Headlines

PM Modi Speech in Mysuru: ಮೈಸೂರಿನ ಪ್ರತಿ ಮೂಲೆಯಲ್ಲೂ ಭಾರತದ ಪರಂಪರೆ ಹಾಸುಹೊಕ್ಕಿದೆ; ಪ್ರಧಾನಿ ಮೋದಿ ಬಣ್ಣನೆ – Kannada News | PM Narendra Modi addresses the inauguration of the Swami Vivekananda Cultural Youth Centre Viveka Smaraka in Mysuru

ಮೈಸೂರು, ಆಗಸ್ಟ್ 1: “ಎಲ್ಲರಿಗೂ ನನ್ನ ನಮಸ್ಕಾರಗಳು” ಎನ್ನುತ್ತಾ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರಿನಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಿದ್ದಂತೆ ಪ್ರೇಕ್ಷಕರಿಂದ ಭಾರೀ ಕರತಾಡನ ಮೊಳಗಿತು. ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ಉದ್ಘಾಟನೆ ಮಾಡಿದ ಬಳಿಕ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಮೈಸೂರು ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗಿದೆ. ಭಾರತದ ಪರಂಪರೆಯು ಈ ನಗರದ ಪ್ರತಿಯೊಂದು ಮೂಲೆಯಲ್ಲೂ ಹಾಸುಹೊಕ್ಕಿದೆ. ಮೈಸೂರು ಭಾರತದ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ತಾಯಿ ಚಾಮುಂಡೇಶ್ವರಿಗೆ ಪ್ರಣಾಮಗಳು. 2 ದಿನಗಳ ಹಿಂದೆ ಗುರು ಪೂರ್ಣಿಮೆ ಆಚರಿಸಿದ್ದೇವೆ. ನನ್ನ ಜೀವನದ ಯಾತ್ರೆಯಲ್ಲಿ ರಾಮಕೃಷ್ಣ ಅಶ್ರಮದ ಪಾತ್ರ ಮಹತ್ವದ್ದು. ಮೈಸೂರಿನ ರಾಮಕೃಷ್ಣ ಅಶ್ರಮಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ದಸರಾ, ಪರಂಪರೆ, ಅರಮನೆ, ಇಲ್ಲಿನ ಸಂಸ್ಕೃತಿ, ಸಂಗೀತ, ಸಾಹಿತ್ಯ ಇಡೀ ದೇಶದ ಗಮನ ಸೆಳೆದಿದೆ. ಮತ್ತೊಮ್ಮೆ ಮೈಸೂರಿಗೆ ಆಗಮಿಸಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಸ್ವಾಮಿ ವಿವೇಕಾನಂದರ ಮಾರ್ಬಲ್ ಮೂರ್ತಿ ಸಮರ್ಪಣೆ

“ಮೈಸೂರಿನ ರಾಮಕೃಷ್ಣ ಆಶ್ರಮದ ಸೇವೆ ಅಪಾರ. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಮೊಬೈಲ್ ಉತ್ಪಾದನೆ, ಎಐ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಯಾವುದೇ ದೇಶದಲ್ಲಿ, ಯುವಕರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತನೆಯಾಗುವುದು ಅವರಿಗೆ ಸರಿಯಾದ ಅವಕಾಶಗಳು ಮತ್ತು ಮಾರ್ಗದರ್ಶನ ಸಿಕ್ಕಾಗ ಮತ್ತು ಸ್ವಂತ ನೆಲದಲ್ಲಿ ದೊಡ್ಡ ಕನಸುಗಳನ್ನು ಕಾಣುವ, ಆ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ದೊರೆತಾಗ ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.

ವಿವೇಕ ಸ್ಮಾರಕ ತೀರ್ಥಕ್ಷೇತ್ರವಾಗಲಿದೆ:

“ವಿವೇಕ ಸ್ಮಾರಕವು ಸಾಧಕರಿಗೆ ಮತ್ತು ಭಕ್ತರಿಗೆ ಆಧ್ಯಾತ್ಮಿಕ ತೀರ್ಥಕ್ಷೇತ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಈ ವಿವೇಕ ಸ್ಮಾರಕದ ಮೂಲಕ, ವೈಯಕ್ತಿಕ ಸುಖ-ದುಃಖಗಳಿಗಿಂತ ಸಮಾಜದ, ರಾಷ್ಟ್ರದ ಹಿತಾಸಕ್ತಿ ಹಾಗೂ ಬಡವರು ಮತ್ತು ದೀನದಲಿತರ ಸಂಕಷ್ಟಗಳಿಗೆ ಅಗ್ರಸ್ಥಾನ ನೀಡುವ ಯುವ ಜನತೆಯನ್ನು ನಾವು ರೂಢಿಸಬೇಕಾಗಿದೆ. ಯಾರಿಗಾಗಿ ‘ರಾಷ್ಟ್ರವೇ ಪ್ರಥಮ’ ಎಂಬುದು ಪರಮ ಮಾರ್ಗದರ್ಶನ ತತ್ವವಾಗಿದೆಯೋ ಮತ್ತು ಯಾರ ಜೀವನದ ಗುರಿಯು ಭಾರತ ಮಾತೆಯ ಸೇವೆಯೋ ಅಂತಹ ಯುವಕರನ್ನು ರೂಪಿಸಬೇಕಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಇದನ್ನೂ ಓದಿ: ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಸಿಎಂ ಡಿಕೆಶಿಯಿಂದ ಸ್ವಾಗತ

“ಇಂದು ದೇಶದಲ್ಲಿ ಸುಮಾರು 1,40,000 ಎಂಬಿಬಿಎಸ್ (MBBS) ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು 21 ನೇ ಶತಮಾನಕ್ಕೆ ಸಿದ್ಧಪಡಿಸುತ್ತಿದೆ. ಬಾಲಕಿಯರು ಕೂಡ ಸೈನಿಕ್ ಶಾಲೆಗೆ ಸೇರುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲೂ ಯುವಕರು ಇತಿಹಾಸ ಸೃಷ್ಟಿಸಿದ್ದಾರೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಯುವಕರ ಕೊಡುಗೆಯಿಂದ ದೇಶದ ಅಭಿವೃದ್ಧಿಯಾಗುತ್ತಿದೆ. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಯುವಕರಿಗೆ ಪ್ರೋತ್ಸಾಹ ನೀಡುವ ದೇಶ ಅಭಿವೃದ್ಧಿ ಹೊಂದುತ್ತದೆ. ದೇಶದಲ್ಲಿ ಕಳೆದ 12 ವರ್ಷದಲ್ಲಿ 650 ವಿವಿಗಳನ್ನು ಸ್ಥಾಪಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಐಟಿಐಗಳನ್ನು ಸ್ಥಾಪಿಸಲಾಗಿದೆ. 9 ಐಐಎಂ, 7 ಐಐಟಿ, 813 ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಎಂಬಿಬಿಎಸ್‌ ಸೀಟ್‌ಗಳ ಸಂಖ್ಯೆ 1 ಲಕ್ಷ 40 ಸಾವಿರಕ್ಕೆ ಹೆಚ್ಚಳವಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೈಸೂರಿನ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗೆಹ್ಲೋಟ್​, ರಾಮಕೃಷ್ಣ ಆಶ್ರಮ ಮತ್ತು ಮಿಷನ್‌ನ ಅಧ್ಯಕ್ಷ ಗೌತಮಾನಂದಜೀ ಮಹಾರಾಜ್, ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಮುಕ್ತಿದಾನಂದಜೀ ಮಹಾರಾಜ್, ಸಂಸದ ಯದುವೀರ್ ಒಡೆಯರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್​ ಗೌಡ ಕೂಡ ಉಪಸ್ಥಿತರಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:26 pm, Sat, 1 August 26

Source link

Leave a Reply

Your email address will not be published. Required fields are marked *