಕ್ಷಣದ ಗೆಲುವು’.
- ಅಜಿತ್ ಅಗರ್ಕರ್ ಅವರ ನಿಲುವು: ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಮತ್ತು ಸರಣಿಗಳಲ್ಲಿ ಆಟಗಾರರನ್ನು ರೊಟೇಷನ್ ಮಾಡಲು ಬಯಸುತ್ತಿದ್ದಾರೆ.
- ಗೌತಮ್ ಗಂಭೀರ್ ಅವರ ನಿಲುವು: ಹೆಡ್ ಕೋಚ್ ಹುದ್ದೆಯಲ್ಲಿರುವ ಗಂಭೀರ್ ಮೇಲೆ ಪ್ರತಿ ಪಂದ್ಯವನ್ನೂ ಗೆಲ್ಲಲೇಬೇಕಾದ ತೀವ್ರ ಒತ್ತಡವಿದೆ. ಹೀಗಾಗಿ ಅವರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದೆ, ತಕ್ಷಣದ ಯಶಸ್ಸಿಗಾಗಿ ಹಠ ಹಿಡಿಯುತ್ತಿದ್ದಾರೆ.
ಅಂದರೆ ಅಗರ್ಕರ್ ‘ದೀರ್ಘಾವಧಿ ಯೋಜನೆಗೆ ಒತ್ತು ನೀಡುತ್ತಿದ್ದರೆ, ಗಂಭೀರ್ ತತ್ಕ್ಷಣದ ಗೆಲುವಿಗಾಗಿ ತಂಡ ಕಟ್ಟುವ ಇರಾದೆಯಲ್ಲಿದ್ದಾರೆ. ಇದುವೇ ಇಬ್ಬರ ನಡುವಣ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಆಟಗಾರರಲ್ಲಿ ಆತಂಕ!
ಈ ಇಬ್ಬರ ನಡುವಿನ ಹೊಂದಾಣಿಕೆಯ ಕೊರತೆಯು ಇತ್ತೀಚಿನ ಸರಣಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೂ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಲಾಯಿತು.
ನಂತರ ಇಂಗ್ಲೆಂಡ್ ಸರಣಿಯಲ್ಲಿ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿ, ಕೇವಲ ಒಂದೆರಡು ಪಂದ್ಯಗಳಲ್ಲೇ ಕೈಬಿಡಲಾಯಿತು. ಈ ರೀತಿಯ ಅಸ್ಥಿರ ನಿರ್ಧಾರಗಳಿಂದಾಗಿ ಸದ್ಯ ತಂಡದಲ್ಲಿರುವ ಆಟಗಾರರು ತಮ್ಮ ಸ್ಥಾನದ ಬಗ್ಗೆ ತೀವ್ರ ಆತಂಕ ಎದುರಿಸುತ್ತಿದ್ದಾರೆ.
ಲೈವ್ ಕಾಮೆಂಟರಿಯಲ್ಲೇ ಡಿಕೆ ಕಿಡಿ!
ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಆಲ್ ರೌಂಡರ್ ಶಿವಂ ದುಬೆ ಅವರಿಗಿಂತ ಮುಂಚಿತವಾಗಿ ಬೌಲರ್ ಹರ್ಷಿತ್ ರಾಣಾ ಅವರನ್ನು ಪವರ್ಪ್ಲೇನಲ್ಲಿ ಬ್ಯಾಟಿಂಗ್ಗೆ ಕಳುಹಿಸಿದ ಗಂಭೀರ್ ಅವರ ವಿಚಿತ್ರ ತಂತ್ರವನ್ನು ಕಾರ್ತಿಕ್ ಕಠಿಣವಾಗಿ ಟೀಕಿಸಿದ್ದಾರೆ.
“ಹರ್ಷಿತ್ ರಾಣಾ ದೇಶಿ ಕ್ರಿಕೆಟ್ನಲ್ಲೇ ಎಂದೂ ಪವರ್ಪ್ಲೇನಲ್ಲಿ ಬ್ಯಾಟ್ ಮಾಡಿಲ್ಲ, ಅಂತಹದರಲ್ಲಿ ದುಬೆಗಿಂತ ಮುಂಚೆ ಅವರನ್ನು ಕಳುಹಿಸುವುದು ಶುದ್ಧ ಹುಚ್ಚುತನ” ಎಂದು ಕಾರ್ತಿಕ್ ಲೈವ್ ಕಾಮೆಂಟರಿಯಲ್ಲೇ ಆಕ್ರೋಶ ಹೊರಹಾಕಿದ್ದರು.
ಇದೀಗ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ನಡುವೆ ಶೀತಲ ಸಮರ ಏರ್ಪಟ್ಟಿರುವ ವಿಚಾರವನ್ನು ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್ vs ಸ್ಪೇನ್ ಅಲ್ಲ, ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ!
ಈ ಶೀತಲ ಸಮರವು ಕೇವಲ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯವಾಗಿ ಉಳಿದಿಲ್ಲ. ಬದಲಾಗಿ ಇದು ಇಡೀ ಭಾರತೀಯ ಕ್ರಿಕೆಟ್ನ ಭವಿಷ್ಯವನ್ನು ಅನಿಶ್ಚಿತತೆಯತ್ತ ತಳ್ಳುತ್ತಿದೆ ಎಂಬುದಕ್ಕೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲುಗಳೇ ಸಾಕ್ಷಿ.
Published On – 2:04 pm, Tue, 14 July 26