
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ ಈ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾದಲ್ಲಿನ ಪಾತ್ರಗಳ ವಸ್ತ್ರವಿನ್ಯಾಸದ (Costume Design) ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಟೀಕೆ ಹಾಗೂ ಚರ್ಚೆ ವ್ಯಕ್ತವಾಗಿತ್ತು. ಪೌರಾಣಿಕ ಸಿನಿಮಾಗಳ ವಿಚಾರದಲ್ಲಿ ಈ ರೀತಿಯ ಟೀಕೆಗಳು ಎದುರಾಗುವುದು ಸಹಜ. ಆ ಬಗ್ಗೆ ಚಿತ್ರತಂಡದವರು ಪ್ರತಿಕ್ರಿಯೆ ನೀಡಿದ್ದಾರೆ.
ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರ ಬ್ಲೌಸ್ ಡಿಸೈನ್ ಹಾಗೂ ಕೈಕೇಯಿ ಪಾತ್ರದಲ್ಲಿ ನಟಿಸಿರುವ ಲಾರಾ ದತ್ತಾ ಅವರ ಸೀರೆ ನೋಡಿದರೆ ಟಿವಿ ಧಾರಾವಾಹಿಯ ಪಾತ್ರ ನೋಡಿದಂತೆ ಆಗುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇದೀಗ ಈ ಎಲ್ಲಾ ಟೀಕೆಗಳಿಗೆ ಚಿತ್ರದ ವಸ್ತ್ರವಿನ್ಯಾಸಕರಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಸೂಕ್ತ ಸ್ಪಷ್ಟನೆ ನೀಡಿದ್ದಾರೆ.
‘ತ್ರೇತಾಯುಗದ ಉಡುಪುಗಳಿಗೆ ಯಾವುದೇ ನೇರ ಪುರಾವೆಗಳಿಲ್ಲ’
ಸಾಯಿ ಪಲ್ಲವಿ ಅವರ ಉಡುಪಿನ ಬಗ್ಗೆ ಬಂದ ಟೀಕೆಗೆ ಉತ್ತರಿಸಿದ ಅವರು, ‘ತ್ರೇತಾಯುಗದ ಕಾಲದ ಬಟ್ಟೆಗಳು ನಮಗೆ ನೋಡಲು ಸಿಗುವುದಿಲ್ಲ. ನಾವು ಬಾಲ್ಯದಿಂದಲೂ ನೋಡಿಕೊಂಡು ಬಂದಿರುವ ಕ್ಯಾಲೆಂಡರ್ ಆರ್ಟ್, ರಾಜಾ ರವಿವರ್ಮ ಅವರ ವರ್ಣಚಿತ್ರಗಳು, ದೇವಸ್ಥಾನಗಳ ಕೆತ್ತನೆಗಳು ಮತ್ತು ಮಿನಿಯೇಚರ್ ಪೇಂಟಿಂಗ್ಸ್ ಆಧಾರವಾಗಿಟ್ಟುಕೊಂಡು ಈ ಡಿಸೈನ್ ಮಾಡಿದ್ದೇವೆ. ನಮ್ಮ ಪೂಜಾ ಕೊಠಡಿಯಲ್ಲಿರುವ ಸೀತಾ ಮಾತೆಯನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಅದೇ ರೀತಿ ಸಾಯಿ ಪಲ್ಲವಿ ಅವರ ಲುಕ್ ರೂಪಿಸಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಭಾವನೆಗಳಿಗೆ ತಕ್ಕಂತೆ ಬಣ್ಣಗಳ ಆಯ್ಕೆ:
ಲಾರಾ ದತ್ತಾ (ಕೈಕೇಯಿ) ಅವರ ವಸ್ತ್ರವಿನ್ಯಾಸದ ಬಗ್ಗೆ ಉದ್ಭವಿಸಿದ ಟೀಕೆಗೆ ಸ್ಪಂದಿಸಿದ ಹರ್ಪ್ರೀತ್, ‘ನಾವು ಬಳಸಿದ ಪ್ರತಿಯೊಂದು ಬಣ್ಣಕ್ಕೂ ಒಂದು ಅರ್ಥವಿದೆ. ಹಸಿರು ಬಣ್ಣವು ಮಾತೃತ್ವವನ್ನು ಸಂಕೇತಿಸಿದರೆ, ಮರೂನ್ ಬಣ್ಣವು ಕೈಕೇಯಿ ತೆಗೆದುಕೊಳ್ಳುವ ಕಠಿಣ ನಿರ್ಧಾರ ಹಾಗೂ ಆಕೆಯೊಳಗಿನ ಭಾವನಾತ್ಮಕ ಹೋರಾಟವನ್ನು ಪ್ರತಿನಿಧಿಸುತ್ತದೆ. ಜನರು ಚಿತ್ರದ ಕಥಾಹಂದರ ಹಾಗೂ ಆಂತರ್ಯವನ್ನು ಅರ್ಥೈಸಿಕೊಳ್ಳುವ ಮುನ್ನವೇ ತರಾತುರಿಯಲ್ಲಿ ಟೀಕಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್ ನೋಡಿ ಟ್ರೋಲ್ ಮಾಡಿದ ಜನ
ಪೂರ್ಣ ಸಿನಿಮಾವನ್ನು ಬೆಳ್ಳಿತೆರೆಯಲ್ಲಿ ನೋಡಿದ ನಂತರವೇ ಉಡುಪುಗಳ ಹಿಂದಿರುವ ಶ್ರಮ ಮತ್ತು ಕಲ್ಪನೆ ಅರ್ಥವಾಗುತ್ತದೆ. ಆದ್ದರಿಂದ ಈಗಲೇ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ವಸ್ತ್ರವಿನ್ಯಾಸಕರು ವಿನಂತಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.