ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನು ಬಿಗ್ ಸ್ಕ್ರೀನ್ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇವರಿಬ್ಬರೂ ಇದುವರೆಗೆ ಯಾವುದೇ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ ಎಂಬ ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (San Diego Comic-Con) ಕಾರ್ಯಕ್ರಮದಲ್ಲಿ ಮಾತನಾಡಿದ ರಣ್ಬೀರ್ ಕಪೂರ್, ಚಿತ್ರದ ಪ್ರಮುಖ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಇನ್ನೂ ಬಾಕಿಯಿದೆ ಎಂದು ತಿಳಿಸಿದ್ದಾರೆ.
ಸಿನಿಮಾದಲ್ಲಿ ಇಬ್ಬರ ಪಾತ್ರಗಳು ಅತ್ಯಂತ ಪ್ರಮುಖವಾಗಿದ್ದರೂ, ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಕಥೆಯ ಕೊನೆಯಲ್ಲಿ ಬರಲಿವೆ ಎಂದು ರಣಬೀರ್ ಹೇಳಿದ್ದಾರೆ. ‘ಚಿತ್ರದ ಕೊನೆಯಲ್ಲಿ ಶ್ರೀರಾಮ ಮತ್ತು ರಾವಣ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮಧ್ಯದಲ್ಲಿ ಬಹುಶಃ ಒಂದು ಭೇಟಿಯಿರಬಹುದು. ಆದರೆ ನಾವು ಇನ್ನೂ ಆ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಹಾಗಾಗಿ ನಮಗೆ ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ ನನಗೆ ಯಶ್ ಅವರ ಪರಿಚಯ ಸಾಕಷ್ಟು ಸಮಯದಿಂದ ಇದೆ ಮತ್ತು ನಾನು ಅವರ ನಟನೆಯ ದೊಡ್ಡ ಅಭಿಮಾನಿ. ರಾವಣನ ಪಾತ್ರ ಮಾಡಲು ಅವರಂತಹ ನಟನೇ ಬೇಕಿತ್ತು’ ಎಂದು ರಣಬೀರ್ ಹೊಗಳಿದ್ದಾರೆ.
ಯಶ್ ಅಭಿನಯಕ್ಕೆ ಮೆಚ್ಚುಗೆ:
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರವನ್ನು ನಿಭಾಯಿಸಿರುವ ಶೈಲಿಯನ್ನು ರಣಬೀರ್ ಕಪೂರ್ ಶ್ಲಾಘಿಸಿದ್ದಾರೆ. ‘ನಾವು ಹಲವು ವರ್ಷಗಳಿಂದ ರಾವಣನ ಪಾತ್ರವನ್ನು ಒಂದೇ ರೀತಿಯ ಸಾಂಪ್ರದಾಯಿಕ ಶೈಲಿಯಲ್ಲಿ ನೋಡಿಕೊಂಡು ಬಂದಿದ್ದೇವೆ. ಆದರೆ ಯಶ್ ಅವರು ಈ ಪಾತ್ರವನ್ನು ಅತ್ಯಂತ ಸ್ವ್ಯಾಗ್ ಹಾಗೂ ಪ್ರಾಮಾಣಿಕತೆಯಿಂದ ನಟಿಸಿದ್ದು, ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ತಿಳಿಸಿದ್ದಾರೆ.
ರಾಮಾಯಣ ಬಗ್ಗೆ ಯಶ್ ಮಾತು:
ಈ ಬೃಹತ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ಯಶ್, ಸರಿಯಾದ ದೃಷ್ಟಿಕೋನ ಮತ್ತು ಕಥೆಯನ್ನು ಪ್ರಾಮಾಣಿಕವಾಗಿ ತಲುಪಿಸುವುದೇ ಅತ್ಯಂತ ಮುಖ್ಯ ವಿಷಯ ಎಂದಿದ್ದಾರೆ. ‘ಸರಿಯಾದ ಉದ್ದೇಶ ಹಾಗೂ ಉತ್ತಮ ತಂಡ ಜೊತೆಗಿದ್ದರೆ ಎಲ್ಲವೂ ತಾನಾಗಿಯೇ ಸರಿಯಾಗುತ್ತದೆ. ಈ ಕಥೆಯು ನಮಗೆ ಜೀವನದ ಹಲವು ಮಗ್ಗಲುಗಳನ್ನು ಕಲಿಯಲು ನೆರವಾಗಿದೆ. ತಾಂತ್ರಿಕವಾಗಿ ಮೇಕಪ್ ಮತ್ತು ಲುಕ್ಗಳ ವಿಷಯದಲ್ಲಿ ಸಾಕಷ್ಟು ಸವಾಲುಗಳಿದ್ದವು. ಆದರೆ ಅಂತಿಮವಾಗಿ ನಾವು ಉತ್ತಮ ಕಥೆಯನ್ನು ಜಗತ್ತಿಗೆ ತಲುಪಿಸಲು ಶ್ರಮಿಸುತ್ತಿದ್ದೇವೆ. ಅದನ್ನು ನಾವು ಅತ್ಯಂತ ನೈಜವಾಗಿ ತರಲು ಸಮರ್ಥರಾಗಿದ್ದೇವೆ ಎಂಬ ನಂಬಿಕೆ ನನಗಿದೆ’ ಎಂದು ಯಶ್ ಹೇಳಿದ್ದಾರೆ.
ಇದನ್ನೂ ಓದಿ: ‘ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ನಾನು ಶುದ್ಧವಾಗಿದ್ದೆ’: ಸಾಯಿ ಪಲ್ಲವಿ
‘ರಾಮಾಯಣ’ ಚಿತ್ರದ ಪಾತ್ರವರ್ಗ:
ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಯಶ್ ಅವರು ರಾವಣನಾಗಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ ಬಣ್ಣ ಹಚ್ಚಿದ್ದಾರೆ. ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.