Headlines

ಪ್ರದೀಪ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ ಪವನ್ ಕಲ್ಯಾಣ್, ಪ್ರಭುದೇವ – Kannada News | Actor Pradeep Rawat passes away Pawan Kalyan Vishnu Manchu pay tribute

ಬಾಲಿವುಡ್, ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕವೇ ಹೆಸರುವಾಸಿಯಾಗಿದ್ದ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು ಆಗಸ್ಟ್ 4ರಂದು ನಿಧನರಾದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಕಾಯಿಲೆ ಉಲ್ಬಣಿಸಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan), ನಟ ವಿಷ್ಣು ಮಂಚು, ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಿಂದಿ ಕಿರುತೆರೆ ಹಾಗೂ ಬಾಲಿವುಡ್ ಸಿನಿಮಾ ಮೂಲಕ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ ಪ್ರದೀಪ್ ರಾವತ್ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ವಿಲನ್ ಆಗಿ ಹೊರಹೊಮ್ಮಿದ್ದರು. ‘ಘಜನಿ’ ಸಿನಿಮಾದ ಕ್ರೂರಿ ವಿಲನ್ ಹಾಗೂ ‘ಲಗಾನ್’ ಚಿತ್ರದ ದೇವ್ ಪಾತ್ರದ ಮೂಲಕ ಇಡೀ ದೇಶದ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಛಾಪು ಮೂಡಿಸಿದ್ದರು.

ಕಂಬನಿ ಮಿಡಿದ ಪವನ್ ಕಲ್ಯಾಣ್:

ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಶ್ರೀ ಪ್ರದೀಪ್ ರಾವತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹೆಸರಾಂತ ನಟ ಪ್ರದೀಪ್ ರಾವತ್ ಅವರ ನಿಧನದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ತಮ್ಮ ಜೊತೆ ನಟಿಸಿದ ದಿನಗಳನ್ನು ನೆನೆದ ಪವನ್ ಕಲ್ಯಾಣ್, ‘ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿದ ಪ್ರದೀಪ್ ರಾವತ್ ಅವರು ತಮ್ಮ ವಿಲನ್ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿದ್ದರು. ನಾನು ನಟಿಸಿದ ‘ಸರ್ದಾರ್ ಗಬ್ಬರ್ ಸಿಂಗ್’ ಮತ್ತು ‘ಕಾಟಮರಾಯುಡು’ ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಪ್ರದೀಪ್ ರಾವತ್ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ದರ್ಶನ್, ಸುದೀಪ್​​ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದ ಪ್ರದೀಪ್ ರಾವತ್

‘ತೆರೆಯ ಮೇಲೆ ಮಾತ್ರ ವಿಲನ್’ ಎಂದ ವಿಷ್ಣು ಮಂಚು:

ನಟ ವಿಷ್ಣು ಮಂಚು ಅವರು ಪ್ರದೀಪ್ ರಾವತ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ, ‘ಪ್ರದೀಪ್ ರಾವತ್ ಅವರ ಅಗಲಿಕೆ ದುಃಖ ತಂದಿದೆ. ಬೆಳ್ಳಿತೆರೆಯ ಮೇಲೆ ಅವರು ಪೋಷಿಸಿದ ಪ್ರತಿಯೊಂದು ಪಾತ್ರಕ್ಕೂ ಅಗಾಧವಾದ ಶಕ್ತಿ ತುಂಬುತ್ತಿದ್ದರು. ಆದರೆ ತೆರೆಯ ಹಿಂದೆ ಅಥವಾ ನಿಜ ಜೀವನದಲ್ಲಿ ಅವರು ಸಂಪೂರ್ಣ ಭಿನ್ನರಾಗಿದ್ದರು. ಅತ್ಯಂತ ವಿನಮ್ರ, ಸರಳ, ಪ್ರೀತಿಯ ವ್ಯಕ್ತಿಯಾಗಿದ್ದರು. ಅವರನ್ನು ನಾನು ಸದಾ ಹೀಗೆಯೇ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಭಗವಂತ ಈ ನೋವನ್ನು ತಡೆಯುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ’ ಎಂದು ಭಾವನಾತ್ಮಕವಾಗಿ ಕಂಬನಿ ಮಿಡಿದಿದ್ದಾರೆ.

ಪ್ರಭುದೇವ, ಯಶಪಾಲ ಶರ್ಮಾ ಸಂತಾಪ:

ಖ್ಯಾತ ನಟ, ನಿರ್ದೇಶಕ ಪ್ರಭುದೇವ ಅವರು ಪ್ರದೀಪ್ ರಾವತ್ ಅವರ ಫೋಟೋ ಹಂಚಿಕೊಂಡು, ‘ಪ್ರದೀಪ್ ರಾವತ್ ಸರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ನನ್ನ ಸಾಂತ್ವನಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಮಾಡಿದ್ದಾರೆ. ಮಂಗಳವಾರ ಸಾಯಂಕಾಲ ಹಿರಿಯ ನಟ ಯಶಪಾಲ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ರಾವತ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ‘ನಮ್ಮ ಗಜನಿ, ಲಗಾನ್ ಸಿನಿಮಾದ ದೇವ್ ಪ್ರದೀಪ್ ರಾವತ್ ಇನ್ನು ನೆನಪು ಮಾತ್ರ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *