
ಬೆಂಗಳೂರು, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಮಾರ್ಚ್ 6) ವಿಧಾನಸಭೆಯಲ್ಲಿ ಕರ್ನಾಟಕ ಬಜೆಟ್ 2026-27 (Karnataka Budget 2026) ಮಂಡಿಸಿದರು. ಹಲವು ಜಿಲ್ಲೆಗಳ ಮೂಲಸೌಕರ್ಯ, ಆರೋಗ್ಯ, ನೀರಾವರಿ, ಸಾರಿಗೆ, ವಾಣಿಜ್ಯ ಕ್ಷೇತ್ರಗಳ ನಾನು ಯೋಜನೆಗೆ ಅನುದಾನ ನೀಡಿದ್ದಾರೆ. ಇನ್ನು ಈ ಬಜೆಟ್ನಲ್ಲಿ 7 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.
ಬಜೆಟ್ನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳು ಇಂತಿವೆ
1.ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಕೃಷಿ ಸಂಸ್ಕರಣೆ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲಪಡಿಸಲು ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲ ರಚಿಸಲು ಈ ಯೋಜನೆ ಪೂರಕವಾಗಿದೆ. ಈ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್ ಮುಖ್ಯಾಂಶ ಇಲ್ಲಿದೆ
2.ವಸುಧಾಮೃತ ಕಾರ್ಯಕ್ರಮ: ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮುಂದಿನ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ.
3.ಸಸ್ಯ ಸಂಜೀವಿನಿ ಯೋಜನೆ: ಪರಿಸರ ಸ್ನೇಹಿ ಜೈವಿಕ ಪೀಡನಾಶಕ, ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳಿಗಾಗಿ ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿ ಮಾಡುವ ಉದ್ದೇಶವಿದೆ.
4.ಫಲಧಾರೆ ಕಾರ್ಯಕ್ರಮ: ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ಈ ಕಾರ್ಯಕ್ರಮದಡಿ ಶಿಬಿರಗಳ ಆಯೋಜನೆ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ 1000 ಗ್ರಾಮ ಪಂಚಾಯತಿಗಳಲ್ಲಿ “ಫಲಧಾರೆ” ಎಂಬ ಹೆಸರಿನಲ್ಲಿ ಶಿಬಿರ ನಡೆಸಲಾಗುವುದು.
5.ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ: 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ 2,500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.
6.ಕೇರಳ ಮಾದರಿಯ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಗೃಹಾಧಾರಿತ ಉಪಶಮನ ಆರೈಕೆ:
ಮನೆಗಳಲ್ಲೇ ಚಿಕಿತ್ಸಾ ಸೇವೆ, ಗಂಭೀರ ದೀರ್ಘಕಾಲೀನ, ಮಾರಣಾಂತಿಕ ಕಾಯಿಲೆಗಳಿರುವ ರೋಗಿಗಳಿಗೆ ಈ ಯೋಜನೆಯಡಿ ಆರೈಕೆ ಮಾಡಲಾಗುವುದು. Palliym India ಸಂಸ್ಥೆಯ ಸಹಯೋಗದೊಂದಿಗೆ ಯೋಜನೆಯನ್ನು ಜಾರಿಗೊಳಿಸಲಾಗುವುದು.
7.ಮುಖ್ಯಮಂತ್ರಿ ಸೌರ ಕೃಷಿ ಯೋಜನೆ: ಈ ಯೋಜನೆಯಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಮಾಡಲಾಗುವುದು. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳ ಆರಂಭಗೊಳಿಸಲು ನಿರ್ಧರಿಸಲಾಗಿದೆ.
ಹೀಗೆ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದು, ಇವುಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಿದೆ.