ರಣ್ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಹಲವಾರು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಇತ್ತೀಚೆಗೆ ಕೆಲವರು ತಮಗೆ ಸಿನಿಮಾ ತೋರಿಸಬೇಕೆಂದು, ಇನ್ನು ಕೆಲವರು ಪಾತ್ರಗಳ ಆಯ್ಕೆ ತಪ್ಪಾಗಿದೆ ಎಂದು ಟೀಕಿಸಲು ಆರಂಭಿಸಿದ್ದರು. ಆದರೆ ಇದೀಗ ಬಿಜೆಪಿಯ ಹಿರಿಯ ನಾಯಕ, ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರು ‘ರಾಮಾಯಣ’ ಸಿನಿಮಾ ವೀಕ್ಷಿಸಿದ್ದು, ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ.
ಪ್ರೈಮ್ ಫೋಕಸ್ ಸ್ಟುಡಿಯೋಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಕಾಡೆಮಿ ಪ್ರಶಸ್ತಿಗಳ ಜ್ಯೂರಿಗಳು (ಆಯ್ಕೆ ಸಮಿತಿ) ‘ರಾಮಾಯಣ’ ಚಿತ್ರಕ್ಕೆ ಆಸ್ಕರ್ ನೀಡದಿದ್ದರೆ ನನಗೆ ತುಂಬಾ ನಿರಾಶೆಯಾಗುತ್ತದೆ. ಇದು ಕೇವಲ ದಶಕ್ಕೊಮ್ಮೆ ಬರುವ ಸಿನಿಮಾ ಅಲ್ಲ, ಬದಲಿಗೆ ಇದು ಒಂದು ಸಹಸ್ರಮಾನದ (Millennium)ಕ್ಕೆ ಒಮ್ಮೆ ಬರುವ ಸಿನಿಮಾ’ ಎಂದು ಫಡ್ನವೀಸ್ ಕೊಂಡಾಡಿದ್ದಾರೆ.
ನರೇಂದ್ರ ಮೋದಿ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾ ಸೆಟ್ಗೆ ಭೇಟಿ ನೀಡಿದ್ದು, ಸಿನಿಮಾದ ಪ್ರೊಡಕ್ಷನ್ ಗುಣಮಟ್ಟವನ್ನು ನೋಡಿ ಆಶ್ಚರ್ಯಚಕಿತವಾಗಿದ್ದನ್ನು ಸ್ಮರಿಸಿದ ಫಡ್ಣವೀಸ್ ಅವರು, ‘ಹೊಸ ಪೀಳಿಗೆಗೆ ನಮ್ಮ ಕಥೆಗಳನ್ನು ಹೇಳಬೇಕಾದ ಮಾರ್ಗ ಇದು ಎಂದು ನಾನು ಭಾವಿಸುತ್ತೇನೆ, ಮತ್ತು ನೀವು ಸ್ಥಾಪಿಸುತ್ತಿರುವುದು ಜಗತ್ತಿನಲ್ಲೇ ಅತ್ಯುತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಸಿನಿಮಾನಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ನಟಿ ಸಾಯಿ ಪಲ್ಲವಿ ಸೀತಾಮಾತೆ ಪಾತ್ರದಲ್ಲಿ, ಯಶ್, ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಮಾತ್ರವೇ ಅಲ್ಲದೆ, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್ ಹಾಗೂ ಅರುಣ್ ಗೋವಿಲ್ ಮುಂತಾದ ದೊಡ್ಡ ತಾರಾಬಳಗವಿದೆ.
ಇದನ್ನೂ ಓದಿ:ರಣ್ಬೀರ್ ಕಪೂರ್ ಸಿನಿಮಾ ಸೆಟ್ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್ಐಆರ್ಗೆ ಆಗ್ರಹ
ಸಿನಿಮಾಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇಬ್ಬರು ವಿಶ್ವಶ್ರೇಷ್ಠ ಸಂಗೀತ ನಿರ್ದೇಶಕರು ಈ ಸಿನಿಮಾಕ್ಕಾಗಿ ಕೈ ಜೋಡಿಸಿರುವುದು ವಿಶೇಷ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್ಇಜಿ (DNEG) ವಿಎಫ್ಎಕ್ಸ್ ಸ್ಟುಡಿಯೋ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರೀಶನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು ಇದೇ ವರ್ಷ ನವೆಂಬರ್ 6 ರಂದು ವಿಶ್ವದಾದ್ಯಂತ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ