ಹಾಸನ, ಜು.22: ಕೆಲಸದ ಸಮಯ ಮುಗಿದಿದ್ದರೂ ಹೊರಹೋಗಲು ಬಿಡದೆ, ಗೇಟ್ಗೆ ಬೀಗ ಹಾಕಿ ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಒಬ್ಬರು ಕಿರುಕುಳ ನೀಡಿದ್ದಾರೆನ್ನಲಾದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್ನ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಮ್ಯಾನೇಜರ್ನ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬ್ಯಾಂಕ್ನ ಸಿಬ್ಬಂದಿಯೊಬ್ಬರು, “ಸಂಜೆ 5 ಗಂಟೆಯಾಗಿದೆ, ನನ್ನ ಪಾಲಿನ ಕೆಲಸ ಸಂಪೂರ್ಣವಾಗಿ ಮುಗಿದಿದೆ. ನನಗೆ ಬೇರೆ ಕೆಲಸವಿರುವುದರಿಂದ ಹೋಗಲು ಬಿಡಿ, ನಾನು ಓವರ್ ಟೈಮ್ ಮಾಡುವುದಿಲ್ಲ” ಎಂದು ಮ್ಯಾನೇಜರ್ ಬಳಿ ವಿನಂತಿಸಿಕೊಂಡಿದ್ದಾರೆ. ಆದರೆ, ಸಿಬ್ಬಂದಿಯ ಮಾತಿಗೆ ಕಿವಿಕೊಡದ ಮ್ಯಾನೇಜರ್, ಕೂಡಲೇ ಓಡಿಹೋಗಿ ಬ್ಯಾಂಕ್ನ ಪ್ರಮುಖ ಗೇಟ್ಗೆ ಬೀಗ ಜಡಿದು, ಹೊರಹೋಗದಂತೆ ತಡೆದು ನಿಂತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಸಿಬ್ಬಂದಿಯನ್ನು ಒತ್ತಾಯಪೂರ್ವಕವಾಗಿ ತಡೆದು ನಿಲ್ಲಿಸಿ ಗೇಟ್ಗೆ ಬೀಗ ಹಾಕುತ್ತಿರುವ ದೃಶ್ಯಗಳನ್ನು ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೇಲಧಿಕಾರಿಗಳ ಈ ರೀತಿಯ ದೌರ್ಜನ್ಯ ಹಾಗೂ ಕಿರುಕುಳದ ವಿರುದ್ಧ ಸಾರ್ವಜನಿಕರು ಮತ್ತು ಬ್ಯಾಂಕಿಂಗ್ ನೌಕರರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಕಾವೇರಿ ಗ್ರಾಮೀಣ ಬ್ಯಾಂಕ್ನ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ