ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶImage Credit source: Tv9 Kannada
ಚಾಮರಾಜನಗರ, ಆಗಸ್ಟ್ 16: ಹನೂರು ಬಳಿ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಕೇಸ್ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಸಿ 7 ದಿನದೊಳಗಾಗಿ ವರದಿ ನೀಡಲು ಆದೇಶಿಸಿದ್ದಾರೆ. ಇನ್ನು ಘಟನೆ ಬಗ್ಗೆ ಹನೂರಿನಲ್ಲಿ ಎಸಿ ದಿನೇಶ್ ಕುಮಾರ್ ಮೀನಾ ಪ್ರತಿಕ್ರಿಯೆ ನೀಡಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ. ಮಹಜರು ಕಾರ್ಯ ಆಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ರಿಪೋರ್ಟ್ ಸಲ್ಲಿಕೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
ಮುಂದುವರಿದ ಪ್ರತಿಭಟನೆ
ಇನ್ನು ಮೂವರ ಸಾವಿನ ಸಂಬಂಧ ಹನೂರಿನಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ದಿಢೀರ್ ರಸ್ತೆ ತಡೆ ನಡೆಸಲಾಗಿದೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ವಾಗ್ವಾದ ನಡೆದಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಂತಿಮವಾಗಿ ಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹನೂರು ಠಾಣೆ ಎದುರು ಕೂಡ ಪ್ರತಿಭಟನೆ ನಡೆದಿದ್ದು, ಎನ್ಕೌಂಟರ್ ಮಾಡಿದವರನ್ನು ಸ್ಥಳಕ್ಕೆ ಕರೆತನ್ನಿ. ನಮ್ಮವರನ್ನು ಕೊಂದವರಿಗೆ ನಾವೇ ಶಿಕ್ಷೆ ಕೊಡುತ್ತೇವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಶವಾಗಾರದಲ್ಲಿ ಪಂಚನಾಮೆಗೆ ಸಿದ್ಧತೆ
ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ 3 ಮೃತದೇಹದ ಪಂಚನಾಮೆಗೆ ಸಿದ್ಧತೆ ನಡೆದಿದ್ದು, 3 ತಹಶೀಲ್ದಾರ್ಗಳಿಗೆ ಜವಾಬ್ದಾರಿ ನೀಡಲಾಗಿದೆ. ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜುಗೆ ಸೆಬಾಸ್ಟಿಯನ್ ಡೇವಿಡ್ ಕುಮಾರ್, ಯಳಂದೂರು ತಹಶೀಲ್ದಾರ್ ನಯನಾಗೆ ಆಂಥೋಣಿ, ಚಾಮರಾಜನಗರ ತಹಶೀಲ್ದಾರ್ ಗಿರಿಜಾಗೆ ಪೀಟರ್ ಶವದ ಜವಾಬ್ದಾರಿ ನೀಡಲಾಗಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿಯೇ ಮೂರು ಶವಗಳಿದ್ದು, ಪೀಟರ್ ಕುಟುಂಬಸ್ಥರು ಶವಾಗಾರದ ಬಳಿಗೆ ಇನ್ನೂ ಬಂದಿಲ್ಲ ಎನ್ನಲಾಗಿದೆ.
ಹನೂರಿನಲ್ಲಿ ಐಜಿಪಿ ಮೊಕ್ಕಾಂ
ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಪ್ರವಾಸಿ ಮಂದಿರದಲ್ಲಿ ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ, ಚಾಮರಾಜನಗರ ಎಸ್ಪಿ ಮುತ್ತುರಾಜ್, ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಜೊತೆ ಸಭೆ ನಡೆಸಿದ್ದಾರೆ. ಘಟನೆ ಬಗ್ಗೆ ವಿವರ ಕಲೆಹಾಕುತ್ತಿರುವ ಅವರು, ನಿನ್ನೆಯಿಂದಲೂ ಹನೂರಿನಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:35 am, Sun, 16 August 26