ನವದೆಹಲಿ, ಜುಲೈ 23: ದೇಶದಲ್ಲಿರುವ ಸರ್ಕಾರೇತರ ಸಂಸ್ಥೆಗಳು , ದತ್ತಿ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಚರ್ಚ್ಗಳು ಸ್ವೀಕರಿಸುವ ವಿದೇಶಿ ಕೊಡುಗೆಗಳನ್ನು ನಿಯಂತ್ರಿಸುವ ಎಫ್ಸಿಆರ್ಎ(FCRA) ತಿದ್ದುಪಡಿ ಮಸೂದೆ 2026′ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಹಾಗೂ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ತಿದ್ದುಪಡಿಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ), ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಹಾಗೂ ವಿವಿಧ ಚರ್ಚ್ ಸಂಸ್ಥೆಗಳು ಇದನ್ನು ಕಠಿಣ ಕಾನೂನು ಎಂದು ಕರೆದು ತೀವ್ರವಾಗಿ ವಿರೋಧಿಸುತ್ತಿವೆ.
FCRA ಮಸೂದೆ 2026 ರಲ್ಲಿ ಏನಿದೆ?
ಆಸ್ತಿ ಮತ್ತು ಸಂಸ್ಥೆಗಳ ಮೇಲ್ವಿಚಾರಣೆ: ಯಾವುದೇ ಒಂದು ಸಂಸ್ಥೆಯ ಎಫ್ಸಿಆರ್ಎ ನೋಂದಣಿ ರದ್ದಾದರೆ, ನವೀಕರಣಗೊಳ್ಳದಿದ್ದರೆ ಆ ವಿದೇಶಿ ಹಣದಿಂದ ನಿರ್ಮಿಸಲಾದ ಶಾಲೆಗಳು, ಆಸ್ಪತ್ರೆಗಳು, ಕಟ್ಟಡಗಳು ಹಾಗೂ ಆಸ್ತಿಗಳನ್ನು ನಿರ್ವಹಿಸಲು ಅಥವಾ ವಿಲೇವಾರಿ ಮಾಡಲು ಸರ್ಕಾರವು ‘ವಿಶೇಷ ಅಧಿಕಾರಿ ಅಥವಾ ಪ್ರಾಧಿಕಾರವನ್ನು ನೇಮಿಸುತ್ತದೆ.
ವಿದೇಶಿ ಹಣ ಬಳಕೆಗೆ ತಡೆ: ನೋಂದಣಿ ರದ್ದಾದ ತಕ್ಷಣವೇ ಆ ಸಂಸ್ಥೆಯು ತನ್ನ ಬಳಿಯಿರುವ ವಿದೇಶಿ ದೇಣಿಗೆ ಅಥವಾ ಆ ಹಣದಿಂದ ಸೃಷ್ಟಿಯಾದ ಆಸ್ತಿಪಾಸ್ತಿಗಳನ್ನು ಬಳಸುವಂತಿಲ್ಲ.
ನೇರ ಖಾತೆ ಕಡ್ಡಾಯ: ಎಲ್ಲಾ ವಿದೇಶಿ ದೇಣಿಗೆಗಳು ದೆಹಲಿಯಲ್ಲಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮುಖ್ಯ ಶಾಖೆಯ ಎಫ್ಸಿಆರ್ಎ ಖಾತೆಗೆ ಮಾತ್ರ ಬರಬೇಕು.
ಆಡಳಿತಾತ್ಮಕ ವೆಚ್ಚದ ಮಿತಿ: ವಿದೇಶಿ ದೇಣಿಗೆಯಲ್ಲಿ ಸಂಸ್ಥೆಯ ಆಡಳಿತಾತ್ಮಕ ಅಥವಾ ಅಧಿಕಾರಿಗಳ ವೆಚ್ಚಕ್ಕಾಗಿ ಬಳಸುವ ಮಿತಿಯನ್ನು ಶೇ. 50 ರಿಂದ ಶೇ. 20 ಕ್ಕೆ ಇಳಿಸಲಾಗಿದೆ.
ಮತ್ತಷ್ಟು ಓದಿ: ಎಫ್ಸಿಆರ್ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು
ವಿಪಕ್ಷಗಳು ಮತ್ತು ಚರ್ಚ್ಗಳು ವಿರೋಧಿಸುತ್ತಿರುವುದೇಕೆ?
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಈ ಮಸೂದೆಯು ದಶಕಗಳಿಂದ ಬಡವರು ಹಾಗೂ ಅಂಚಿನಲ್ಲಿರುವ ಜನರಿಗೆ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಗಳನ್ನು ನಶಿಸಿಹೋಗುವಂತೆ ಮಾಡುತ್ತದೆ ಮತ್ತು ಕಾರ್ಯಾಂಗಕ್ಕೆ ಅತಿಯಾದ ಅಧಿಕಾರ ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ: ಭಾರತೀಯ ಸಂವಿಧಾನದ ವಿಧಿ 19 (ಸ್ವಾತಂತ್ರ್ಯದ ಹಕ್ಕು) ಮತ್ತು ವಿಧಿ 26 (ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕು) ನೀಡುವ ರಕ್ಷಣೆಯನ್ನು ಈ ಮಸೂದೆ ಕಸಿದುಕೊಳ್ಳುತ್ತದೆ ಎಂದು ಮಿಜೋರಾಂ ಹಾಗೂ ಕೇರಳದ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಚರ್ಚ್ ಸಂಸ್ಥೆಗಳ ಆತಂಕ: ಕೇರಳ ಕ್ಯಾಥೋಲಿಕ್ ಬಿಷಪ್ಗಳ ಮಂಡಳಿ (KCBC) ಹಾಗೂ ಮಿಜೋರಾಂ ಚರ್ಚ್ ಒಕ್ಕೂಟಗಳು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದು, “ಈ ಕಠಿಣ ನಿಯಮಗಳಿಂದಾಗಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಉಚಿತ ಆಸ್ಪತ್ರೆಗಳು, ಶಾಲೆಗಳು ಮತ್ತು ಅನಾಥಾಶ್ರಮಗಳನ್ನು ನಡೆಸುವುದು ತೀವ್ರ ಕಷ್ಟಕರವಾಗಲಿದೆ” ಎಂದು ತಿಳಿಸಿವೆ.
ಕೇಂದ್ರ ಸರ್ಕಾರದ ಸಮರ್ಥನೆ ಏನು?
ಹಣದ ದುರುಪಯೋಗ ಮತ್ತು ಪಾರದರ್ಶಕತೆ: ವಿದೇಶಗಳಿಂದ ಬರುವ ಹಣವು ನಿರ್ದಿಷ್ಟವಾದ ಸಾಮಾಜಿಕ ಅಥವಾ ದತ್ತಿ ಕಾರ್ಯಗಳಿಗೇ ಬಳಕೆಯಾಗುತ್ತಿದೆಯೇ ಅಥವಾ ಹಣವನ್ನು ಬೇರೆ ಮಾರ್ಗಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಈ ಬಿಗಿ ಕ್ರಮ ಅಗತ್ಯ.
ರಾಷ್ಟ್ರೀಯ ಭದ್ರತೆ: ವಿದೇಶಿ ಹಣವನ್ನು ಬಳಸಿಕೊಂಡು ಭಾರತದ ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಗಳನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಎಫ್ಸಿಆರ್ಎ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಸರ್ಕಾರವು ಪ್ರಸಿದ್ಧ ಎನ್ಜಿಒಗಳಾದ ‘ಆಕ್ಸ್ಫ್ಯಾಮ್ ಇಂಡಿಯಾ’ (Oxfam India), ‘ಅಮ್ನೆಸ್ಟಿ ಇಂಟರ್ನ್ಯಾಷನಲ್’ (Amnesty International) ಹಾಗೂ ‘ಸೆಂಟರ್ ಫಾರ್ ಪಾಲಿಸಿ ರಿಸರ್ಚ್’ (CPR) ನಂತಹ ಸಂಸ್ಥೆಗಳ ಎಫ್ಸಿಆರ್ಎ ಪರವಾನಗಿಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವು ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೆ ಈ ಮಸೂದೆಯನ್ನು ಯಥಾವತ್ತಾಗಿ ಮಂಡಿಸಿ ಅಂಗೀಕರಿಸಲು ನಿರ್ಧರಿಸಿದೆ. ಆದರೆ, ವಿಪಕ್ಷಗಳು ಸರ್ವಪಕ್ಷ ಸಭೆ ಕರೆದು ಸಮಗ್ರ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ