BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಟೀಂ ಇಂಡಿಯಾದ ಮಾಜಿ ನಾಯಕ, ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಆಟಗಾರನಾಗಿ ಆ ಬಳಿಕ ತಂಡದ ನಾಯಕನಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ನಿವೃತ್ತಿಯ ಬಳಿಕ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಅವರ ಕೋಚಿಂಗ್​ನಡಿಯಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಕೋಚಿಂಗ್​ನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ಪ್ರಸ್ತುತ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಹೀಗೆ ತನ್ನ ನಿಸ್ವಾರ್ಥ ಸೇವೆಯಿಂದ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿರುವ ದ್ರಾವಿಡ್​ಗೆ ಮಾರ್ಚ್ 15 ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ನಮನ್ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಗೌರವಕ್ಕೆ ಭಾಜನರಾಗಲಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವಂತೆ ರಾಹುಲ್ ದ್ರಾವಿಡ್ ಅವರಿಗೆ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಟೀಂ ಇಂಡಿಯಾದ ‘ಬಿಗ್ ಫೋರ್’ ಬ್ಯಾಟಿಂಗ್ ಲೈನ್ ಅಪ್​ನ ಭಾಗವಾಗಿದ್ದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್​ತಂತಹ ದಿಗ್ಗಜರ ಪಟ್ಟಿಯಲ್ಲಿ ಒಬ್ಬರಾಗಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ದ್ರಾವಿಡ್​ಗೆ ‘ದಿ ವಾಲ್’ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.

ಏಕದಿನ ಮಾದರಿಯಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2012 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ದ್ರಾವಿಡ್, ಆ ಬಳಿಕ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡರು. ನಂತರ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್, ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್​ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

Source link

Leave a Reply

Your email address will not be published. Required fields are marked *