ರಾಯಚೂರು, ಆಗಸ್ಟ್ 12: ರಾಯಚೂರು (raichur) ತಾಲೂಕಿನ ಬಿಚ್ಚಾಲಿ ಕ್ಯಾಂಪ್ನಲ್ಲಿ ದೇವಸ್ಥಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಚರ್ಚ್ ನಿರ್ಮಿಸಲಾಗಿದೆ ಎನ್ನುವ ಆರೋಪ ತಾರಕಕ್ಕೇರಿದ್ದು, ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ (Clash) ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಾದಿತ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಡೆದಿದ್ದೇನು?
2009ರ ಪ್ರವಾಹದಲ್ಲಿ ಸಂತ್ರಸ್ತರಾದ ಬಿಚ್ಚಾಲಿ ಕ್ಯಾಂಪ್ನ ಜನರಿಗಾಗಿ ಸರ್ವೇ ನಂಬರ್ 322ರ ಜಾಗದಲ್ಲಿ ಖಾಸಗಿ ಕಂಪನಿಯೊಂದು 132 ಮನೆಗಳನ್ನು ನಿರ್ಮಿಸಿತ್ತು. ಅವುಗಳಲ್ಲಿ 131 ಮನೆಗಳು ಅಲಾಟ್ ಆಗಿದ್ದರೂ, ಮನೆಗಳು ಚಿಕ್ಕದಾಗಿದ್ದ ಕಾರಣ ಯಾರೂ ಅಲ್ಲಿಗೆ ವಾಸಕ್ಕೆ ಹೋಗಿರಲಿಲ್ಲ. ಅದೇ ವೇಳೆಯಲ್ಲಿ ಆ ಮನೆಗಳ ಬಳಿ ಗಾರ್ಡನ್ ಹಾಗೂ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ಸ್ಥಳ ಮೀಸಲಿಟ್ಟಿತ್ತು. ಆದರೆ, ಗ್ರಾಮಸ್ಥರ ವಿರೋಧದ ನಡುವೆಯೂ ಈ ಜಾಗದಲ್ಲಿ 2024ರಲ್ಲಿ ಚರ್ಚ್ ನಿರ್ಮಿಸಲಾಗಿದೆ ಎಂಬುದು ಒಂದು ಗುಂಪಿನ ಆರೋಪವಾಗಿದೆ. ಆದರೆ, ಮತ್ತೊಂದು ಗುಂಪಿನವರು ಕಾನೂನುಬದ್ಧವಾಗಿಯೇ ಚರ್ಚ್ ನಿರ್ಮಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.
ಆಂಜನೇಯನ ಮೂರ್ತಿ ತೆರವಿಗೆ ಯತ್ನ: ಎರಡು ಗುಂಪುಗಳ ಮಧ್ಯೆ ಜಗಳ
ಈ ವಿವಾದ ಬುಗಿಲೆದ್ದ ಬಳಿಕ ಇತ್ತೀಚೆಗೆ ಒಂದು ಗುಂಪಿನವರು ಚರ್ಚ್ ಎದುರಿಗಿನ ದೇವಸ್ಥಾನದ ಜಾಗದಲ್ಲಿ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಮವಾಸ್ಯೆ ಇದ್ದ ಹಿನ್ನೆಲೆ ಪೂಜೆ ಹಾಗೂ ಅನ್ನದಾನ ನಡೆಸಲು ಕೆಲಸ ಕಾರ್ಯಗಳು ನಡೆಯುತ್ತಿದ್ದಾಗ, ಕೆಲವರು ಪ್ರತಿಷ್ಠಾಪಿಸಲಾಗಿದ್ದ ಆಂಜನೇಯನ ಮೂರ್ತಿಯನ್ನು ತೆರವುಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ.
ಇದನ್ನೂ ಓದಿ: ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ: ರಾಯಚೂರಲ್ಲಿ ಯುವಕನ ಬಂಧನ
ಈ ಹಿಂದೆಂದೂ ಇಂತಹ ಘಟನೆಗೆ ಸಾಕ್ಷಿಯಾಗದ ಗ್ರಾಮದಲ್ಲಿ ಈ ರೀತಿ ಹೊಡೆದಾಟ ನಡೆದಿರುವುದಕ್ಕೆ ಗ್ರಾಮದ ಹಿರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಎರಡೂ ಗುಂಪಿನವರನ್ನು ಕರೆಸಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ನಿರ್ಧರಿಸಲಾಗಿತ್ತು. ಅಷ್ಟರಲ್ಲೇ ಈ ಗಲಾಟೆ ಸಂಭವಿಸಿದೆ. ಇನ್ನು ಅಕ್ರಮ ಚರ್ಚ್ ತೆರವುಗೊಳಿಸುವಂತೆ ಗ್ರಾಮಸ್ಥರು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.
ಪ್ರಕರಣ ದಾಖಲು
ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಗ್ರಾಮದಲ್ಲಿ ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.