ಆಗಸ್ಟ್ 12 ರಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವೂ ಹೌದು. ಸಾಮಾನ್ಯವಾಗಿ ಗ್ರಹಣದ ಹೆಸರು ಕೇಳಿದ ತಕ್ಷಣ ಜನರಲ್ಲಿ ಭಯ, ಅನುಮಾನಗಳು ಮತ್ತು ಸೂತಕದ ನಿಯಮಗಳ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ. ಈ ಗ್ರಹಣದ ಸಮಯದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಮತ್ತು ಧಾರ್ಮಿಕ ನಿಯಮಗಳು ಅನ್ವಯಿಸುತ್ತವೆಯೇ ಎಂಬ ಗೊಂದಲ ಹಲವರಲ್ಲಿದೆ.
ಆದರೆ ಜ್ಯೋತಿಷ್ಯ ಹಾಗೂ ಖಗೋಳ ವಿದ್ವಾಂಸರ ಪ್ರಕಾರ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣವು ಗೋಚರಿಸದಿರುವುದರಿಂದ ಭಾರತದಲ್ಲಿ ಇದಕ್ಕೆ ಯಾವುದೇ ರೀತಿಯ ಸೂತಕ ಅವಧಿ ಅನ್ವಯಿಸುವುದಿಲ್ಲ. ಹೀಗಾಗಿ ಗ್ರಹಣದ ಸೂತಕದ ಕುರಿತು ಭಯ ಪಡುವ ಅಗತ್ಯವಿಲ್ಲ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಬಾಹ್ಯಾಕಾಶ ಪ್ರಭಾವವು 12 ರಾಶಿಗಳ ಮೇಲೆಯೂ ಒಂದಲ್ಲ ಒಂದು ರೀತಿಯಲ್ಲಿ ಬೀರುತ್ತದೆ. ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಈ ಸೂರ್ಯಗ್ರಹಣವು ಕೆಲವು ಸವಾಲುಗಳು ಹಾಗೂ ತೊಂದರೆಗಳನ್ನು ತರಬಹುದು ಎಂದು ಹೇಳಲಾಗಿದೆ. ಆ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಸಿಂಹ ರಾಶಿ:
ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿರುವುದರಿಂದ ಈ ಗ್ರಹಣದ ಪ್ರಭಾವ ಸಿಂಹ ರಾಶಿಯವರ ಮೇಲೆ ಕೊಂಚ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಸಿಂಹ ರಾಶಿಯವರು ಪ್ರತಿಯೊಂದು ಹೆಜ್ಜೆಯನ್ನೂ ಜಾಗರೂಕತೆಯಿಂದ ಇಡಬೇಕು. ವಿಶೇಷವಾಗಿ ಮಾತನಾಡುವಾಗ ತಾಳ್ಮೆ ವಹಿಸುವುದು ಅತ್ಯಗತ್ಯ; ಯಾವುದೇ ಮಾತು ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು. ನೀವು ಪಡುವ ಶ್ರಮ ಹಾಗೂ ಮಾಡುವ ಪ್ರಯತ್ನಗಳು ತಕ್ಷಣಕ್ಕೆ ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ. ಸಾಲದ ತೊಂದರೆಗಳು ಮತ್ತು ಆರ್ಥಿಕ ನಷ್ಟಗಳು ಎದುರಾಗುವುದರಿಂದ ಮನಸ್ಸಿನಲ್ಲಿ ಆತಂಕ ಹಾಗೂ ಉದ್ವೇಗ ಹೆಚ್ಚಾಗಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಉದ್ಯೋಗ ಮತ್ತು ಆರೋಗ್ಯದ ವಿಷಯದಲ್ಲಿ ಈ ಅವಧಿಯು ಕೊಂಚ ಸವಾಲಿನಿಂದ ಕೂಡಿರಲಿದೆ ಎಂದು ವಿದ್ವಾಂಸರು ಹೇಳುತ್ತಾರೆ. ನೀವು ಎಷ್ಟೇ ಕಠಿಣ ಪರಿಶ್ರಮ ಪಟ್ಟರೂ ಅದಕ್ಕೆ ತಕ್ಕ ಸೂಕ್ತ ಫಲಿತಾಂಶ ಅಥವಾ ಗೌರವ ಸಿಗದೆ ಮನಸ್ಸಿನಲ್ಲಿ ಅತೃಪ್ತಿ ಮೂಡಬಹುದು. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಅಥವಾ ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗುವುದು ಕಷ್ಟಕರವಾಗಬಹುದು. ಆರ್ಥಿಕ ವಿಷಯಗಳಲ್ಲಿ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ ಕನ್ಯಾ ರಾಶಿಯವರು ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯಕ.
ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಕುಟುಂಬ ಮತ್ತು ಹಣಕಾಸಿನ ವಿಚಾರದಲ್ಲಿ ಗ್ರಹಣದ ಪ್ರಭಾವ ಕೊಂಚ ಆತಂಕ ತರಬಹುದು. ಹೆಚ್ಚಾಗುವ ಸಾಲದ ಬಾಧೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ, ಆದ್ದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿ ಕುಟುಂಬದಲ್ಲಿ ನಿರಂತರ ಜಗಳ ಅಥವಾ ಮನಸ್ತಾಪಗಳು ಎದುರಾಗಬಹುದು. ಇದರೊಂದಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿರುವುದರಿಂದ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು.
ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಭಯ ಪಡುವ ಅಗತ್ಯವಿಲ್ಲವಾದರೂ, ಜ್ಯೋತಿಷ್ಯೀಯವಾಗಿ ಈ ಮೂರು ರಾಶಿಯವರು ಮುನ್ನೆಚ್ಚರಿಕೆಯಾಗಿ ನಡೆದುಕೊಳ್ಳುವುದು ಉತ್ತಮ. ದಿನನಿತ್ಯ ಇಷ್ಟದೈವದ ಪ್ರಾರ್ಥನೆ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಗ್ರಹಣದ ನಕಾರಾತ್ಮಕ ಪ್ರಭಾವಗಳನ್ನು ಶಮನಗೊಳಿಸಿಕೊಳ್ಳಬಹುದು.
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:30 pm, Thu, 6 August 26