ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ (Brijbhushan Sharan Singh) ಮತ್ತು ಸಹ ಆರೋಪಿ ವಿನೋದ್ ತೋಮರ್ ಅವರನ್ನು ಖುಲಾಸೆಗೊಳಿಸಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು ಈ ತೀರ್ಪು ನೀಡಿದ್ದಾರೆ.
ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ
ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ ಬ್ರಿಜ್ ಭೂಷಣ್ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ವಿನೇಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ, ‘ನ್ಯಾಯಾಲಯದ ತೀರ್ಪಿನಿಂದ ತಾನು ಅಸಮಾಧಾನಗೊಂಡಿದ್ದೇನೆ. ಈ ನಿರ್ಧಾರವನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ. ಆಡಳಿತ ಪಕ್ಷದ ಪ್ರಬಲ ನಾಯಕನ ವಿರುದ್ಧ ಬೀದಿಗಿಳಿದು ಎಫ್ಐಆರ್ ದಾಖಲಿಸಲು ನಮಗೆ ಸಾಕಷ್ಟು ಧೈರ್ಯ ಬೇಕಾಯಿತು. ತಮ್ಮ ಅಧಿಕಾರ ಮತ್ತು ಗಾಂಭೀರ್ಯವನ್ನು ಬಳಸಿಕೊಂಡು, ಬ್ರಿಜ್ಭೂಷಣ್ ಅನೇಕ ಹುಡುಗಿಯರನ್ನು ಬೆದರಿಸಿ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು. ಆದರೆ ಅನೇಕ ಮಹಿಳಾ ಕುಸ್ತಿಪಟುಗಳು ಮುಂದೆ ಬಂದು ನ್ಯಾಯಾಲಯದಲ್ಲಿ ಬ್ರಿಜ್ಭೂಷಣ್ ವಿರುದ್ಧ ಹೋರಾಡುತ್ತಲೇ ಇದ್ದರು.
ತೀವ್ರ ದುಃಖ ತಂದಿದೆ
ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪಗಳಲ್ಲಿ ನ್ಯಾಯಾಲಯವು ಬ್ರಿಜ್ಭೂಷಣ್ ಶರಣ್ ಸಿಂಗ್ ಅವರನ್ನು ಶಿಕ್ಷೆಗೆ ಒಳಪಡಿಸದಿರುವುದು ನಮಗೆ ತೀವ್ರ ದುಃಖ ತಂದಿದೆ. ಆರಂಭದಿಂದಲೂ, ಇಡೀ ವ್ಯವಸ್ಥೆ, ಸರ್ಕಾರ ಮತ್ತು ವ್ಯವಸ್ಥೆಯು ಬ್ರಿಜ್ಭೂಷಣ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮಹಿಳಾ ಕುಸ್ತಿಪಟುಗಳು ತಮ್ಮ ವಕೀಲರಿಗೆ ಸೂಚಿಸಿದ್ದಾರೆ ಮತ್ತು ಇದನ್ನು ಶೀಘ್ರದಲ್ಲೇ ಮಾಡಲಾಗುತ್ತದೆ. ನಾವು ಭರವಸೆಯನ್ನು ಬಿಟ್ಟುಕೊಟ್ಟಿಲ್ಲ. ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
Wrestlers will file appeal against decision to acquit Brij Bhushan: Vinesh Phogat pic.twitter.com/fPzLLGAnYE
— News Arena India (@NewsArenaIndia) August 3, 2026
ವಿನೇಶ್ ಫೋಗಟ್ ಜೊತೆಗೆ ತೀರ್ಪಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಬಜರಂಗ್ ಪುನಿಯಾ, ‘ಇಂದಿನ ತೀರ್ಪು ಎಲ್ಲಾ ಅಧಿಕಾರವು ಬ್ರಿಜ್ ಭೂಷಣ್ ಅವರ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಅವರು ಸಾಕ್ಷಿಗಳನ್ನು ತಮ್ಮ ಪರವಾಗಿ ಮಾಡಿಕೊಂಡಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ಯಾವ ಆಧಾರದ ಮೇಲೆ ಖುಲಾಸೆಗೊಳಿಸಲಾಯಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.
ಏನಿದು ಪ್ರಕರಣ?
2023 ರಂದು ಅಂದಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ 6 ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ಆರೋಪ ತೀವ್ರ ಸ್ವರೂಪ ಪಡೆದು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ತಿಂಗಳುಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ನಂತರ ದೆಹಲಿ ಪೊಲೀಸರು 2023 ರಲ್ಲಿ ಎಫ್ಐಆರ್ ದಾಖಲಿಸಿ ಸುಮಾರು 1500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.