ಹಮೀರ್ಪುರ, ಆಗಸ್ಟ್ 03: ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 44 ಲಕ್ಷ ರೂ. ವಿಮಾ ಮೊತ್ತವನ್ನು ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ(Murder) ಮಾಡಿ, ನಂತರ ಅಪಘಾತವೆಂದು ಬಿಂಬಿಸಲು ಮೃತದೇಹದ ಮೇಲೆ ಕಾರು ಹರಿಸಿ ಸುಟ್ಟುಹಾಕಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಕಾಣೆಯಾಗಿದ್ದಾಳೆ ಎಂದು ಆರೋಪಿ ಅಮರ್ ಸಿಂಗ್ ಸ್ವತಃ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಆದರೆ ಆತನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ನೈಜ ಕೃತ್ಯ ಬಯಲಾಗಿದೆ.
ಲಾಲ್ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ಪತ್ನಿಯನ್ನು ಕೋಲು ಮತ್ತು ದೊಣ್ಣೆಗಳಿಂದ ಅಮಾನವೀಯವಾಗಿ ಹೊಡೆದು ಕೊಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಲೆಯ ನಂತರ ಅದನ್ನು ರಸ್ತೆ ಅಪಘಾತವೆಂದು ತೋರಿಸಲು ಶವದ ಮೇಲೆ ಕಾರು ಹರಿಸಿ, ನಂತರ ಬೆಂಕಿ ಹಚ್ಚಿ ಸುಟ್ಟುಹಾಕಲು ಯತ್ನಿಸಿದ್ದರು.
12 ಕ್ಕೂ ಹೆಚ್ಚು ತೀವ್ರ ಗಾಯಗಳು: ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ರೀಟಾ ಅವರ ದೇಹದ ಮೇಲೆ 12 ಕ್ಕೂ ಹೆಚ್ಚು ಭೀಕರ ಹೊರಗಾಯಗಳಿದ್ದವು. ಮೂತ್ರಪಿಂಡಗಳನ್ನು ಹೊರತುಪಡಿಸಿ ದೇಹದ ಬಹುತೇಕ ಎಲ್ಲಾ ಆಂತರಿಕ ಅಂಗಾಂಗಗಳು ತೀವ್ರವಾಗಿ ಜಜ್ಜಲ್ಪಟ್ಟು ಹಾನಿಗೊಳಗಾಗಿದ್ದವು.
ಮತ್ತಷ್ಟು ಓದಿ: ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್ಗೆ ಜೀವಾವಧಿ ಶಿಕ್ಷೆ
44 ಲಕ್ಷದ ವಿಮೆ ಮತ್ತು ತಂದೆಯ ಆಕ್ರೋಶ
ಮೊದಲ ಪತಿಯ ಮರಣದ ನಂತರ ರೀಟಾ ಕಾನ್ಪುರದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮರ್ ಸಿಂಗ್ನನ್ನು ಭೇಟಿಯಾಗಿ, ಎರಡು ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದರು. ರೀಟಾಗೆ ಮೊದಲ ಮದುವೆಯಿಂದ ನಾಲ್ವರು ಮಕ್ಕಳಿದ್ದಾರೆ. ರೀಟಾ ಅವರ ತಂದೆ ಸರ್ವೇಶ್ ಕುಮಾರ್ ನೀಡಿರುವ ಮಾಹಿತಿಯಂತೆ, ಅಮರ್ ಸಿಂಗ್ ಎರಡು ತಿಂಗಳ ಹಿಂದೆಯಷ್ಟೇ ಪತ್ನಿಯ ಹೆಸರಿನಲ್ಲಿ44 ಲಕ್ಷ ರೂ. ಜೀವವಿಮೆ ಪಾಲಿಸಿ ಮಾಡಿಸಿ, 2.60 ಲಕ್ಷ ರೂ. ಪ್ರಥಮ ಪ್ರೀಮಿಯಂ ಪಾವತಿಸಿದ್ದ. ವಿಮಾ ಹಣ ಕೈಸೇರಿದ ತಕ್ಷಣ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿದ್ದ.
ಇತ್ತೀಚಿನ ದಿನಗಳಲ್ಲಿ ಜೀವವಿಮೆ ಹಣಕ್ಕಾಗಿ ಕುಟುಂಬದವರನ್ನೇ ಕೊಲೆ ಮಾಡುವ ಪ್ರಕರಣಗಳು ದೇಶದ ಹಲವೆಡೆ ಹೆಚ್ಚುತ್ತಿವೆ. ಹಮೀರ್ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅರವಿಂದ್ ಕುಮಾರ್ ವರ್ಮಾ ಅವರು ಮಾತನಾಡಿ, ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರೂ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಕೇವಲ 24 ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ರೀಟಾ ಅವರ ನಾಲ್ವರು ಮಕ್ಕಳು ಪ್ರಸ್ತುತ ಮೈನ್ಪುರಿಯಲ್ಲಿ ತಮ್ಮ ಅಜ್ಜ-ಅಜ್ಜಿಯ ಆಸರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ