
ಈ ದಿನ ಗಣಪತಿ ಅಥರ್ವಶೀರ್ಷ ಪಠಣ ಅಥವಾ ಶ್ರವಣ ಮಾಡಿ. ಗಣಪತಿ ಅಥರ್ವಶೀರ್ಷವನ್ನು ಪಠಿಸುವುದರಿಂದ ಸಕಲ ವಿಘ್ನಗಳು ನಿವಾರಣೆಯಾಗುತ್ತವೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಹಳೇ ವಿಚಾರಗಳನ್ನು ಕೆದಕುವುದಕ್ಕೆ ಹೋಗಬೇಡಿ. ತಂದೆ ಅಥವಾ ತಂದೆ ಸಮಾನರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ನೀವು ಬಹಳ ಉತ್ಸಾಹದಿಂದ ಮಾಡಿದ ಕೆಲಸಗಳು, ನಿರ್ಧಾರಗಳನ್ನು ಇತರರು ಬಹಳ ಕಡಿಮೆ ಮಾಡಿ ಮಾತನಾಡುವ ಸಾಧ್ಯತೆ ಇದೆ. ಈ ಕೆಲಸದಲ್ಲಿ ನೀವು ಹಾಕಿದ ಶ್ರಮ, ತೋರಿಸಿದ ನಿಷ್ಠೆ ಗೊತ್ತಿರುವ ವ್ಯಕ್ತಿಗಳು ಸಹ ಇಂಥ ಸನ್ನಿವೇಶದಲ್ಲಿ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವೃತ್ತಿನಿರತರಿಗೆ ಒಂದು ಬಗೆಯ ನಿರಾಸಕ್ತಿ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ನಿದ್ದೆಯ ಸಮಸ್ಯೆ ಕೂಡ ಆಗಬಹುದು. ಒಂದು ವೇಳೆ ಇದು ಗಂಭೀರವಾದ ಸಮಸ್ಯೆ ಎಂದೇನಾದರೂ ಎನಿಸಿದಲ್ಲಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಒಳ್ಳೆಯದು. ಲೇವಾದೇವಿ ವ್ಯವಹಾರ ಮಾಡುವಂಥವರಿಗೆ ಕೆಲವು ಬೆಳವಣಿಗೆಗಳಿಂದ ಆತಂಕ ಕಾಡಲು ಆರಂಭ ಆಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ದಿಢೀರನೇ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗಲಿದೆ. ನಿಮ್ಮ ಸ್ನೇಹಿತರಿಗೋ ಅಥವಾ ಆಪ್ತರಿಗೋ ಮಾಡಿಕೊಡಬೇಕು ಎಂದುಕೊಂಡ ವಾಹನ, ಸೈಟು ಅಥವಾ ಮನೆಯನ್ನು ನೀವೇ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೀವು ಇದಕ್ಕಾಗಿ ಬಹಳ ಶ್ರಮ ಪಟ್ಟಿರುತ್ತೀರಿ. ಆದರೆ ನೀವು ಯಾರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಷ್ಟೆಲ್ಲ ಶ್ರಮ ಹಾಕಿರುತ್ತೀರೋ ಆ ವ್ಯಕ್ತಿಯೇ ಅದನ್ನು ಸದ್ಯಕ್ಕೆ ಬೇಡ ಎಂದು ಹೇಳುವಂಥ ಸಾಧ್ಯತೆಗಳಿವೆ.
ಲೇಖನ- ಸ್ವಾತಿ ಎನ್.ಕೆ.