ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡುವುದರಿಂದ ಅಶುಭ ಫಲಗಳು ಎದುರಾಗಬಹುದು ಎಂದು ಧರ್ಮಗ್ರಂಥಗಳು ಸೂಚಿಸುತ್ತವೆ ಎಂಬುದಾಗಿ ಟಿವಿ9 ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಣೆ ನೀಡಿದ್ದಾರೆ. ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಜ ಆಗಿದ್ದು, ಈ ದಿಕ್ಕಿಗೆ ಮಾಡುವ ನಮಸ್ಕಾರವು ಅವರಿಗೆ ಸೇರುತ್ತದೆ. ಸಾಮಾನ್ಯವಾಗಿ ಹಿರಿಯರು ಅಥವಾ ಗುರುಗಳಿಗೆ ನಮಸ್ಕರಿಸಿದಾಗ ಆಶೀರ್ವಾದಗಳು ದೊರೆಯುತ್ತವೆ. ಆದರೆ ಯಮಧರ್ಮರಾಜನು ನಮಸ್ಕರಿಸಿದವರಿಗೆ ಪಾಪಕರ್ಮಗಳನ್ನು ಅನಾರೋಗ್ಯದ ರೂಪದಲ್ಲಿ ಅನುಭವಿಸಲು ‘ಆಶೀರ್ವದಿಸುತ್ತಾನೆ’ ಎಂದು ಗರುಡಪುರಾಣ ಮತ್ತು ಇತರ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಇದರರ್ಥ, ದಕ್ಷಿಣಕ್ಕೆ ನಮಸ್ಕರಿಸುವುದರಿಂದ ಪ್ರಾಣಕ್ಕೆ ಸಂಕಟ ಅಥವಾ ಅನಾರೋಗ್ಯಗಳು ಬರಬಹುದು ಎಂದು ಗುರೂಜಿ ವಿವರಿಸಿದ್ದಾರೆ.
ಆದರೆ, ಸಂಧ್ಯಾವಂದನೆಯಂತಹ ಸಂದರ್ಭಗಳಲ್ಲಿ ನಾಲ್ಕು ದಿಕ್ಕುಗಳಿಗೂ ನಮಸ್ಕರಿಸುವ ಪದ್ಧತಿಯು ಶುಭಕರವಾಗಿದೆ. ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ನೇರವಾಗಿ ನಮಸ್ಕಾರ ಮಾಡಬಾರದು. ಹಿರಿಯರು ದಕ್ಷಿಣ ದಿಕ್ಕಿನಲ್ಲಿದ್ದರೆ ಅವರನ್ನು ಬೇರೆ ಕಡೆ ತಿರುಗಿ ನಿಲ್ಲಿಸಿ ನಮಸ್ಕರಿಸುವುದು ಶುಭ ಎಂದು ತಿಳಿಸಲಾಗಿದೆ.