ಮೈಸೂರು ಸಂಚಾರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಉಚಿತ ಹೆಲ್ಮೆಟ್ ವಿತರಣೆ – Kannada News | Free Helmets for Students: Mysuru Police Intensify Road Safety Awareness Campaign

ಹೆಲ್ಮೆಟ್ ವಿತರಣೆ, ರಸ್ತೆ ಸುರಕ್ಷತೆImage Credit source: Tv9 kannada

ಮೈಸೂರು, ಜ.29: ಮೈಸೂರು ಸಂಚಾರ ಪೊಲೀಸರು (Mysuru Traffic Police) ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ, ಮೈಸೂರಿನ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಜೆಎಲ್‌ಬಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಪಿ ಸುಂದರ್ ರಾಜ್ ಅವರು 250 ಪೂರ್ಣ ಮುಖ ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ವಿತರಿಸಿದರು. ಈ ಮೂಲಕ ವಿದ್ಯಾರ್ಥಿನಿಯರು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿಂದ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿರುವ ಮೈಸೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಕೆ.ಆರ್. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಸ್.ಡಿ.ಎಂ. ಕಾಲೇಜನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಗುಣ ಎಂಬ ಸಂಸ್ಥೆಯು ಈ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಕೈಜೋಡಿಸಿತ್ತು. ಹೆಲ್ಮೆಟ್ ಧರಿಸುವುದಕ್ಕೆ ಯಾಕೆ ಆದ್ಯತೆ ನೀಡಬೇಕು ಎಂಬುದನ್ನು ವಿವರಿಸಿದ ಡಿಸಿಪಿ ಸುಂದರ್ ರಾಜ್, ಸಂಭವಿಸುವ 100 ಅಪಘಾತಗಳಲ್ಲಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳ ಸವಾರರೇ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಂಕಿಅಂಶಗಳ ಮೂಲಕ ತಿಳಿಸಿದರು. ಮಾರಣಾಂತಿಕ ಪ್ರಕರಣಗಳು ವರದಿಯಾಗುವುದರಿಂದ ಇಡೀ ಕುಟುಂಬವೇ ದುಃಖಕ್ಕೆ ಈಡಾಗುತ್ತದೆ ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಅಪಘಾತಗಳಿಂದಾಗುವ ದುಷ್ಪರಿಣಾಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಇಲ್ಲಿದೆ ನೋಡಿ ವಿಡಿಯೋ;

ಈ ರಸ್ತೆ ಸುರಕ್ಷತಾ ಸಪ್ತಾಹದ ಘೋಷವಾಕ್ಯ “ರೋಡ್, ಸಡಕ್, ಜೀವನ್ ರಕ್ಷಕ್” (ರಸ್ತೆ ಸುರಕ್ಷತೆ, ಜೀವನ ರಕ್ಷಕ) ಎಂಬುದಾಗಿದೆ. ಸೇಫ್ ಸವಾರಿ, ಸುರಕ್ಷಿತ ಸವಾರಿ ಎಂಬ ಧ್ಯೇಯದೊಂದಿಗೆ ಮೈಸೂರು ಸಂಚಾರ ಪೊಲೀಸರು ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಯುವಕರು ವೇಗವಾಗಿ ವಾಹನ ಚಲಾಯಿಸುವ ಪ್ರವೃತ್ತಿ ಹೊಂದಿರುವುದರಿಂದ, ಅವರಿಗೆ ಅರಿವು ಮೂಡಿಸಿ ಅವರ ಸುರಕ್ಷತೆಗೆ ಆದ್ಯತೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರತಿನಿಧಿಗಳು, ತಮ್ಮ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್, ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಕಾರ್ಯಕ್ರಮಗಳ ಮೂಲಕ ಸಂಚಾರ ಪೊಲೀಸರೊಂದಿಗೆ ಸೇರಿ ಜಾಥಾ ಕಾರ್ಯಕ್ರಮಗಳನ್ನು ನಡೆಸಿ, ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿಯರಾದವರು ಈ ಹಿಂದೆ ಕೂಡ ಹೆಲ್ಮೆಟ್ ಧರಿಸುತ್ತಿದ್ದರು ಎಂದು ದೃಢಪಡಿಸಿದರು. ಈ ಕಾರ್ಯಕ್ರಮದಿಂದ ದೊರೆತ ಮಾಹಿತಿಯು ಹೆಲ್ಮೆಟ್ ಧರಿಸುವಿಕೆಯ ಪರಿಣಾಮಕಾರಿತ್ವವನ್ನು ಇನ್ನಷ್ಟು ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಭವಿಷ್ಯದಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೂ ಹೆಲ್ಮೆಟ್ ಧರಿಸುವಂತೆ ಉತ್ತೇಜಿಸುವುದಾಗಿ ವಿದ್ಯಾರ್ಥಿನಿಯರು ಪ್ರತಿಜ್ಞೆ ಮಾಡಿದರು. ಹೆಲ್ಮೆಟ್ ಧರಿಸುವುದು ಪೊಲೀಸರಿಂದ ದಂಡ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲ, ಬದಲಾಗಿ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎಂಬುದನ್ನು ಅವರು ಒತ್ತಿ ಹೇಳಿದರು. ಇದು ನಮ್ಮ ಜೀವನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಾವೇ ತೆಗೆದುಕೊಳ್ಳಬೇಕೆಂಬ ಸಂದೇಶವನ್ನು ಸಾರಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *