ಬಳ್ಳಾರಿ, ಜುಲೈ 18: ಜಿಲ್ಲೆಯ ಸಂಡೂರು ತಾಲ್ಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಜೈನ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದೆ. ‘ವಿಜಯನಗರ ತಿರುಗಾಟ’ ಸಂಶೋಧನಾ ತಂಡವು ಈ ಮಹತ್ವದ ಐತಿಹಾಸಿಕ ಸಾಕ್ಷ್ಯವನ್ನು ಶೋಧಿಸಿದೆ.
ಪ್ರೊ. ಎಚ್. ತಿಪ್ಪೇಸ್ವಾಮಿ ನೇತೃತ್ವದ ಸಂಶೋಧನಾ ತಂಡವು ಡಿ. ಅಂತಾಪುರ ಗ್ರಾಮದ ನಿವಾಸಿ ಗ್ಯಾನಪ್ಪ ಎಂಬುವವರ ಹೊಲದಲ್ಲಿ ಈ ಗ್ರಾನೈಟ್ (ಕಣಶಿಲೆ) ಶಾಸನವನ್ನು ಪತ್ತೆಹಚ್ಚಿದೆ. ಈ ಶಾಸನವು ಕ್ರಿ.ಶ. 1395ರ ವಿಜಯನಗರದ ಪ್ರಸಿದ್ಧ ದೊರೆ ಎರಡನೇ ಹರಿಹರರಾಯರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಜೈನ ಧರ್ಮದ 17ನೇ ತೀರ್ಥಂಕರರಾದ ಕುಂಥುನಾಥರಿಗೆ ಭೂಮಿಯನ್ನು ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ (ಸರ್ವಮಾನ್ಯವಾಗಿ) ದಾನವಾಗಿ ನೀಡಿದ ಅಮೂಲ್ಯ ವಿಚಾರವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ವಿಶೇಷವೆಂದರೆ, ಈ ಶಿಲೆಯಲ್ಲಿ ಸೂರ್ಯ, ಚಂದ್ರ ಹಾಗೂ ಜಿನಮೂರ್ತಿಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ.
ಇದೇ ಜಾಗದಲ್ಲಿ ಕುಂಥುನಾಥರಿಗೆ ಸಂಬಂಧಿಸಿದ ಇನ್ನೂ ಎರಡು ಶಾಸನಗಳನ್ನು ಸಂಶೋಧಕರು ಗುರುತಿಸಿದ್ದಾರೆ. ವಾತಾವರಣದ ಏರುಪೇರುಗಳಿಂದ ಹಾಳಾಗುತ್ತಿರುವ ಈ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ತಕ್ಷಣವೇ ಸಂರಕ್ಷಿಸಬೇಕು ಎಂದು ಸಂಶೋಧನಾ ತಂಡವು ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ಮನವಿ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ