ಬಾಲಿವುಡ್ನ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್ನಲ್ಲಿ ಯಶ್ ಭಾಗಿ ಆಗಿದ್ದಾರೆ. ಈ ವೇಳೆ ವಿದೇಶದ ಮಾಧ್ಯಮದ ಜೊತೆ ಮಾತನಾಡಿರುವ ಅವರು, ರಾವಣನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ತರುವುದು ತಮಗೆ ದೊರೆತ ದೊಡ್ಡ ಸಂತೋಷ ಎಂದು ಹೇಳಿದ್ದಾರೆ.
ಇದರೊಂದಿಗೆ ಚಿತ್ರದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ರಾಮಾಯಣ ಪ್ರತಿಯೊಬ್ಬರಿಗೂ ತಿಳಿದಿರುವ ಕಥೆ. ಈ ಕಥೆಯನ್ನು ಈಗಾಗಲೇ ಹಳ್ಳಿಗಳ ಪುಟ್ಟ ನಾಟಕಗಳಿಂದ ಹಿಡಿದು ಟೆಲಿವಿಷನ್, ವಿವಿಧ ಭಾಷೆಗಳ ಸಿನಿಮಾಗಳವರೆಗೆ ಹಲವು ರೀತಿಯಲ್ಲಿ ಹೇಳಲಾಗಿದೆ. ಎಷ್ಟೋ ಜನರು ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗಿರುವಾಗ, ಈ ಚಿತ್ರದಲ್ಲಿ ಅದನ್ನು ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಮತ್ತು ಅದು ಅಷ್ಟೇ ನೈಜವಾಗಿ ಕಾಣಿಸುವಂತೆ ಮಾಡುವುದು ನಮಗೆ ಇದ್ದ ದೊಡ್ಡ ಸವಾಲಾಗಿತ್ತು’ ಎಂದು ಯಶ್ ವಿವರಿಸಿದ್ದಾರೆ. ಪ್ರೇಕ್ಷಕರಿಗೆ ತುಂಬಾ ರೋಮಾಂಚನ ನೀಡುವಂತಹ ವಿಭಿನ್ನ ಪ್ರಯತ್ನವನ್ನು ತಾವು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಚಿತ್ರದ ಸಹ-ನಿರ್ಮಾಪಕರೂ ಹೌದು
ಯಶ್ ಈ ಚಿತ್ರಕ್ಕೆ ಕೇವಲ ನಟರಷ್ಟೇ ಅಲ್ಲದೆ, ನಮಿತ್ ಮಲ್ಹೋತ್ರಾ ಅವರೊಂದಿಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ತಮ್ಮ ಮತ್ತು ನಮಿತ್ ಅವರ ಕನಸಾಗಿದ್ದು, ಈ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Yash BOSS interview from San Diego Comic Con on playing #Ravana in #Ramayana 💥💥💥💥💥#Yash #YashBOSS
cc :- RamasScreen pic.twitter.com/JmzERcb8Y2
— Kunal Singh (@kunalreviewer) July 23, 2026
ರಾಮಾಯಣದ ಮಹತ್ವ
ರಾಮಾಯಣ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ ಹಾಗೂ ವಿಶ್ವದ ಹಲವು ದೇಶಗಳಲ್ಲಿ ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಿದೆ. ಮಾನವ ಜೀವನದ ದೈನಂದಿನ ಗೊಂದಲಗಳು, ತಪ್ಪು-ಒಪ್ಪುಗಳ ನಡುವಿನ ಸಂಘರ್ಷ ಹಾಗೂ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತವೆ ಎಂಬ ಆಳವಾದ ಜೀವನದ ಸತ್ಯವನ್ನು ರಾಮಾಯಣವು ಅತ್ಯಂತ ಸರಳವಾಗಿ ಮತ್ತು ಭವ್ಯವಾಗಿ ಹೇಳುತ್ತದೆ ಎಂದು ಯಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ
ನಮಿತ್ ಮಲ್ಹೋತ್ರಾ ನಿರ್ಮಾಣದ ಈ ‘ರಾಮಾಯಣ’ ಚಿತ್ರವು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಮೂಡಿಬರಲಿದೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ.
ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ
ಪ್ರಶ್ನೆ: ರಾಮಾಯಣ ಟ್ರೇಲರ್ ಯಾವಾಗ ರಿಲೀಸ್ ಆಗಬೇಕಿತ್ತು?
ಉತ್ತರ: ಜುಲೈ 24
ಪ್ರಶ್ನೆ: ರಾಮಾಯಣ ಟ್ರೇಲರ್ ರದ್ದಿಗೆ ಕಾರಣ ಏನು?
ಉತ್ತರ: ಹೊಸ ಒಪ್ಪಂದವೇ ಕಾರಣ