ಬೆಂಗಳೂರು ಜು. 28: ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ಮತ್ತು ಕುಡಿಯುವ ನೀರಿನ ಅಭಾವವಿರುವಾಗ ಈ ಆದೇಶ ಹೊರಬಿದ್ದಿರುವುದು ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದರೆ, ರಾಜ್ಯ ಸರ್ಕಾರ ನಿಯಮಗಳ ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಮುನ್ಸೂಚನೆ ನೀಡಿದೆ.
ಈ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಅವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್. ಅಶೋಕ್ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇರುವಾಗ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡಲು ಒಪ್ಪಿರುವುದು ಕನ್ನಡಿಗರಿಗೆ ಬಗೆದ ದ್ರೋಹ. ಕಾಂಗ್ರೆಸ್ ಸರ್ಕಾರ ಹೈಕಮಾಂಡ್ ಮುಲಾಜಿಗೆ ಬಿದ್ದು, ತಮಿಳುನಾಡಿನ ಮೈತ್ರಿ ಸರ್ಕಾರವನ್ನು ಮೆಚ್ಚಿಸಲು ಕಾವೇರಿಯ ಮಡಿಲನ್ನು ಬರಿದು ಮಾಡುತ್ತಿದ್ದಾರೆ. ಸಿಡಬ್ಲ್ಯುಆರ್ಸಿ ಶಿಫಾರಸಿನ ವಿರುದ್ಧ ತಕ್ಷಣವೇ ವಕೀಲರು ಮತ್ತು ಅಧಿಕಾರಿಗಳ ಸಭೆ ಕರೆದು, ಮರುಪರಿಶೀಲನಾ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಿ ಬಲವಾದ ವಾದ ಮಂಡಿಸಬೇಕು. ಯಾವುದೇ ಕಾರಣಕ್ಕೂ ಒಂದು ಹನಿ ನೀರು ಹೊರಹೋಗದಂತೆ ತಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇಲ್ಲಿದೆ ನೋಡಿ ಆರ್.ಅಶೋಕ್ ಪೋಸ್ಟ್:
ಕರ್ನಾಟಕಕ್ಕೆ ಮಾರಿ ತಮಿಳುನಾಡಿಗೆ ಉಪಕಾರಿ!
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ಮತ್ತೊಮ್ಮೆ ವಿಫಲವಾಗಿರುವ @INCKarnataka ಸರ್ಕಾರ, ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ಮತ್ತೊಮ್ಮೆ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ನೀರು ಬಿಡಲು ಶರಣಾಗಿದೆ.
ರಾಜ್ಯದ ಪರ ಸಮರ್ಥ ವಾದ ಮಂಡಿಸಲು ಸಿದ್ಧರಾಗಿ ಎಂದು ಎಷ್ಟು… pic.twitter.com/WUQbmoIXVV
— R. Ashoka (@RAshokaBJP) July 28, 2026
ಕ್ಯಾಚ್ಮೆಂಟ್ನಲ್ಲಿ ಮಳೆಯೇ ಇಲ್ಲ, ನೀರು ಎಲ್ಲಿಂದ ಬಿಡೋದು?”: ಆರಗ ಜ್ಞಾನೇಂದ್ರ
ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಸಿಡಬ್ಲ್ಯುಆರ್ಸಿ ತೀರ್ಮಾನವನ್ನು ವಿಚಿತ್ರ ನಿರ್ಧಾರ ಎಂದು ಹೇಳಿದ್ದಾರೆ. ಸರ್ಕಾರ ಕೋರ್ಟ್ ಅಥವಾ ಪ್ರಾಧಿಕಾರದ ಮುಂದೆ ಸೂಕ್ತ ಅಂಕಿ-ಅಂಶಗಳೊಂದಿಗೆ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಕ್ಯಾಚ್ಮೆಂಟ್ ಏರಿಯಾದಲ್ಲಿ ಮಳೆಯೇ ಇಲ್ಲದಿರುವಾಗ, ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಕುಡಿಯುವ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ
“ಪ್ರಾಧಿಕಾರದ ತೀರ್ಮಾನಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ಇದೆ”: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕಾವೇರಿ ವಿಚಾರದಲ್ಲಿ ಸರ್ಕಾರದ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರ. ಮಳೆ ಕಡಿಮೆಯಾಗಿ ಕಾವೇರಿಯಲ್ಲಿ ನೀರು ಕಡಿಮೆಯಾಗಿರುವುದು ನಿಜ. ಆದರೆ, ನಾವು ಕಾವೇರಿ ನಿರ್ವಹಣಾ ಪ್ರಾಧಿಕಾರದ ಚೌಕಟ್ಟಿನಲ್ಲಿದ್ದು, ಅವರ ಆದೇಶಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ನಮಗಿದೆ. ರಾಜ್ಯಕ್ಕೆ ಬೇಕಾದ ಕುಡಿಯುವ ನೀರನ್ನು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿದ್ದು, ನೀರಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ