Headlines

ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ – Kannada News | Air India AI 171 crash probe nears Final Stage no fault found in fuel switch Government tells Parliament Session

ನವದೆಹಲಿ, ಜುಲೈ 29: ಕಳೆದ ವರ್ಷ ಭೀಕರವಾಗಿ ಪತನಗೊಂಡು 260 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಏರ್ ಇಂಡಿಯಾ ಎಐ-171 (Air India Crash) ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ದೋಷ ಅಥವಾ ಅಸಹಜತೆ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸಂಸತ್​​ಗೆ ತಿಳಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರ, ಏರ್ ಇಂಡಿಯಾ ಡ್ರೀಮ್​ಲೈನರ್ ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ತಾಂತ್ರಿಕ ತಪಾಸಣೆಯ ನಂತರ ಈ ವಿಷಯ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಅಮೆರಿಕದ ಸಿಯಾಟಲ್‌ನಲ್ಲಿ ಈ ವಿಮಾನದ ಸಂಪೂರ್ಣ ಥ್ರಸ್ಟ್ ನಿಯಂತ್ರಣ ಮಾಡ್ಯೂಲ್‌ನ ತಪಾಸಣೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಯು ತನ್ನ ಅಂತಿಮ ವರದಿ ನೀಡುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಬೃಹತ್ ವಿಮಾನ ಅಪಘಾತಗಳ ತನಿಖೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಎಐ-171 ವಿಮಾನದ ತನಿಖೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ, ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ, ಪೈಲಟ್ ತಂದೆಗೆ ಸುಪ್ರೀಂ ಸಾಂತ್ವನ

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೋಹೋಲ್, ಈ ವರ್ಷದ ಫೆಬ್ರವರಿಯಲ್ಲಿ ಈ ಮಾದರಿಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ ನಂತರ, ವಿಮಾನದ ಹಾರಾಟ ಯೋಗ್ಯತಾ ತಪಾಸಣೆಯ ಭಾಗವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಪರೀಕ್ಷೆಗಳಿಗೆ ಆದೇಶಿಸಿತ್ತು ಎಂದು ಹೇಳಿದರು.

ವಿಮಾನ ಪ್ರಯಾಣದ ವೇಳೆ ಇಂಧನ ಪೂರೈಕೆ ಅಥವಾ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿದಂತೆ ಎದುರಾಗಿದ್ದ ಶಂಕಿತ ತಾಂತ್ರಿಕ ಸಮಸ್ಯೆಯ ಕುರಿತು ಕೂಲಂಕುಷ ತನಿಖೆ ನಡೆಸಲಾಗಿತ್ತು. ಆದರೆ, ವಿಮಾನದ ಕಾಕ್‌ಪಿಟ್‌ನಲ್ಲಿರುವ ಈ ಸ್ವಿಚ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ವಿಮಾನದ ಬ್ಲ್ಯಾಕ್ ಬಾಕ್ಸ್, ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಡೇಟಾವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ವ್ಯವಸ್ಥೆಯ ವಿನ್ಯಾಸ ಅಥವಾ ಸ್ವಿಚ್‌ನ ಯಾಂತ್ರಿಕ ಕಾರ್ಯಾಚರಣೆಯಲ್ಲಿ ಯಾವುದೇ ದೋಷವಿಲ್ಲದಿರುವುದು ಸ್ಪಷ್ಟವಾಗಿದೆ. ತನಿಖೆಯ ಅಂತಿಮ ವರದಿಯನ್ನು ಶೀಘ್ರದಲ್ಲೇ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ

ಅಂತಿಮ ವರದಿ ಶೀಘ್ರದಲ್ಲೇ ಬಿಡುಗಡೆ:

260 ಜನರ ಸಾವಿಗೆ ಕಾರಣವಾಗಿದ್ದ 2025ರ ಜೂನ್​ನಲ್ಲಿ ನಡೆದ ಅಹಮದಾಬಾದ್ ಏರ್ ಇಂಡಿಯಾ ಎಐ-171 ವಿಮಾನ ಪತನದ ತನಿಖೆಯ ಅಂತಿಮ ವರದಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಈ ಮೊದಲು ತಿಳಿಸಿದ್ದರು. ಸರ್ಕಾರವು ತನಿಖಾ ಸಂಸ್ಥೆಗೆ (AAIB) ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *