ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಭಾರತ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದರೆ ಕಿವೀಸ್ ತಂಡವು ನಾಲ್ಕನೇ ಪಂದ್ಯದಲ್ಲಿ ಭಾರತವನ್ನು 50 ರನ್ಗಳಿಂದ ಸೋಲಿಸುವ ಮೂಲಕ ಸತತ ಸೋಲಿನ ಸರಪಳಿ ಮುರಿದಿದೆ. ಇದೀಗ ಸರಣಿಯ ಕೊನೆಯ ಮತ್ತು ಐದನೇ ಪಂದ್ಯವು ಈಗ ತಿರುವನಂತಪುರದ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಸ್ಮರಣೀಯ ಪಂದ್ಯವಾಗಿದೆ.
ಸಂಜು ಸ್ಯಾಮ್ಸನ್ಗೆ ವಿಶೇಷ ಪಂದ್ಯ
ಈ ಸರಣಿಯು ಇಲ್ಲಿಯವರೆಗೆ ಸಂಜು ಸ್ಯಾಮ್ಸನ್ಗೆ ನಿರಾಶಾದಾಯಕವಾಗಿದೆ. ಇಲ್ಲಿಯವರೆಗೆ ಆಡಿರುವ 4 ಪಂದ್ಯಗಳಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ತಮ್ಮ ಫಾರ್ಮ್ ಕಂಡುಕೊಳ್ಳುವ ಒತ್ತಡದಲ್ಲಿರುವ ಸಂಜುಗೆ ಉತ್ತಮ ಅವಕಾಶ ಸಿಕ್ಕಿದೆ. ಏಕೆಂದರೆ ಸಂಜು ಇದೇ ಮೊದಲ ಬಾರಿಗೆ ತಮ್ಮ ತವರು ನೆಲದಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ತಿರುವನಂತಪುರಂ ಕ್ರೀಡಾಂಗಣದಲ್ಲಿ ಸಂಜು ಬಾಲ್ಯದಿಂದಲೂ ಆಡುತ್ತಿದ್ದು, ಈಗ ಭಾರತೀಯ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.
ಹೀಗಾಗಿ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕೂಡ ಕಾದು ಕುಳಿತಿದ್ದು, ಈ ಪಂದ್ಯವನ್ನು ಸುಮಾರು 55,000 ಅಭಿಮಾನಿಗಳು ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ. ಸಂಜು ಸ್ಯಾಮ್ಸನ್ ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಆಡುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಸಂಜು ಸ್ಯಾಮ್ಸನ್ಗೆ ಕೊನೆಯ ಅವಕಾಶ
ಈ ಸರಣಿಯಲ್ಲಿ ಇದುವರೆಗೆ ನಾಲ್ಕು ಇನ್ನಿಂಗ್ಸ್ಗಳಲ್ಲಿ ಸಂಜು ಸ್ಯಾಮ್ಸನ್ ಕೇವಲ 40 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು 10 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಅವರು ಖಾತೆ ತೆರೆಯಲು ಸಾಧ್ಯವಾಗದೆ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಔಟಾಗಿದ್ದರು. ನಂತರ ನಾಲ್ಕನೇ ಪಂದ್ಯದಲ್ಲಿ 24 ರನ್ ಗಳಿಸುವ ಮೂಲಕ ಅವರು ಮತ್ತೆ ಬ್ಯಾಕ್ ಅಪ್ ಮಾಡಲು ಪ್ರಯತ್ನಿಸಿದರು. ಈಗ, ಸರಣಿಯ ಐದನೇ ಪಂದ್ಯವು ಟಿ20 ವಿಶ್ವಕಪ್ಗೆ ಮುನ್ನ ಅವರ ಕೊನೆಯ ಅವಕಾಶವಾಗಿದೆ, ಏಕೆಂದರೆ ಇದರ ನಂತರ ಟೀಂ ಇಂಡಿಯಾ ಯಾವುದೇ ಸರಣಿಯನ್ನು ಆಡುವುದಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಸಂಜು ಒಂದೊಳ್ಳೆ ಇನ್ನಿಂಗ್ಸ್ ಆಡುವ ಮೂಲಕ ತವರು ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ