Headlines

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಗ್ ರಿಲೀಫ್; ಆಫೀಸ್ ಧ್ವಂಸ ಕ್ರಮಕ್ಕೆ ಕೊಲ್ಕತ್ತಾ ಹೈಕೋರ್ಟ್ ತಡೆ – Kannada News | Big Relief for Abhishek Banerjee as High Court halts demolition of his office in Amtala

ಕೊಲ್ಕತ್ತಾ, ಜುಲೈ 19: ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೆ ಕೊಲ್ಕತ್ತಾ ಹೈಕೋರ್ಟ್ ಇಂದು ದೊಡ್ಡ ರಿಲೀಫ್ ನೀಡಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಕಟ್ಟಡದ ಧ್ವಂಸ ಕಾರ್ಯಕ್ಕೆ ನ್ಯಾಯಾಲಯ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಅಥವಾ ಜುಲೈ ಅಂತ್ಯದವರೆಗೆ ಪ್ರಸ್ತುತ ಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ. ಇದರಿಂದಾಗಿ ಅಭಿಷೇಕ್ ಬ್ಯಾನರ್ಜಿ ನಿಟ್ಟುಸಿರು ಬಿಡುವಂತಾಗಿದೆ.

ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ರಾಜಾ ಬಸು ಚೌಧರಿ ಅವರ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಲೀಪ್ಸ್ ಆ್ಯಂಡ್ ಬೌಂಡ್ಸ್ ಕಂಪನಿಗೆ ಸೇರಿದ್ದ ಈ ಕಚೇರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ

ಹೈಕೋರ್ಟ್ ಆದೇಶವೇನು?:

ಕೊಲ್ಕತ್ತಾ ಹೈಕೋರ್ಟ್ ತನ್ನ ಆದೇಶದಲ್ಲಿ “ಮುಂದಿನ ವಿಚಾರಣೆಯ ತನಕ ಅಥವಾ ಜುಲೈ ಅಂತ್ಯದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಈ ಆಸ್ತಿಯ ಸ್ವರೂಪ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಜುಲೈ 15ರಂದು ಜಿಲ್ಲಾಧಿಕಾರಿ ಅಥವಾ ಕಾರ್ಯನಿರ್ವಾಹಕ ಅಧಿಕಾರಿ ಹೊರಡಿಸಿದ ಆದೇಶದ ಅನ್ವಯ ನಡೆಸಲಾಗುತ್ತಿರುವ ಮುಂದಿನ ಎಲ್ಲಾ ಧ್ವಂಸ ಕಾರ್ಯಗಳನ್ನು ಪ್ರತಿವಾದಿಗಳು ತಕ್ಷಣವೇ ನಿಲ್ಲಿಸಬೇಕು” ಎಂದು ತಿಳಿಸಿದೆ.

ತಮ್ಮ ಬಳಿ ಜಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾನೂನುಬದ್ಧ ಹಾಗೂ ಸಿಂಧುತ್ವ ಹೊಂದಿರುವ ದಾಖಲೆಗಳಿದ್ದರೂ ಸಹ ಆಡಳಿತ ಮಂಡಳಿಯು ಕಚೇರಿಯನ್ನು ಧ್ವಂಸಗೊಳಿಸುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇದನ್ನೂ ಓದಿ: ಬಂಗಾಳದ ರಥಯಾತ್ರೆಯಲ್ಲಿ ದುರಂತ: ವಿದ್ಯುತ್ ತಂತಿಗೆ ತಗುಲಿದ ರಥ, 15 ಭಕ್ತರಿಗೆ ವಿದ್ಯುತ್ ಆಘಾತ, ಹಲವರ ಸ್ಥಿತಿ ಗಂಭೀರ

ಆಡಳಿತ ಮಂಡಳಿಯ ಬುಲ್ಡೋಜರ್ ಕಾರ್ಯಾಚರಣೆ:

ಶನಿವಾರ ಸ್ಥಳೀಯ ಆಡಳಿತವು ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ 5 ಅಂತಸ್ತಿನ ಮುಚ್ಚಿದ ಕಚೇರಿ ಕಟ್ಟಡದ ವಿರುದ್ಧ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆಸಿತ್ತು. ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಈ ಕಟ್ಟಡವನ್ನು ‘ಲೀಪ್ಸ್ ಆ್ಯಂಡ್ ಬೌಂಡ್ಸ್’ ಕಂಪನಿಯಿಂದ ಖರೀದಿಸಿದ ಜಾಗದಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಅಧಿಕೃತ ಬಿಲ್ಡಿಂಗ್ ಪ್ಲಾನ್ ಇಲ್ಲದೆ ನಿರ್ಮಿಸಲಾಗಿದೆ. ಹೀಗಾಗಿಯೇ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಶನಿವಾರದ ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಮತ್ತು ಬಂಗಾಳ ಪೊಲೀಸರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *