
ನವದೆಹಲಿ, ಮಾರ್ಚ್ 23: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್ನಲ್ಲಿ ಇಂದು ಪ್ರಧಾನಿಗಳು ಪಶ್ಚಿಮ ಏಷ್ಯಾ ಯುದ್ಧ ಹಾಗೂ ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ತಮ್ಮ ಸರ್ಕಾರ ಈ ಬಿಕ್ಕಟ್ಟು ಎದುರಿಸಲು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಹಾರ್ಮುಜ್ ಸ್ಟ್ರೇಟ್ಗೆ ತಡೆಯಾಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಸಾಧ್ಯವಿರುವೆಡೆಯೆಲ್ಲಾ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಭಾರತದ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗ ಇದೆ. ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲ ಪೂರೈಕೆಯ ಮೂಲವೂ ಇಲ್ಲಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
‘ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಕಠಿಣವಾಗಿದೆ. ಕಚ್ಛಾ ತೈಲ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಪರಿಣಾಮ ಬಿದ್ದಿದೆ. ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಹೆಚ್ಚಿನ ವ್ಯತ್ಯಯ ಆಗದಂತೆ ಎಚ್ಚರ ವಹಿಸುತ್ತಿದೆ. ಜನರು ಅನುಭವಿಸುತ್ತಿರುವ ಕಷ್ಟವನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಮೋದಿ ವಿವರಿಸಿದ್ದಾರೆ.
ಇದನ್ನೂ ಓದಿ: ರುಪಾಯಿ ಮತ್ತಷ್ಟು ಕುಸಿತ; ಪ್ರಪ್ರಥಮ ಬಾರಿಗೆ 94ರ ಮಟ್ಟಕ್ಕೆ ಇಳಿಕೆ; ಭಾರತೀಯ ಕರೆನ್ಸಿ ಮೌಲ್ಯ ಕುಸಿಯಲು ಏನು ಕಾರಣ?
ಯುದ್ಧದಿಂದಾಗಿ ಭಾರತ ಮಾತ್ರವಲ್ಲ, ಜಾಗತಿಕವಾಗಿಯೂ ತೈಲ ಹಾಗೂ ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಇದು ಎಲ್ಲಾ ದೇಶಗಳಿಗೂ ಸವಾಲಿನ ಸ್ಥಿತಿ ತಂದಿದೆ. ಇರಾನ್ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಕ್ಕಟ್ಟು ಉದ್ಭವಗೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿಗಳು ಸಂಸತ್ನಲ್ಲಿ ಆ ಬಗ್ಗೆ ಮಾತನಾಡಿರುವುದು.
ದೇಶದ ಜನರನ್ನು ಉದ್ದೇಶಿಸಿ ಮೋದಿ ಅವರು ಈ ಮೊದಲು ಮಾತನಾಡದೇ ಹೋದರೂ ತೈಲ ಮತ್ತು ಅನಿಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತೈಲ ಮತ್ತು ಗ್ಯಾಸ್ ಪೂರೈಕೆಗೆ ಇರಾನ್ ಜೊತೆಗೂ ಮಾತನಾಡುತ್ತಿದ್ದಾರೆ. ಇತರ ಪರ್ಯಾಯ ಮಾರುಕಟ್ಟೆಗಳನ್ನೂ ಮುಟ್ಟುತ್ತಿದ್ದಾರೆ.
ಇದನ್ನೂ ಓದಿ: ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು 18 ಕೋಟಿ ರೂ. ಟೋಲ್ ಕಟ್ಬೇಕಾ?
ಈ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಪ್ರಧಾನಿಯವರು ಸಚಿವರು ಹಾಗೂ ಕಾರ್ಯದರ್ಶಿಗಳ ಒಂದು ತಂಡವನ್ನು ರಚಿಸಲು ನಿರ್ದೇಶನ ನೀಡಿದ್ದಾರೆ. ಎಲ್ಪಿಜಿ ಲಭ್ಯತೆ ಹೆಚ್ಚಿಸಲು ವಿವಿಧ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ