ಬೆಂಗಳೂರು, ಆಗಸ್ಟ್ 10: ಕಾವೇರಿ ನದಿ ನೀರು ಹಂಚಿಕೆ ವಿವಾದ (Cauvery Dispute) ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಸಂಘಟನೆಗಳು ಬೆಂಬಲ ಹಿಂಪಡೆಯುತ್ತಿದ್ದು, ಬಂದ್ ಬಹುತೇಕ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪಟ್ಟು ಸಡಿಲಿಸದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ‘ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್ ಮಾಡೇ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಕರ್ನಾಟಕದ ಉದ್ದಗಲಕ್ಕೂ ಬಂದ್ಗೆ ಬೆಂಬಲವಿದೆ: ವಾಟಾಳ್ ನಾಗರಾಜ್
ಬೆಂಗಳೂರಿನ ಅತ್ತಿಬೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಇಡೀ ಕರ್ನಾಟಕದ ಉದ್ದಗಲಕ್ಕೂ ಬಂದ್ಗೆ ಬೆಂಬಲವಿದೆ. 2000ಕ್ಕೂ ಮೇಲ್ಪಟ್ಟು ಸಂಘಟನೆಗಳು ಬೆಂಬಲ ನೀಡಿವೆ. ವಿಧ್ಯಾರ್ಥಿಗಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಬಂದ್ ಮಾಡಿದರೆ ಅದರ ಶಕ್ತಿಯೇ ಬೇರೆ’ ಎಂದರು.
ಮಳೆ ಬಂದು ಯಾವ ಡ್ಯಾಂ ತುಂಬಿದೆ?
ಇನ್ನು ಬಂದ್ ಬೇಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಬಂದ್ ಮಾಡೋದು ಬೇಡ ಅಂತ ನನ್ನ ಹತ್ತಿರ ಯಾರು ಹೇಳಿಲ್ಲ. ಬಂದ್ ಮಾಡಬೇಕು ಅಂತಾನೇ ಎಲ್ಲರೂ ಹೇಳಿರೋದು. ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ. ಬಿರುಕು ಮಾಡಿದರೆ ಸಿಮೆಂಟ್ ಹಾಕಿ ಸರಿ ಮಾಡುತ್ತೇವೆ. ಮಳೆ ಬಂದು ಯಾವ ಡ್ಯಾಂ ತುಂಬಿದೆ, ಕೆಆರ್ಎಸ್ ಡ್ಯಾಂ ಇನ್ನೂ ತುಂಬಿಲ್ಲ’ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ
‘ಮೇಕೆದಾಟಿಗಾಗಿ ಸಿಎಂ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿದರು. ಏಕೆ ಮೇಕೆದಾಟು ಯೋಜನೆಯನ್ನ ಮಾಡಿಲ್ಲ’ ಎಂದು ಪ್ರಶ್ನಿಸಿದರು. ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ತಮಿಳರು, ತೆಲುಗು, ಮಲಯಾಳಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ’ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್ಗೆ ಬ್ರೇಕ್? ಆಗಸ್ಟ್ 13ರ ಬಂದ್ ಬಹುತೇಕ ರದ್ದು ಸಾಧ್ಯತೆ
‘ಆಗಸ್ಟ್ 13ರ ಇಡೀ ಕರ್ನಾಟಕ ಬಂದ್ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಹಾಗೂ ಪ್ರತಿಯೊಬ್ಬರೂ ಬೀದಿಗಿಳಿದು ಮನೆ-ಮನೆಯಿಂದ ಈಡುಗಾಯಿ ಹೊಡೆದು ಬಂದ್ ಯಶಸ್ವಿಗೊಳಿಸುವಂತೆ’ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.