Headlines

ಸ್ನೇಹಿತರು, ಸಹೋದ್ಯೋಗಿಗಳು ಆಗಿದ್ದವರು ಈಗ ಬದ್ಧ ವೈರಿಗಳು – Kannada News | Once Udhayanidhi Stalin produced movie with Thalapathy Vijay and Trisha Krishnan

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಘಟನೆಯೊಂದು ಘಟಿಸಿದೆ. ನಟಿ ತ್ರಿಷಾ (Trisha Krishnan) ಕುರಿತು ಆಡಿದ ಡಬಲ್ ಮೀನಿಂಗ್ ಮಾತಿನಿಂದಾಗಿ ವಿಪಕ್ಷ ನಾಯಕ, ನಟ, ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಮತ್ತು ತ್ರಿಷಾ ಅವರ ಅತ್ಯಾಪ್ತ ಸಂಬಂಧ ಗುಟ್ಟೇನೂ ಅಲ್ಲ. ವಿಜಯ್, ಪತ್ನಿ ಸಂಗೀತ ಅವರೊಟ್ಟಿಗೆ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ. ಇತ್ತ ತ್ರಿಷಾ ಜೊತೆಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ವಿಜಯ್ ಅವರು ತ್ರಿಷಾ ಜೊತೆಗೆ ಹೊಂದಿರುವ ಈ ಸಂಬಂಧದ ಬಗ್ಗೆ ವಿಪಕ್ಷಗಳು ಟೀಕೆ, ವ್ಯಂಗ್ಯ ಮಾಡುತ್ತಲೇ ಬಂದಿವೆ. ಇದೀಗ ಇದು ಅತಿರೇಕಕ್ಕೆ ಹೋಗಿದ್ದು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.

ನಟಿ ತ್ರಿಷಾ ಬಗ್ಗೆ ಉದಯನಿಧಿ ಸ್ಟಾಲಿನ್ ಇತ್ತೀಚೆಗಷ್ಟೆ ಕೊಳಕು, ಡಬಲ್ ಮೀನಿಂಗ್ ಮಾತನ್ನಾಡಿದ್ದರು. ಅದೇ ಕಾರಣಕ್ಕೆ ಚೆನ್ನೈ ಪೊಲೀಸರು ಉದಯನಿಧಿ ಅವರನ್ನು ವಶಕ್ಕೆ ಪಡೆದಿದ್ದರು. ಉದಯನಿಧಿ ಬಂಧನದ ಹಿಂದೆ ರಾಜಕೀಯ ದ್ವೇಷ ಇದೆ ಎಂದು ಡಿಎಂಕೆ ಆರೋಪಿಸಿ ಪ್ರತಿಭಟನೆಗಳನ್ನು ನಡೆಸಿದೆ. ಆದರೆ ಇದೇ ಉದಯನಿಧಿ ಸ್ಟಾಲಿನ್, ವಿಜಯ್ ಮತ್ತು ತ್ರಿಷಾ ಒಂದು ಸಮಯದಲ್ಲಿ ಗೆಳೆಯರಾಗಿದ್ದರು, ಸಹೋದ್ಯೋಗಿಗಳಾಗಿದ್ದರು. ವಿಜಯ್ ಮತ್ತು ತ್ರಿಷಾ ನಟಿಸಿದ್ದ ಸಿನಿಮಾಕ್ಕೆ ಉದಯನಿಧಿ ಸ್ಟಾಲಿನ್ ಬಂಡವಾಳ ಹೂಡಿ, ಲಾಭ ಮಾಡಿಕೊಂಡಿದ್ದರು.

ಉದಯನಿಧಿ ಸ್ಟಾಲಿನ್, ರೆಡ್ ಜಾಯಿಂಟ್ ಮೂವೀಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅಸಲಿಗೆ ಈ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಮುಖ್ಯ ಕಾರಣ ವಿಜಯ್ ಎನ್ನಲಾಗುತ್ತದೆ. ದಶಕಗಳ ಹಿಂದೆ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್ ಬಹಳ ಆಪ್ತ ಗೆಳೆಯರಾಗಿದ್ದರು. ಆ ಸಮಯದಲ್ಲಿ ವಿಜಯ್ ಅವರ ಸಲಹೆ ಮೇರೆಗೆ ಉದಯನಿಧಿ ಸ್ಟಾಲಿನ್ ರೆಡ್ ಜಾಯಿಂಟ್ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಮೊದಲ ಸಿನಿಮಾ ಆಗಿ ವಿಜಯ್ ನಟನೆಯ ‘ಕುರುವಿ’ ಸಿನಿಮಾ ನಿರ್ಮಾಣ ಮಾಡಿದರು. ಆ ಸಿನಿಮಾನಲ್ಲಿ ತ್ರಿಷಾ ನಾಯಕಿ. ‘ಕುರುವಿ’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.

ಇದನ್ನೂ ಓದಿ:‘ವಿಜಯ್​​ಗೆ ತ್ರಿಷಾ ಮಧ್ಯರಾತ್ರಿ ಸಿಗ್ತಾರೆ, ಮುಂದೆ ಡಿಸಿಎಂ ಆದರೂ ಅಚ್ಚರಿ ಇಲ್ಲ; ಮಾಜಿ ಸಚಿವನ ಟೀಕೆ

ವಿಶೇಷವೆಂದರೆ ‘ಕುರುವಿ’ ಸಿನಿಮಾದ ಬಳಿಕ ಈ ಮೂವರು ಒಟ್ಟಿಗೆ ಕೆಲಸ ಮಾಡಿದ್ದು ಬರೋಬ್ಬರಿ 15 ವರ್ಷದ ಬಳಿಕ. ‘ಕುರುವಿ’ ಸಿನಿಮಾದ ಬಳಿಕ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ್ದು ‘ಲಿಯೋ’ ಸಿನಿಮಾನಲ್ಲಿ. ಆ ಸಿನಿಮಾದ ವಿತರಣೆ ಹಕ್ಕನ್ನು ಉದಯನಿಧಿ ಸ್ಟಾಲಿನ್ ಅವರೇ ಖರೀದಿ ಮಾಡಿದ್ದರು. ಆ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಯ್ತು. ಮತ್ತೊಮ್ಮೆ ಉದಯನಿಧಿ ಸ್ಟಾಲಿನ್ ಭರ್ಜರಿ ಲಾಭ ಮಾಡಿಕೊಂಡರು.

ಆದರೆ ಈಗ ಪರಸ್ಥಿತಿ ಭಿನ್ನವಾಗಿದೆ. ಉದಯನಿಧಿ ಸ್ಟಾಲಿನ್ ಅವರ ಪಕ್ಷವನ್ನು ದೂಳಿಪಟ ಮಾಡಿ ವಿಜಯ್ ಅಧಿಕಾರಕ್ಕೆ ಏರಿದ್ದಾರೆ. ಅವರ ಗೆಳತಿಯಾಗಿ ತ್ರಿಷಾ ಇದ್ದಾರೆ. ಅದೇ ಹಳೆ ಗೆಳೆಯ ಉದಯನಿಧಿ ಸ್ಟಾಲಿನ್ ವಿಪಕ್ಷದ ನಾಯಕನಾಗಿದ್ದಾರೆ. ಆಗ ಗೆಳೆಯರಾಗಿದ್ದವರು ಈಗ ವಿರೋಧಿಗಳಾಗಿದ್ದಾರೆ. ಈಗ ಉದಯನಿಧಿ ಸ್ಟಾಲಿನ್ ನೀಡಿರುವ ಕೀಳು ಹೇಳಿಕೆ ಈ ಮೂವರ ನಡುವಿನ ಗೆಳೆತನವನ್ನು ಸಂಪೂರ್ಣವಾಗಿ ಒಡೆದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *