ನಾಪತ್ತೆಯಾಗಿರುವ ಬಾಲಕImage Credit source: Tv9 Kannada
ಬೆಂಗಳೂರು, ಜುಲೈ 31: ಸಣ್ಣಪುಟ್ಟ ವಿಚಾರಗಳಿಗೂ ಇಂದಿನ ಮಕ್ಕಳು ಮುನಿಸಿಕೊಳ್ಳೋದು ಮಾಮೂಲು. ಅದರಲ್ಲೂ ಹೆತ್ತವರ ಮಾತುಗಳಿಗೆ ಕೋಪ ತುಸು ಜಾಸ್ತಿಯೇ. ಇದೇ ಕಾರಣಕ್ಕೆ ತಂದೆ-ತಾಯಿಯ ಜೊತೆ ಮಾತು ಬಿಡುವ ಮಕ್ಕಳೂ ಇದ್ದಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಏಳನೇ ತರಗತಿಯ ಬಾಲಕನೋರ್ವ ತಂದೆ ಬೈದರು ಎಂಬ ಕಾರಣಕ್ಕೆ ಮನೆಯನ್ನೇ ಬಿಟ್ಟು ತೆರಳಿದ್ದಾನೆ. ಘಟನೆಗೆ ಕಾರಣವಾಗಿರೋದು ಆತನಿಗೆ ಮೀನುಗಳ ಮೇಲಿದ್ದ ಅಪಾರವಾದ ಪ್ರೀತಿ. ಮನೆ ಮಗನ ನಿರ್ಧಾರದಿಂದ ಕುಟುಂಬಸ್ಥರೀಗ ಕಂಗಾಲಾಗಿದ್ದು, ಆತನನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ.
ಹೌದು, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಗೌಡನಪಾಳ್ಯದ ನಿವಾಸಿ 13 ವರ್ಷದ ಬಾಲಕ ಕಿಶೋರ್ ನಾಪತ್ತೆಯಾಗಿ ಬರೋಬ್ಬರಿ ನಾಲ್ಕು ದಿನಗಳು ಕಳೆದಿವೆ. ಜುಲೈ 27ರಂದು ಮನೆಯಿಂದ ಹೊರ ಹೋಗಿದ್ದ ಈತ ತಿರುಗಿಬಂದಿಲ್ಲ ಎನ್ನಲಾಗಿದ್ದು, ಸಂಬಂಧಿಕರು, ಸ್ನೇಹಿತರು, ಶಾಲೆಯಲ್ಲಿ ವಿಚಾರಿಸಿದಾಗಲು ಆತನ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪೊಲೀಸರಿಂದಲೂ ಬಾಲಕ ಕಿಶೋರ್ಗಾಗಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: ಜೆಪ್ಟೋ ಡೆಲಿವರಿ ಪಾರ್ಟ್ನರ್ನಿಂದ ಕಿರುಕುಳ: ವಿಡಿಯೋ ಹಂಚಿಕೊಂಡು ಮಹಿಳೆ ಗಂಭೀರ ಆರೋಪ
ಸೈಕಲ್ನಲ್ಲಿ ಮನೆಯಿಂದ ಹೊರಹೋಗಿದ್ದ ಬಾಲಕ
ಏಳನೇ ತರಗತಿ ಓದುತ್ತಿದ್ದ ಕಿಶೋರ್ಗೆ ಅಕ್ವೇರಿಯಂ ಮೀನು ಸಾಕುವುದೆಂದರೆ ಅಪಾರ ಪ್ರೀತಿ. 15 ದಿನಗಳ ಹಿಂದೆ ಆತ ಮನೆಗೆ ಮೀನು ತಂದಿದ್ದಾಗ, ತಂದೆ ನಾಗೇಂದ್ರ ಹಣ ವ್ಯರ್ಥ ಮಾಡಬಾರದೆಂದು ಗದರಿ ಬುದ್ಧಿವಾದ ಹೇಳಿದ್ದರು. ಆಗಲೂ ಕೋಪಗೊಂಡು ಮನೆ ಬಿಟ್ಟಿದ್ದ ಆತನನ್ನು ಪೋಷಕರು ಹುಡುಕಿ ತಂದು ಮತ್ತೆ ಹೀಗೆ ಮಾಡದಂತೆ ತಿಳಿಹೇಳಿದ್ದರು. ಈ ನಡುವೆ ಇದೇ ತಿಂಗಳ 27ರಂದು ಶಾಲೆಯಿಂದ ಬರುವಾಗ ಕಿಶೋರ್ ಮತ್ತೆ ಮನೆಗೆ ಅಕ್ವೇರಿಯಂ ಮೀನು ತಂದಿದ್ದ. ಇದನ್ನು ನೋಡಿ ಕೋಪಗೊಂಡ ತಂದೆ ಆತನಿಗೆ ಹೊಡೆದು, ಟ್ಯೂಷನ್ಗೆ ಹೋಗುವಂತೆ ತಿಳಿಸಿ ಕೆಲಸಕ್ಕೆ ತೆರಳಿದ್ದರು. ಇದರಿಂದೀವ ತೀವ್ರ ಮನನೊಂದ ಬಾಲಕ, ಸಂಜೆ 5 ಗಂಟೆ ಸುಮಾರಿಗೆ ತನ್ನ ಸೈಕಲ್ನಲ್ಲಿ ಮನೆಯಿಂದ ಹೊರಟು ಹೋದವನು ಮತ್ತೆ ವಾಪಸ್ ಬಂದಿಲ್ಲ. ರಾತ್ರಿ ಹತ್ತು ಗಂಟೆಯಾದರೂ ಆತನ ಬಗ್ಗೆ ಸುಳಿವು ಸಿಗದ ಕಾರಣ ಕಿಶೋರ್ ತಾಯಿ ಲಕ್ಷ್ಮೀ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾಗಿ 4 ದಿನ ಕಳೆದರೂ ಮಗ ಪತ್ತೆಯಾಗದ ಕಾರಣ ಪೋಷಕರು ಕಂಗಾಲಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:26 pm, Fri, 31 July 26