
ನಟ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ, ಸಕ್ರಿಯವಾಗಿ ಚುನಾವಣಾ ರಾಜಕೀಯಕ್ಕೆ ಇಳಿದಾಗ ಹಲವಾರು ಟೀಕೆ, ಅನುಮಾನಗಳನ್ನು ಎದುರಿಸಬೇಕಾಯ್ತು. ಅವರದ್ದೇ ಚಿತ್ರರಂಗದ ಕೆಲವರು ಸಹ ವಿಜಯ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಅವರಲ್ಲಿ ನಟ ಪ್ರಕಾಶ್ ರೈ ಸಹ ಒಬ್ಬರು. ಪ್ರಕಾಶ್ ರೈ ಅಂತೂ ಒಮ್ಮೆ ವಿಜಯ್ ಅವರನ್ನು ಟೀಕೆಯ ಜೊತೆಗೆ ಕೆಟ್ಟದಾಗಿ ವ್ಯಂಗ್ಯ ಸಹ ಮಾಡಿದ್ದರು. ವಿಜಯ್ ನಟಿಸಿದ್ದ ‘ಗಿಲ್ಲಿ’ ಸಿನಿಮಾನಲ್ಲಿ ಪ್ರಕಾಶ್, ತ್ರಿಷಾರನ್ನು ‘ಚೆಲ್ಲಂ’ ಎಂದು ಕರೆಯುತ್ತಾರೆ, ಆ ಡೈಲಾಗ್ ವೈರಲ್ ಆಗಿದೆ. ವಿಜಯ್ ಅವರನ್ನು ಟೀಕೆ ಮಾಡುವಾಗ ಪ್ರಕಾಶ್ ರೈ, ವಿಜಯ್ ಅವರನ್ನು ‘ಚೆಲ್ಲಂ’ ಎಂದು ಕರೆದು ಹಿಯಾಳಿಸಿದ್ದರು.
ವಿಶೇಷವೆಂದರೆ ಪ್ರಕಾಶ್ ರೈ ಅವರು ವಿಜಯ್ ಅನ್ನು ಟೀಕೆ ಮಾಡಿದ ಮರುದಿನವೇ ಈ ಇಬ್ಬರೂ ಒಂದೇ ಸಿನಿಮಾನಲ್ಲಿ ಒಂದೇ ದೃಶ್ಯದಲ್ಲಿ ನಟಿಸಬೇಕಿತ್ತು. ಟೀಕೆಯ ಬಳಿಕ ಇಬ್ಬರು ಸಿನಿಮಾ ಸೆಟ್ನಲ್ಲಿ ಎದುರಾಗ ನಡೆದಿದ್ದೇನು ಎಂದು ಸಿನಿಮಾದ ನಿರ್ದೇಶಕ ಎಚ್ ವಿನೋದ್ ವಿವರಿಸಿದ್ದಾರೆ. ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣ ನಡೆಯುವಾಗ ವಿಜಯ್ ಅವರು ಒಂದು ರಾಜಕೀಯ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಆ ಭಾಷಣದ ಕೆಲವು ವಿಷಯಗಳ ಬಗ್ಗೆ ಪ್ರಕಾಶ್ ರೈ ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಟ್ವೀಟ್ನಲ್ಲಿ ‘ಚಲ್ಲಂ’ ಎಂದು ವಿಜಯ್ ಅವರನ್ನು ಹೀಯಾಳಿಸುವಂತೆ ಕರೆದಿದ್ದರು.
ಇದನ್ನೆಲ್ಲ ನೋಡಿ ‘ಜನ ನಾಯಗನ್’ ಸಿನಿಮಾದ ನಿರ್ದೇಶಕ ಎಚ್ ವಿನೋದ್ ಅವರಿಗೆ ಬಹಳ ಭಯವಾಗಿತ್ತಂತೆ. ಏಕೆಂದರೆ ಪ್ರಕಾಶ್ ರೈ ಟ್ವೀಟ್ ಮಾಡಿದ ಮರು ದಿನವೇ ಇಬ್ಬರೂ ನಟರು ಒಟ್ಟಿಗೆ ಒಂದೇ ಸೀನ್ನಲ್ಲಿ ನಟಿಸಬೇಕಿತ್ತಂತೆ. ಸೆಟ್ನಲ್ಲಿ ಏನಾಗುತ್ತದೆಯೋ ಎಂಬ ಭಯದಲ್ಲಿಯೇ ವಿನೋದ್ ಅವರು ಸೆಟ್ಗೆ ಹೋದರಂತೆ. ಹೋಗುವಷ್ಟರಲ್ಲಿ ನಟ ಪ್ರಕಾಶ್ ರೈ ಅವರು ಬಂದಿದ್ದರಂತೆ. ಅದಾದ ಸ್ವಲ್ಪ ಹೊತ್ತಿನ ಬಳಿಕ ವಿಜಯ್ ಸಹ ಬಂದರಂತೆ. ಆಗಂತೂ ವಿನೊದ್ ಅವರಿಗೆ ಎದೆ ಬಡಿತ ಹೆಚ್ಚಾಗಿತ್ತಂತೆ. ಆದರೆ ವಿಜಯ್ ಹಾಗೂ ಪ್ರಕಾಶ್ ರೈ, ಏನೂ ನಡೆದೇ ಇಲ್ಲವೇನೋ ಎಂಬಂತೆ ಪರಸ್ಪರರಿಗೆ ವಿಶ್ ಮಾಡಿ, ನಗುತ್ತಾ ಮಾತನಾಡಿಕೊಂಡರಂತೆ. ಶೂಟಿಂಗ್ ವೇಳೆಯಲ್ಲೂ ಸಹ ತಮಾಷೆ ಮಾಡುತ್ತಾ, ಮಾತನಾಡುತ್ತಾ ಆರಾಮವಾಗಿ ಇದ್ದರಂತೆ.
ಇದನ್ನೂ ಓದಿ:ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್ನಲ್ಲಿ ವಿಜಯ್ ಹೆಸರು ಹೇಗಿದೆ?
ಇಬ್ಬರೂ ನಟರು ರಾಜಕೀಯ ಬೇರೆ, ಸಿನಿಮಾ ಬೇರೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ವಿಜಯ್ ಸಹ ರಾಜಕೀಯ ಟೀಕೆಯನ್ನು ವೈಯಕ್ತಿಕ ನೆಲೆಯಲ್ಲಿ ನೋಡುವ ವ್ಯಕ್ತಿಯಲ್ಲ ಎಂದು ವಿನೋದ್ ಹೇಳಿದ್ದಾರೆ. ಪ್ರಕಾಶ್ ಅವರು ಈ ಹಿಂದೆ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರನ್ನೂ ಸಹ ಸಾಕಷ್ಟು ಟೀಕೆ ಮಾಡಿದ್ದರು. ಆದರೆ ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರೈ ಅವರು ಒಟ್ಟಿಗೆ ‘ಓಜಿ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾನಲ್ಲಿ ಪ್ರಕಾಶ್ ರೈ ಪಾತ್ರದ ಬಲಗೈ ಭಂಟನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ