ಬಾಲಿವುಡ್ನ ದಿಗ್ಗಜ ನಟ ಧರ್ಮೇಂದ್ರ ಕಳೆದ ವರ್ಷ ನವೆಂಬರ್ನಲ್ಲಿ ನಮ್ಮನ್ನಗಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರ ನೆನಪುಗಳು ಇಂದಿಗೂ ಸದಾ ಹಸಿರಾಗಿವೆ. ಅವರ ಉದಾರತೆ ಹಾಗೂ ಸರಳತೆಯನ್ನು ಚಿತ್ರರಂಗದ ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್ಪತಿ 18’ ಶೋನಲ್ಲಿ ಧರ್ಮೇಂದ್ರ ಅವರ ಔದಾರ್ಯವನ್ನು ನೆನಪಿಸಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಧರ್ಮೇಂದ್ರ ಅವರ ಮನೆಯ ಆತಿಥ್ಯದ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಧರ್ಮೇಂದ್ರ ಅವರ ಮನೆ ಎಲ್ಲರಿಗೂ ಮುಕ್ತವಾಗಿರುತ್ತಿತ್ತು. ಯಾರೇ ಬಂದರೂ ಅದು ಅವರದೇ ಸ್ವಂತ ಮನೆಯಂತೆ ಇರುತ್ತಿತ್ತು. ಯಾರನ್ನು ಬೇಕಾದರೂ ಅವರು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು.
‘ಒಮ್ಮೆ ಧರ್ಮೇಂದ್ರ ಅವರು ಮನೆಗೆ ಬಂದಾಗ 4-5 ಜನರು ಮೆಟ್ಟಿಲು ಹತ್ತುತ್ತಿರುವುದನ್ನು ಕಂಡರು. ಧರ್ಮೇಂದ್ರ ಅವರು ನೀವು ಯಾರು ಎಂದು ಆ ಜನರನ್ನು ವಿಚಾರಿಸಿದರು. ನಾವು ನಿಮ್ಮ ಊರಿನಿಂದ ಬಂದಿದ್ದೇವೆ ಎಂದು ಅವರು ಹೇಳಿದರು. ತಮ್ಮ ಹೆಂಡತಿಯೇ ಅವರನ್ನು ಕರೆಸಿರಬಹುದು ಎಂದು ಧರ್ಮೇಂದ್ರ ಅಂದುಕೊಂಡಿದ್ದರು. ತಮ್ಮ ಮನೆಗೆ ಯಾರು ಬಂದು ಹೋಗುತ್ತಿದ್ದಾರೆ ಎಂಬುದು ಸ್ವತಃ ಧರ್ಮೇಂದ್ರ ಅವರಿಗೇ ತಿಳಿಯುತ್ತಿರಲಿಲ್ಲ. ಅವರ ಹೃದಯ ಅಷ್ಟು ವಿಶಾಲವಾಗಿತ್ತು’ ಎಂದು ಅಮಿತಾಭ್ ಹೇಳಿದ್ದಾರೆ.
ಧರ್ಮೇಂದ್ರ ಅಗಲಿದಾಗಲೂ ಅಮಿತಾಭ್ ಬಚ್ಚನ್ ಭಾವುಕ ಸಾಲುಗಳನ್ನು ಬರೆದಿದ್ದರು. ಧರ್ಮೇಂದ್ರ ಅವರ ಸರಳತೆ ಮತ್ತು ದೊಡ್ಡ ಗುಣವನ್ನು ಅವರು ಕೊಂಡಾಡಿದ್ದರು. ಪಂಜಾಬ್ನ ಹಳ್ಳಿಯ ಮಣ್ಣಿನ ಗುಣವನ್ನು ಅವರು ಕೊನೆಯವರೆಗೂ ಉಳಿಸಿಕೊಂಡಿದ್ದರು.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದು ಫೇಕ್ ನ್ಯೂಸ್; ಸ್ಪಷ್ಟನೆ ನೀಡಿದ ಬಿಗ್ ಬಿ
ಚಿತ್ರರಂಗ ಎಷ್ಟೇ ಬದಲಾದರೂ ಧರ್ಮೇಂದ್ರ ಅವರು ಮಾತ್ರ ಎಂದಿಗೂ ಬದಲಾಗಲಿಲ್ಲ. ಅವರ ನಗು ಹಾಗೂ ಬೆಚ್ಚಗಿನ ಪ್ರೀತಿ ಎಲ್ಲರಿಗೂ ಸಿಗುತ್ತಿತ್ತು. ಅವರ ಅಗಲಿಕೆಯಿಂದ ಸೃಷ್ಟಿಯಾದ ಶೂನ್ಯತೆಯನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಬಚ್ಚನ್ ಕಂಬನಿ ಮಿಡಿದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.