Headlines

ಉಡುಪಿ: ಕಾರ್ಕಳದ ರೇಂಜಾಳದಲ್ಲಿ ಭಾರೀ ಭೂಕುಸಿತದ ಆತಂಕ, ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ – Kannada News | Udupi Landslide Alert: Hill Slope Threatens Three Houses in Karkala’s Renjala

ಭೂ ಕುಸಿತ ಸಾಧ್ಯತೆ ಹಿನ್ನಲೆ ರೇಂಜಾಳ ಗ್ರಾಮಕ್ಕೆ ದೌಡಾಯಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆImage Credit source: tv9

ಉಡುಪಿ, ಆಗಸ್ಟ್ 6: ಕಳೆದ ಒಂದು ವಾರದಿಂದ ಉಡುಪಿ (Udupi) ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಇದೀಗ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಪರಿಸರದಲ್ಲಿ ಆತಂಕಕಾರಿ ಪರಿಸ್ಥಿತಿ ಸೃಷ್ಟಿಸಿದೆ. ಪ್ರಕೃತಿಯ ರೌದ್ರಾವತಾರಕ್ಕೆ ಸಾಕ್ಷಿಯಾಗಿರುವ ಈ ಪ್ರದೇಶದಲ್ಲಿ ಭೂಮಿ ನಿಧಾನವಾಗಿ ಬಿರುಕು ಬಿಡುತ್ತಿದ್ದು, ಮೇಲ್ಭಾಗದಿಂದ ಮಣ್ಣು, ಬಂಡೆಗಳು ಹಾಗೂ ಮರಮಟ್ಟು ಜಾರಿಬೀಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಹರಿಪ್ರಸಾದ್ ಅವರ ಮನೆಯ ಸಮೀಪ ಆರಂಭವಾದ ಭೂಕುಸಿತ ಇದೀಗ ಭಾರಿ ಅಪಾಯದ ಮುನ್ಸೂಚನೆಯಾಗಿ ಪರಿಣಮಿಸಿದೆ. ಸುಮಾರು ಎರಡು ಎಕರೆ ವ್ಯಾಪ್ತಿಯ ಗುಡ್ಡದ ಭಾಗ ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದ್ದು, ಅದರ ಅಡಿಭಾಗದಲ್ಲಿರುವ ಮೂರು ಮನೆಗಳ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದು ದಿನ ಕಳೆಯುವಂತಾಗಿದೆ.

ರಾತ್ರಿಯಿಡೀ ಸುರಿದ ಮಳೆಯ ಬಳಿಕ ಬೆಳಗಾಗುವಷ್ಟರಲ್ಲಿ ಬೃಹತ್ ಬಂಡೆಯೊಂದು ಜಾರಿಬಂದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಗುಡ್ಡದ ಮೇಲ್ಭಾಗದಿಂದ ನಿರಂತರವಾಗಿ ಜರಿದು ಬರುತ್ತಿರುವ ಮಣ್ಣು ಮತ್ತು ಕಲ್ಲುಗಳ ಸದ್ದು ಕೇಳಿದಾಗಲೆಲ್ಲ ಮನೆಗಳಿಂದ ಹೊರಗೆ ಓಡಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವರು ತಮ್ಮ ಮನೆಯಲ್ಲಿದ್ದ ಅಗತ್ಯ ದಾಖಲೆಗಳು, ವಸ್ತುಗಳು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯ ಮಾಹಿತಿ ಪಡೆದ ತಹಶೀಲ್ದಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಾಂತರಕ್ಕೆ ಸೂಚನೆ; ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಅಧಿಕಾರಿಗಳ ಭೇಟಿ ಬಳಿಕ ಅಪಾಯದ ಪ್ರಮಾಣ ಮತ್ತಷ್ಟು ಸ್ಪಷ್ಟವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ, ಸ್ಥಳಾಂತರಕ್ಕೆ ಸೂಚನೆ ನೀಡಿದರೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರ್ಯಾಯ ವಸತಿ, ಮೂಲಭೂತ ಸೌಲಭ್ಯ ಅಥವಾ ಪುನರ್ವಸತಿ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮನೆ ಬಿಟ್ಟು ಹೊರಡಲು ಹೇಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು? ಮಕ್ಕಳೊಂದಿಗೆ ಎಲ್ಲಿ ಆಶ್ರಯ ಪಡೆಯಬೇಕು?’ ಎಂದು ಸಂತ್ರಸ್ತ ಕುಟುಂಬಗಳು ಪ್ರಶ್ನಿಸುತ್ತಿವೆ.

ಭಯ, ಅನಿಶ್ಚಿತತೆ ಮತ್ತು ಆತಂಕದ ನಡುವೆ ಗ್ರಾಮಸ್ಥರು ದಿನ ಕಳೆಯುತ್ತಿದ್ದು, ಮಳೆ ಇನ್ನೂ ಮುಂದುವರಿದರೆ ಇಡೀ ಗುಡ್ಡವೇ ಕುಸಿಯುವ ಭೀತಿ ಆವರಿಸಿದೆ. ಸ್ಥಳೀಯರ ಪ್ರಕಾರ, ಮಳೆ ಇದೇ ರೀತಿ ಮುಂದುವರಿದರೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಂತಹ ದುರಂತ ಇಲ್ಲಿಯೂ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಹೀಗಾಗಿ ಜಿಲ್ಲಾಡಳಿತ ತುರ್ತು ತಾಂತ್ರಿಕ ಸಮೀಕ್ಷೆ ನಡೆಸಿ, ಅಪಾಯದ ಪ್ರದೇಶವನ್ನು ಸಂಪೂರ್ಣವಾಗಿ ಗುರುತಿಸಬೇಕು. ಸಂತ್ರಸ್ತರಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸುವ ಜೊತೆಗೆ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಪ್ಪುರಂನಲ್ಲಿ ಭೀಕರ ಭೂಕುಸಿತ; ರಸ್ತೆ ಸಂಚಾರ ಸ್ಥಗಿತ

ಒಟ್ಟಾರೆಯಾಗಿ, ಸದ್ಯ ಹೆಡ್ಮೆ ಪ್ರದೇಶದಲ್ಲಿ ಪ್ರತಿಯೊಂದು ಮಳೆಯ ಹನಿಯೂ ಆತಂಕವನ್ನು ಹೆಚ್ಚಿಸುತ್ತಿದ್ದು, ಪ್ರತಿಯೊಂದು ಗುಡ್ಡ ಜಾರುವ ಶಬ್ದವೂ ಗ್ರಾಮಸ್ಥರ ಹೃದಯಬಡಿತ ಹೆಚ್ಚಿಸುತ್ತಿದೆ. ಪ್ರಕೃತಿಯ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಸ್ಥಳೀಯರ ಕೂಗಿಗೆ ಜಿಲ್ಲಾಡಳಿತ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *