Headlines

ಗೌತಮ್ ಗಂಭೀರ್​ಗೆ ಬಿಸಿ ಮುಟ್ಟಿಸಲು ಮುಂದಾದ ಬಿಸಿಸಿಐ – Kannada News | BCCI Ready to Pull Up Gautam Gambhir After UK Tour Debacle

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾದ ಇತ್ತೀಚಿನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮಹತ್ವದ ಪರಾಮರ್ಶನಾ ಸಭೆಯನ್ನು ಕರೆಯಲು ನಿರ್ಧರಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಸಿಬ್ಬಂದಿಗಳ ಒಪ್ಪಂದ ವಿಸ್ತರಣೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಗಂಭೀರ್​ಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ ಬಿಸಿಸಿಐ:

ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ರೂಪಿತವಾಗಿರುವ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಹೀನಾಯ ಸರಣಿ ಸೋಲು ಭಾರತದ ಕೋಚಿಂಗ್ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೀಗಾಗಿಯೇ ಇದೀಗ ಬಿಸಿಸಿಐ ಪರಾಮರ್ಶನಾ ಸಭೆಯನ್ನು ಕರೆದಿದ್ದು, ಈ ಸಭೆಯಲ್ಲಿ ಕೋಚಿಂಗ್ ಸ್ಟಾಫ್​​ಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇತ್ತ ಪ್ರಮುಖ ಸಹಾಯಕ ಸಿಬ್ಬಂದಿಗಳ ಎರಡು ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡಿದ್ದು, ಇದಾಗ್ಯೂ ಗಂಭೀರ್ ಕೋರಿಕೆಯ ಮೇರೆಗೆ ಅವರನ್ನು ಮುಂದುವರೆಸಲಾಗುತ್ತಿದೆ. ಈ ಸಿಬ್ಬಂದಿಗಳ ಭವಿಷ್ಯ ಈಗ ಬಿಸಿಸಿಐ ಸಭೆಯ ಮೇಲೆ ಅವಲಂಬಿತವಾಗಿದೆ.

  • ರಯಾನ್ ಟೆನ್ ಡೋಸ್ಚೇಟ್ (ಸಹಾಯಕ ತರಬೇತುದಾರ): ಇವರ ಒಪ್ಪಂದದ ಅವಧಿ ಮುಗಿದಿದ್ದು, ರಾಷ್ಟ್ರೀಯ ತಂಡದ ಜವಾಬ್ದಾರಿಯಿಂದ ಮುಕ್ತಿ ನೀಡುವಂತೆ ಅವರೇ ಮಂಡಳಿಗೆ ವಿನಂತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.
  • ಟಿ. ದಿಲೀಪ್ (ಫೀಲ್ಡಿಂಗ್ ತರಬೇತುದಾರ): ರಾಹುಲ್ ದ್ರಾವಿಡ್ ಅವರ ಅವಧಿಯಿಂದ ಮುಂದುವರಿದಿದ್ದ ಏಕೈಕ ಸಿಬ್ಬಂದಿ ಇವರಾಗಿದ್ದಾರೆ. ಯುಕೆ ಪ್ರವಾಸದಲ್ಲಿ ಭಾರತ ತಂಡದ ಫೀಲ್ಡಿಂಗ್ ಮಟ್ಟ ತೀರಾ ಕಳಪೆಯಾಗಿದ್ದರಿಂದ ಇವರ ಒಪ್ಪಂದ ನವೀಕರಣಗೊಳ್ಳುವುದು ಅನುಮಾನ ಎನ್ನಲಾಗಿದೆ.
  • ಮೊರ್ನೆ ಮೊರ್ಕೆಲ್ (ಬೌಲಿಂಗ್ ತರಬೇತುದಾರ): ಬೌಲಿಂಗ್ ವಿಭಾಗದ ವೈಫಲ್ಯದ ಬಗ್ಗೆಯೂ ಚರ್ಚೆ ನಡೆಯಲಿದ್ದರೂ, ಮುಂಬರುವ ಪ್ರಮುಖ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರನ್ನು ಉಳಿಸಿಕೊಳ್ಳುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ರಿವ್ಯೂ ಮೀಟಿಂಗ್‌ಗೆ ಕಾರಣವಾದ ಸೋಲುಗಳು:

ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ನೇತೃತ್ವದಲ್ಲಿ ಭಾರತ ತಂಡ ಎದುರಿಸಿದ ಸರಣಿ ಸೋಲುಗಳು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.

  • ಐರ್ಲೆಂಡ್ ಪ್ರವಾಸ: ಟಿ20 ಸರಣಿಯಲ್ಲಿ 0-2 ಅಂತರದ ಐತಿಹಾಸಿಕ ಸೋಲು.
  • ಇಂಗ್ಲೆಂಡ್ ಪ್ರವಾಸ: ಟಿ20 ಸರಣಿಯಲ್ಲಿ 0-4 ಮತ್ತು ಏಕದಿನ ಸರಣಿಯಲ್ಲಿ 1-2 ಅಂತರದ ಹೀನಾಯ ಪರಾಜಯ.

ಗೌತಮ್ ಗಂಭೀರ್ ಸ್ಥಾನ ಭದ್ರವೇ?

ಈ ಸರಣಿ ಸೋಲುಗಳಿಂದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಮೇಲೆಯೂ ತೀವ್ರ ಒತ್ತಡ ಸೃಷ್ಟಿಯಾಗಿದೆ. ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆಯಾದರೂ, ಬಿಸಿಸಿಐ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಗಂಭೀರ್ ಅವರ ಒಪ್ಪಂದವು ಡಿಸೆಂಬರ್ 2027 ರವರೆಗೆ ಇದ್ದು, ಅವರ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಆದರೆ ಅವರು ನೇಮಕ ಮಾಡಿದ್ದ ಕೆಲ ಸಿಬ್ಬಂದಿಗಳನ್ನು ಕೈ ಬಿಟ್ಟು, ಅವರಿಗೆ ಬಿಸಿ ಮುಟ್ಡಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ‘ಮೈ ಬ್ಯಾಡ್’… ಹೀಗೂ ರನೌಟ್ ಮಿಸ್ ಮಾಡಿಕೊಳ್ತಾರಾ!

ರಿವ್ಯೂ ಮೀಟಿಂಗ್‌ ಯಾವಾಗ?

ಆಗಸ್ಟ್‌ನಲ್ಲಿ ನಡೆಯಲಿರುವ ಈ ವರ್ಚುವಲ್ ಸಭೆಯಲ್ಲಿ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ಭಾಗವಹಿಸಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ. ಇದೇ ವೇಳೆ ಗೌತಮ್ ಗಂಭೀರ್ ಅವರ ಬಲಗೈ ಬಂಟರ (ಸಿಬ್ಬಂದಿ ವರ್ಗಗಳ) ಭವಿಷ್ಯ ಕೂಡ ನಿರ್ಧಾರವಾಗಲಿದೆ.

Source link

Leave a Reply

Your email address will not be published. Required fields are marked *