ಬಾಗಲಕೋಟೆ, ಜುಲೈ 28: ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ 23 ವರ್ಷದ ಪತ್ನಿಯನ್ನು ಪತಿ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ನಡೆದಿದೆ. ಮೃತೆಯನ್ನು ಭಾಗ್ಯಶ್ರೀ ಜಿಗಲೂರು ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಪ್ರವೀಣ ಜಿಗಲೂರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರವೀಣ ಮೊದಲು ಮರದ ತುಂಡಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಳಿಕ ಮನೆಯಲ್ಲಿ ನೇಣು ಬಿಗಿದಿದ್ದಾನೆ ಎನ್ನಲಾಗಿದೆ.
ದಂಪತಿಯ ನಡುವೆ ಕಳೆದ ಕೆಲವು ತಿಂಗಳಿಂದ ಆಗಾಗ ಜಗಳವಾಗುತ್ತಿತ್ತು. ಇದರಿಂದ ಸುಮಾರು ಎರಡು ತಿಂಗಳ ಹಿಂದೆ ಭಾಗ್ಯಶ್ರೀ ಪತಿಯ ಮನೆಯಿಂದ ಹೊರಬಂದು ತನ್ನ ತಂದೆ-ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಬಳಿಕ ಇನ್ನು ಮುಂದೆ ಶಾಂತಿಯುತವಾಗಿ ಬದುಕೋಣ ಎಂದು ಮನವೊಲಿಸಿ ಪ್ರವೀಣ ಪತ್ನಿಯನ್ನು ಮರಳಿ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ಅದೇ ದಿನ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಿಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ!
ಘಟನೆ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಪ್ರತಿಕ್ರಿಯಿಸಿದ್ದು, ಮೃತ ಭಾಗ್ಯಶ್ರೀ ಮೈಮೇಲೆ ರಾಡ್ನಿಂದ ಹೊಡೆದ ಗುರುತುಗಳು ಕಂಡುಬಂದಿವೆ. ಆಕೆ ಕಿರುಕುಳಕ್ಕೆ ನೇಣು ಹಾಕಿಕೊಂಡಿರಬಹುದು ಅಥವಾ ಹಲ್ಲೆ ಮಾಡಿ ಪತಿ ಪ್ರವೀಣ ನೇಣು ಹಾಕಿರಬಹುದು. ಪ್ರಾಥಮಿಕ ತನಿಖೆ ಪ್ರಕಾರ ಭಾಗ್ಯಶ್ರೀಗೆ ಅನೈತಿಕ ಸಂಬಂಧ ಇರುವುದು ಬಹುತೇಕ ಖಚಿತವಾಗಿದೆ. ಆಕೆಯ ತವರು ಮನೆ ಮಹಾಲಿಂಗಪುರದ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದ್ದಾಳೆ. ಆ ವ್ಯಕ್ತಿಯ ಜೊತೆಗಿನ ಆಕೆಯ ಅಶ್ಲೀಲ ವಿಡಿಯೋಗಳು ಪ್ರವೀಣ್ ಮೊಬೈಲ್ನಲ್ಲಿ ಸಿಕ್ಕಿವೆ. ಅವನ್ನು ಆತ ತನ್ನ ಕೆಲ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ. ದಂಪತಿಗೆ 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿಯ ಅನೈತಿಕ ಸಂಬಂಧದ ವಿಚಾರ 2 ವರ್ಷಗಳ ಹಿಂದೆ ಪತಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಕಲಹಗಳೂ ನಡೆಯುತ್ತಿದ್ದವು. ಘಟನೆ ವೇಳೆ ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಸ್ಥಳದಲ್ಲಿ ಬಿಯರ್ ಬಾಟಲಿಗಳು ದೊರೆತಿದ್ದು, ಆರೋಪಿ ಮದ್ಯ ಸೇವಿಸಿದ್ದ ಸಾಧ್ಯತೆಯೂ ಇದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:21 pm, Tue, 28 July 26