Headlines

ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್ – Kannada News | Vijay Jana Nayagan screenings halted in Chennai over A Rating minors Entry issue

ದಳಪತಿ ವಿಜಯ್ ಅಭಿನಯದ, ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಬೆಳ್ಳಿಪರದೆಗೆ ಬಂದಿರುವ ವಿಜಯ್ ಅವರ ಈ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈನ ಹಲವು ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ವಿಳಂಬವಾಗುತ್ತಿದ್ದು, ಕೆಲವು ಕಡೆ ಶೋಗಳನ್ನೇ ರದ್ದುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೆನ್ಸಾರ್ ಮಂಡಳಿ (CBFC) ಈ ಚಿತ್ರಕ್ಕೆ ‘A’ ಪ್ರಮಾಣಪತ್ರ ನೀಡಿದೆ. ನಿಯಮದಂತೆ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ. ಆದರೂ ಹಲವು ಪೋಷಕರು ಸಣ್ಣ ಮಕ್ಕಳನ್ನು ಕರೆದುಕೊಂಡು ಥಿಯೇಟರ್‌ಗೆ ಬಂದಿರುವುದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಥಿಯೇಟರ್‌ ಸಿಬ್ಬಂದಿ ಜೊತೆ ಪ್ರೇಕ್ಷಕರ ಜಟಾಪಟಿ:

ಚೆನ್ನೈನ ಪಿವಿಆರ್ ಆಂಪಾ ಮಾಲ್​ನಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ಸುಮಾರು ಒಂದು ಗಂಟೆ ಕಾಲ ತಡೆಹಿಡಿಯಲಾಗಿತ್ತು. ಪೋಷಕರು ತಮ್ಮ ಮಕ್ಕಳನ್ನು ಕರೆತಂದಿದ್ದರಿಂದ ಥಿಯೇಟರ್ ಸಿಬ್ಬಂದಿ ಹಾಗೂ ಪೋಷಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಟಿಕೆಟ್ ಹಣವನ್ನು ವಾಪಸ್ ನೀಡಲು ಥಿಯೇಟರ್​ನವರು ಒಪ್ಪಿಕೊಂಡ ನಂತರ ಪರಿಸ್ಥಿತಿ ತಿಳಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಕ್ಕಳೊಂದಿಗೆ ಬಂದಿದ್ದ ಪೋಷಕರನ್ನು ಹೊರಗೆ ಕಳುಹಿಸಿದರು.

ಗಲಾಟೆ ವೇಳೆ ಪೊಲೀಸರ ಮಧ್ಯಪ್ರವೇಶ:

ಅದೇ ರೀತಿ, ಪಲ್ಲಾವರಂನ ಪಿವಿಆರ್ ಗ್ರ್ಯಾಂಡ್‌ನಲ್ಲೂ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಥಿಯೇಟರ್ ಪ್ರವೇಶಿಸಲು ಯತ್ನಿಸಿದವರನ್ನು ಸಿಬ್ಬಂದಿ ತಡೆದಾಗ ಗಲಾಟೆ ಆರಂಭವಾಗಿ, ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಹಣ ಮರುಪಾವತಿಗಾಗಿ ಟಿಕೆಟ್ ಕೌಂಟರ್ ಮುಂದೆ ಸಣ್ಣ ಮಕ್ಕಳನ್ನು ಹಿಡಿದುಕೊಂಡು ನೂರಾರು ಜನರು ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ಸೋಶಿಯಲ್ ಮೀಡಿಯಾದಲ್ಲಿ ಪೋಷಕರ ವಿರುದ್ಧ ಆಕ್ರೋಶ:

ಈ ಘಟನೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೋಷಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದು A ಪ್ರಮಾಣಪತ್ರ ಪಡೆದ ಸಿನಿಮಾ ಎಂದು ಪೋಷಕರಿಗೆ ಗೊತ್ತಿದ್ದರೂ ಮಕ್ಕಳನ್ನು ಕರೆತಂದಿರುವುದು ತಪ್ಪು. ಥಿಯೇಟರ್‌ನವರು ನಿಯಮ ಪಾಲಿಸದಿದ್ದರೆ ಅವರ ಲೈಸೆನ್ಸ್ ರದ್ದಾಗುತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು 2023ರ ತೆಲುಗು ಹಿಟ್ ಸಿನಿಮಾ ‘ಭಗವಂತ್ ಕೇಸರಿ’ಯ ಅಧಿಕೃತ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ವಿಜಯ್, ಮಮಿತಾ ಬೈಜು, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *