ಬೆಂಗಳೂರು, ಆಗಸ್ಟ್ 17: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮತ್ತೊಂದು ಬಿಗ್ ಶಾಕ್ ನೀಡಿದೆ. ರಾಜ್ಯದಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ವಾಹನಗಳ ಎಮಿಷನ್ ಸರ್ಟಿಫಿಕೇಟ್ (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ/PUC) ದರವನ್ನು ಹೆಚ್ಚಳ ಮಾಡಲಾಗಿದೆ.
4 ವರ್ಷಗಳ ಬಳಿಕ ಮತ್ತೆ ಏರಿಕೆಯಾದ ಎಮಿಷನ್ ದರ
ದ್ವಿಚಕ್ರ ವಾಹನ, ಆಟೋ, ಕಾರು, ಲಾರಿ ಹಾಗೂ ಬಸ್ ಸೇರಿದಂತೆ ಯಾವುದೇ ಮಾದರಿಯ ವಾಹನ ಮಾಲೀಕರಿಗೂ ಇಂದಿನಿಂದ ಈ ದರ ಏರಿಕೆಯ ಬಿಸಿ ತಟ್ಟಲಿದೆ. 2021-2022ರಲ್ಲಿ ಕೊನೆಯ ಬಾರಿಗೆ ಎಮಿಷನ್ ಟೆಸ್ಟಿಂಗ್ ದರವನ್ನು ಪರಿಷ್ಕರಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿರುವುದು, ಕೇಂದ್ರಗಳ ಬಾಡಿಗೆ, ಕರೆಂಟ್ ಬಿಲ್ ಹಾಗೂ ಸಿಬ್ಬಂದಿಯ ಸಂಬಳ ಭರಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದರ ಹೆಚ್ಚಿಸುವಂತೆ ‘ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ಸ್ ಅಸೋಸಿಯೇಷನ್’ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಸಲ್ಲಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಈಗ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಎಮಿಷನ್ ಟೆಸ್ಟಿಂಗ್ ಕೇಂದ್ರಗಳ ನಿರ್ವಹಣಾ ವೆಚ್ಚ ಸಾಕಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಎಮಿಷನ್ ಸರ್ಟಿಫಿಕೇಟ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಯೋಗೀಶ್ ತಿಳಿಸಿದ್ದಾರೆ.
ಯಾವ ವಾಹನಕ್ಕೆ ಎಷ್ಟಿತ್ತು? ಈಗ ಎಷ್ಟಾಗಿದೆ? (ಹಳೆಯ vs ಹೊಸ ದರ ಪಟ್ಟಿ)
ಸವಾರರಿಗೆ ನಿಯಮ ಪಾಲನೆ ಕಡ್ಡಾಯ: ತಪ್ಪಿದರೆ ದಂಡದ ಬಿಸಿ!
ರಾಜ್ಯದಲ್ಲಿ ಒಟ್ಟು ಮೂರುವರೆ ಕೋಟಿಗೂ ಹೆಚ್ಚು ವಾಹನಗಳಿದ್ದು, ಕೇವಲ ರಾಜಧಾನಿ ಬೆಂಗಳೊಂದರಲ್ಲೇ ಸುಮಾರು 1 ಕೋಟಿ 30 ಲಕ್ಷಕ್ಕೂ ಅಧಿಕ ವಾಹನಗಳಿವೆ. ಪ್ರತಿಯೊಂದು ವಾಹನವೂ ನಿಯಮಾನುಸಾರ ಪ್ರತಿ 6 ತಿಂಗಳು ಅಥವಾ ವರ್ಷಕ್ಕೊಮ್ಮೆ ಎಮಿಷನ್ ಟೆಸ್ಟ್ ಮಾಡಿಸುವುದು ಕಡ್ಡಾಯ.
ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಸಂಚಾರ ಪೊಲೀಸರು 500 ರೂ. ಇಂದ 1,000 ರೂ.ವರೆಗೆ ದಂಡ ವಿಧಿಸುತ್ತಾರೆ. ಆರ್ಟಿಒ (RTO) ಅಧಿಕಾರಿಗಳು ವಾಹನಗಳಿಗೆ ಎಫ್ಸಿ (Fitness Certificate) ನವೀಕರಿಸುವುದಿಲ್ಲ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಇನ್ಶೂರೆನ್ಸ್ ಕ್ಲೈಮ್ ಸಿಗುವುದು ಕಷ್ಟವಾಗುತ್ತದೆ. ಈ ಹಿಂದೆ ಪ್ರತಿ ಎಮಿಷನ್ ಟೆಸ್ಟ್ಗೆ ಸರ್ಕಾರಕ್ಕೆ 3.25 ರೂ. ನೀಡಬೇಕಿತ್ತು, ಆದರೆ ಈಗ ಸರ್ಕಾರಕ್ಕೆ ನೀಡಬೇಕಾದ ಪಾಲು 13.80 ರೂ.ಗೆ ಏರಿಕೆಯಾಗಿದೆ.
ಸಾರ್ವಜನಿಕರ ಆಕ್ರೋಶ
ಸರ್ಕಾರದ ಈ ತೀರ್ಮಾನಕ್ಕೆ ವಾಹನ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಮಾಡಿಸಬೇಕು. ಈಗಾಗಲೇ ಬೆಲೆ ಏರಿಕೆಯಿಂದ ತೊಂದರೆಯಲ್ಲಿದ್ದೇವೆ, ಈಗ ಈ ದರ ಹೆಚ್ಚಳ ಸಾಮಾನ್ಯ ಹಾಗೂ ಬಡ ವಾಹನ ಸವಾರರಿಗೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ, ದಿನನಿತ್ಯದ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದರ ನಡುವೆಯೇ ಸಾರಿಗೆ ಇಲಾಖೆಯ ಈ ನಿರ್ಧಾರ ಕೋಟ್ಯಂತರ ವಾಹನ ಮಾಲೀಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕುವುದು ಖಚಿತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ