ಬೆಂಗಳೂರು, ಆ.8: ರಾಜ್ಯ ರಾಜಧಾನಿಯಲ್ಲಿ ವಲಸಿಗರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು ಮತ್ತು ಸರ್ಕಾರದ ಬಗ್ಗೆ ಟೀಕಿಸುವುದು ನಿಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ “ವಿಜಿಲಾಂಟಿಸಂ” ಅಥವಾ “ಮಾರಲ್ ಪೋಲಿಸಿಂಗ್” ಅನ್ನು ಸರ್ಕಾರ ಸಹಿಸುವುದಿಲ್ಲ ಎಂದಿದ್ದಾರೆ. ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ ಮತ್ತು ಸರ್ಕಾರದ ರಹಸ್ಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತದೆ ಎಂದು ಖರ್ಗೆ ತಿಳಿಸಿದರು. ನಿಜವಾದ ದೇಶಭಕ್ತರು ಮತ್ತು ರಾಜ್ಯದ ಹಿತಾಸಕ್ತಿ ಬಯಸುವವರು ಮಾಹಿತಿ ಇದ್ದರೆ ಅದನ್ನು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು. ಸರ್ಕಾರವು ಈಗಾಗಲೇ ಬಾಂಗ್ಲಾದೇಶ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ಕಡೆಯಿಂದ ಬಂದಿರುವ ಸುಮಾರು 1000 ವಲಸಿಗರನ್ನು ಕಳೆದ ಮೂರು ತಿಂಗಳಲ್ಲಿ ಪತ್ತೆ ಹಚ್ಚಿ ಎಫ್ಆರ್ಒಗೆ ಹಸ್ತಾಂತರಿಸಿದೆ. ಬಿಎಸ್ಎಫ್ ಮತ್ತು ಎಫ್ಆರ್ಒ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸರ್ಕಾರ ಈ ವಿಚಾರದಲ್ಲಿ ಶೇ.100ರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಇಂತಹ ಪ್ರಚಾರದ ಕೃತ್ಯಗಳಿಂದ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ