ಚಾಮರಾಜನಗರ, ಆಗಸ್ಟ್ 18: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಕರಡಿಕಲ್ ಗುಡ್ಡದ ಬಳಿ ನಡೆದ ಎನ್ಕೌಂಟರ್ನಲ್ಲಿ ಮೂವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಟಿವಿ9ಗೆ ಆರ್ಎಫ್ಓ ಮರಿಸ್ವಾಮಿ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆಗಸ್ಟ್ 14ರಂದು ಕಾಡಿನಲ್ಲಿ ಗುಂಡಿನ ಶಬ್ದ ಕೇಳಿಬಂದಿತ್ತು. ಟಾರ್ಚ್ ಬೆಳಕು ಕೂಡ ಅರಣ್ಯದಲ್ಲಿ ಕಾಣಿಸಿತ್ತು. ಇದರಿಂದ ಬೇಟೆಗಾರರು ಕಾಡಿನಲ್ಲಿ ಇರುವ ಮಾಹಿತಿ ಮೇರೆಗೆ ಎರಡು ತಂಡಗಳಾಗಿ ಕಾಡಿಗೆ ಹೋಗಲಾಗಿತ್ತು. ಅಲ್ಲಿ ಬೀಡುಬಿಟ್ಟಿದ್ದ ಕಳ್ಳಬೇಟೆಗಾರರು ಶರಣಾಗುವ ಬದಲು ಸಿಬ್ಬಂದಿ ಮೇಲೆಯೇ ನೇರವಾಗಿ ಗುಂಡಿನ ದಾಳಿಗೆ ಮುಂದಾದರು. ಈ ವೇಳೆ ಅನಿವಾರ್ಯವಾಗಿ ಸಿಬ್ಬಂದಿ ಪ್ರತಿಯಾಗಿ ಫೈರಿಂಗ್ ಮಾಡಬೇಕಾಯಿತು’ ಎಂದರು. ಮೃತರು ದನ ಮೇಯಿಸಲು ಬಂದಿದ್ದರು ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ‘ಕಾಡಿನ ಸುಮಾರು 8 ಕಿ.ಮೀ ಒಳಭಾಗದಲ್ಲಿ ಆಹಾರ ಸಾಮಗ್ರಿಗಳು, ಮದ್ದುಗುಂಡು ಹಾಗೂ ನಾಡ ಬಂದೂಕುಗಳೊಂದಿಗೆ ವ್ಯವಸ್ಥಿತವಾಗಿ ಕಳ್ಳಬೇಟೆಗೆ ಬಂದಿರುವುದು ಸ್ಥಳದಲ್ಲಿ ದೊರೆತ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.